ಬಿಹಾರ ರಾಜಕೀಯ ಬಿಕ್ಕಟ್ಟು: ತೇಜಸ್ವಿ ಯಾದವ್ರೊಂದಿಗೆ ರಾಜ್ಯಪಾಲರನ್ನು ಭೇಟಿಯಾಗಲಿರುವ ನಿತೀಶ್ ಕುಮಾರ್
ಪಾಟ್ನಾ: ಆಡಳಿತಾರೂಢ ಜೆಡಿಯು-ಬಿಜೆಪಿ ಮೈತ್ರಿಕೂಟದಲ್ಲಿನ ಗೊಂದಲದ ನಡುವೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಇಂದು ಸಂಜೆ 4 ಗಂಟೆಗೆ ಆರ್ಜೆಡಿ ನಾಯಕ ತೇಜಸ್ವಿ ಯಾದವ್ ರೊಂದಿಗೆ (Tejasvi Yadav) ಬಿಹಾರ ರಾಜ್ಯಪಾಲ ಫಾಗು ಚೌಹಾಣ್ ಅವರನ್ನು ಭೇಟಿಯಾಗಲಿದ್ದಾರೆ. ಇಂದು ಬೆಳಗ್ಗೆ ಜೆಡಿಯು ಮತ್ತು ಪ್ರತಿಪಕ್ಷ ಆರ್ಜೆಡಿ ಪಾಟ್ನಾದಲ್ಲಿ ತಮ್ಮ ಶಾಸಕರ ಪ್ರತ್ಯೇಕ ಸಭೆಗಳನ್ನು ನಡೆಸಿವೆ.
ಈ ನಡುವೆ, ನಿತೀಶ್ ಕುಮಾರ್ (Nitish Kumar) ನೇತೃತ್ವದ ಪಕ್ಷದ ನಾಯಕರು ಇತ್ತೀಚೆಗೆ ನಡೆದ ಸಭೆಯು ಸಾಮಾನ್ಯವಾದುದಲ್ಲ ಎಂದು ಹೇಳಿದ್ದಾರೆ. "ನಮ್ಮ ಪಕ್ಷವು ಈ ಹಿಂದೆ ಸಂಸದರು ಮತ್ತು ಶಾಸಕರ ಇಂತಹ ಹಲವು ಸಭೆಗಳನ್ನು ನಡೆಸಿತ್ತು. ಸಾಂಸ್ಥಿಕ ವಿಷಯಗಳ ಬಗ್ಗೆ ಚರ್ಚಿಸಲು ಪ್ರಸ್ತುತ ಸಭೆ ಕರೆಯಲಾಗಿದೆ ಎಂದು ನಮಗೆ ತಿಳಿಸಲಾಗಿದೆ. ಎನ್ಡಿಎಯಲ್ಲಿ ಯಾವುದೇ ದೊಡ್ಡ ಬಿಕ್ಕಟ್ಟಿನ ಬಗ್ಗೆ ಕೇಳಿಲ್ಲ" ಎಂದು ರಾಜ್ಯಸಭಾ ಸಂಸದ ರಾಮ್ ನಾಥ್ ಠಾಕೂರ್ ಪಿಟಿಐಗೆ ತಿಳಿಸಿದರು.
ಉಪಮುಖ್ಯಮಂತ್ರಿ ತಾರ್ಕಿಶೋರ್ ಪ್ರಸಾದ್ ಅವರ ನಿವಾಸದಲ್ಲಿಯೂ ಬಿಜೆಪಿ ಸಭೆ ನಡೆಸುತ್ತಿದ್ದು, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸಂಜಯ್ ಜೈಸ್ವಾಲ್ ಸಹ ಉಪಸ್ಥಿತರಿದ್ದಾರೆ ಎಂದು ತಿಳಿದು ಬಂದಿದೆ.