ಮಂಗಳೂರು: ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಆರೋಪ; ನಾಲ್ವರ ಬಂಧನ
ಮಂಗಳೂರು(Mangaluru): ಗಾಂಜಾ ಸೇವಿಸಿ ಪೊಲೀಸರ ಕರ್ತವ್ಯಕ್ಕೆ ನಾಲ್ಕು ಮಂದಿ ಅಡ್ಡಿಪಡಿಸಿದ ಆರೋಪದ ಮೇರೆಗೆ ಪಾಂಡೇಶ್ವರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಪಾಂಡೇಶ್ವರ ಠಾಣೆಯ ಎಸ್ಸೈ ಶೀತಲ್ ಅಗಲೂರು ಸಿಬ್ಬಂದಿಗಳೊಂದಿಗೆ ಗಸ್ತು ಕರ್ತವ್ಯದಲ್ಲಿದ್ದಾಗ ನಗರ ನಲಪಾಡ್ ಕುನಿಲ್ ಟವರ್ ಅಪಾಟ್ಮೆಂಟ್ಗೆ ಹೋಗುವ ಒಳ ರಸ್ತೆಯ ಬಳಿ ಕೇರಳದ ಪಟ್ಟನಕಾಡು ನಿವಾಸಿ ನದೀಶ್ ಪಿ.ಎನ್ (35) ಮತ್ತು ಕಸಬಾ ಬೆಂಗರೆಯ ರಿಯಾಝ್ (25) ಎಂಬವರು ಅನುಮಾನಾಸ್ಪದವಾಗಿ ನಿಂತಿದ್ದರು. ಮಾದಕ ವಸ್ತು ಸೇವಿಸಿರುವ ಶಂಕೆಯ ಮೇಲೆ ವಿಚಾರಿಸಿದಾಗ ಅವಾಚ್ಯ ಶಬ್ದಗಳಿಂದ ಬೈದು ಪೊಲೀಸರಿಗೆ ಹಲ್ಲೆಗೈದು ದೂಡಿ ಹಾಕಿ ತಪ್ಪಿಸಿಕೊಂಡು ಓಡಲು ಯತ್ನಿಸಿದ್ದರು. ತಕ್ಷಣ ಪೊಲೀಸರು ಇಬ್ಬರನ್ನೂ ಬಂಧಿಸಿ ಕಾನೂನು ಕ್ರಮ ಜರಗಿಸಿದ್ದಾರೆ.
►ಪಾಂಡೇಶ್ವರ ಠಾಣೆಯ ಹೆಡ್ ಕಾನ್ಸ್ಟೇಬಲ್ ಪುಟ್ಟರಾಮ್ ಸಿಬ್ಬಂದಿ ಶಿವಾನಂದ ಬಿರಾದರ ಜೊತೆ ರವಿವಾರ ಅಪರಾಹ್ನ ರೊಸಾರಿಯೋ ಜಂಕ್ಷನ್ ಬಳಿ ಕರ್ತವ್ಯದಲ್ಲಿದ್ದಾಗ ಎಂ.ಶಮೀರ್ ಹಾಗೂ ಬಿ. ಅಹ್ಮದ್ ಅಜೀಮ್ ಎಂಬವರನ್ನು ಮಾದಕ ವಸ್ತು ಸೇವಿಸಿರುವ ಶಂಕೆಯ ಮೇಲೆ ವಿಚಾರಿಸಿದಾಗ ಇಬ್ಬರೂ ಸೂಕ್ತ ಕಾರಣ ನೀಡದೆ ಉಡಾಫೆಯಿಂದ ವರ್ತಿಸಿದಲ್ಲದೆ ದೂಡಿ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಬಂಧಿಸಿ ಕಾನೂನು ಕ್ರಮ ಜರಗಿಸಲಾಗಿದೆ.
►ನಗರದ ಮೋರ್ಗನ್ಸ್ ಗೇಟ್ ಗ್ರೌಂಡ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವಿಸಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದ ಆರೋಪದ ಮೇರೆಗೆ ಸಜಿಪ ಮುನ್ನೂರು ಗ್ರಾಮದ ನಂದಾವರ ಕೋಟೆಯ ಮುಹಮ್ಮದ್ ಶರೀಫ್ (27) ಎಂಬಾತನನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ಕೇಸರಿ ಧ್ವಜ ಹಿಡಿದ ಮಹಿಳೆಯ ಚಿತ್ರದ ಕಾರ್ಯಕ್ರಮ ಏಕೆ?