ಗಂಗೊಳ್ಳಿ; ಸರಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ವಂಚನೆ: ದೂರು

ಗಂಗೊಳ್ಳಿ, ಆ.7: ಸರಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ ಲಕ್ಷಾಂತರ ರೂ. ಪಡೆದು ವಂಚನೆ ಮಾಡಿರುವ ಘಟನೆ ತ್ರಾಸಿ ಎಂಬಲ್ಲಿ ನಡೆದಿದೆ.
ತ್ರಾಸಿ ನಿವಾಸಿ ರೆಹಾನ್ ಅಹ್ಮದ್ ಎಂಬವರು ಹಣ ಕಳೆದುಕೊಂಡ ವ್ಯಕ್ತಿ. ಇವರಿಗೆ ಒಂದು ವರ್ಷದ ಹಿಂದೆ ಲತೇಶ್ ಸಂಜೀವ ಕುಂಬ್ಲೆ ಎಂಬವರ ಪರಿಚಯವಾಗಿತ್ತು. ಆತ ತನಗೆ ದೊಡ್ಡ ದೊಡ್ಡ ರಾಜಕಾರಣಿಗಳ ಪರಿಚಯ ಇದೆಯೆಂದು ಕೆಲವು ರಾಜಕಾರಣಿಗಳ ಜೊತೆ ತೆಗೆಸಿಕೊಂಡಿರುವ ಫೋಟೋ ಗಳನ್ನು ತೋರಿಸಿದ್ದಾನೆ. ಅಲ್ಲದೆ, ರೆಹಾನ್ ಅವರ ಅಕ್ಕ ಸಬೀನಾ ಅಖ್ತರ್ ಅವರಿಗೆ ಸರಕಾರಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿ, 10 ಲಕ್ಷ ರೂ. ಕೇಳಿದ್ದನು.
ಅದರಂತೆ ರೆಹಾನ್ ಬ್ಯಾಂಕ್ ಖಾತೆಯ ಮೂಲಕ ಹಣ ವರ್ಗಾವಣೆ ಮಾಡಿದ್ದಾರೆ. ಆದರೆ, ಈವರೆಗೂ ಕೆಲಸವನ್ನು ಕೊಡಿಸಿಲ್ಲ. ಅದನ್ನು ಪ್ರಶ್ನಿಸಿದಾಗ ಆರೋಪಿ ಲತೇಶ್ ಆರು ಲಕ್ಷ ರೂ. ವಾಪಾಸು ನೀಡುವುದಾಗಿ ಹೇಳಿ, ಬ್ಯಾಂಕಿನ ಚೆಕ್ನ್ನು ನೀಡಿದ್ದನು. ಅದನ್ನು ಬ್ಯಾಂಕ್ಗೆ ಹಾಕಿದಾಗ ಚೆಕ್ ಬೌನ್ಸ್ ಆಗಿದೆ. ಆರೋಪಿ ಕೆಲಸ ಕೊಡಿಸುವುದಾಗಿ ನಂಬಿಸಿ ಹಣ ಪಡೆದುಕೊಂಡು ಬಳಿಕ ಕೆಲಸ ಕೊಡಿಸದೆ ಮೋಸ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಕುಂದಾಪುರ ನ್ಯಾಯಾಲಯದಲ್ಲಿ ದಾಖಲಾದ ಖಾಸಗಿ ದೂರಿನಂತೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.