ಹಳ್ಳಿಗಳಲ್ಲಿದ್ದ ಸ್ವಾತಂತ್ರ್ಯ ಸೇನಾನಿಗಳನ್ನೂ ಸ್ಮರಿಸಿ: ಫಾ.ವಿಲಿಯಂ ಮಾರ್ಟಿಸ್
ರಾಷ್ಟ್ರಧ್ವಜದೊಂದಿಗಿನ ವಿದ್ಯಾರ್ಥಿಗಳ ಪಥಸಂಚಲನಕ್ಕೆ ಚಾಲನೆ
![ಹಳ್ಳಿಗಳಲ್ಲಿದ್ದ ಸ್ವಾತಂತ್ರ್ಯ ಸೇನಾನಿಗಳನ್ನೂ ಸ್ಮರಿಸಿ: ಫಾ.ವಿಲಿಯಂ ಮಾರ್ಟಿಸ್ ಹಳ್ಳಿಗಳಲ್ಲಿದ್ದ ಸ್ವಾತಂತ್ರ್ಯ ಸೇನಾನಿಗಳನ್ನೂ ಸ್ಮರಿಸಿ: ಫಾ.ವಿಲಿಯಂ ಮಾರ್ಟಿಸ್](https://www.varthabharati.in/sites/default/files/images/articles/2022/08/10/345417-1660140709.jpg)
ಉಡುಪಿ: ನಾವು ದೇಶದ 75ನೇ ಸ್ವಾತಂತ್ರ್ಯದ ಅಮೃತಮಹೋತ್ಸವದ ಸಂಭ್ರಮದಲ್ಲಿದ್ದೇವು. ನಮ್ಮ ಹಳ್ಳಿಹಳ್ಳಿಗಳಲ್ಲಿ ಸ್ವಾತಂತ್ರ್ಯದ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ ಅನೇಕ ಮಹನೀಯರಿದ್ದು, ಅವರನ್ನು ಗುರುತಿಸಿ ಸ್ಮರಿಸುವುದರ ಜೊತೆಯಲ್ಲಿ ಇಂದಿನ ಪೀಳಿಗೆಗೆ ಅವರನ್ನು ಪರಿಚಯಿಸುವ ಕಾರ್ಯ ನಡೆಯಬೇಕೆಂದು ಧರ್ಮಗುರು ರೆ.ಫಾ.ವಿಲಿಯಮ್ ಮಾರ್ಟಿಸ್ ಹೇಳಿದ್ದಾರೆ.
ಭಾರತ ಸೇವಾದಳ ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ ಹರ್ ಘರ್ ತಿರಂಗಾ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾದ ಸಂತಮೇರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳೊಂದಿಗೆ ರಾಷ್ಟ್ರಧ್ವಜ ಹಿಡಿದು ನಗರ ಪಥಸಂಚಲನ ಕಾರ್ಯಕ್ರಮವನ್ನು ಬುಧವಾರ ಉಡುಪಿ ಶೋಕ ಮಾತಾ ಇಗರ್ಜಿ ಆವರಣದಲ್ಲಿ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಅಧ್ಯಕ್ಷತೆ ವಹಿಸಿದ ಜಿಲ್ಲಾ ಭಾರತ ಸೇವಾದಳದ ಅಧ್ಯಕ್ಷ ಅಂಡಾರು ದೇವಿ ಪ್ರಸಾದ್ ಶೆಟ್ಟಿ ಮಾತನಾಡಿ, ಸ್ವಾತಂತ್ರ್ಯದ ಅಮೃತಮಹೋತ್ಸವದ ಪ್ರಯುಕ್ತ ಅಗಸ್ಟ್ ೧೩ರಿಂದ ೧೫ರ ಪರ್ಯಂತ ಪ್ರತೀ ಮನೆಮನೆಗಳಲ್ಲೂ ರಾಷ್ಟ್ರಧ್ವಜ ಹಾರಿ ಸುವ ನಿಟ್ಟಿನಲ್ಲಿ ಜನಜಾಗೃತಿ ಮೂಡಿಸುವುದರ ಜೊತೆಗೆ ವಿದ್ಯಾರ್ಥಿಗಳಲ್ಲಿ ದೇಶಭಕ್ತಿ, ರಾಷ್ಟ್ರೀಯ ಭಾವೈಕ್ಯತೆ, ಧ್ವಜದ ಮಹತ್ವವನ್ನು ತಿಳಿಸುವುದು ಅಗತ್ಯ ವಾಗಿದೆ. ಇಂದಿನ ವಿದ್ಯಾರ್ಥಿಗಳೇ ಮುಂದಿನ ನಾಯಕರಾಗಿದ್ದು ಅವರಲ್ಲಿ ರಾಷ್ಟ್ರಪ್ರೇಮ ಸ್ಥಾಪಿತವಾದಾಗ ದೇಶ ಸುರಕ್ಷಿತವಾಗಿರುತ್ತದೆ ಎಂದರು.
ಭಾರತ ಸೇವಾದಳ ಕೇಂದ್ರೀಯ ಕಾರ್ಯಕಾರಿಣಿ ಸದಸ್ಯ ಆರೂರು ತಿಮ್ಮಪ್ಪ ಶೆಟ್ಟಿ, ಜಿಲ್ಲಾ ಸಮಿತಿಯ ಕೋಶಾಧಿಕಾರಿ ನಿವೃತ್ತ ಮುಖ್ಯ ಶಿಕ್ಷಕ ಹೆರಾಲ್ಡ್ ಡಿಸೋಜ, ಜಿಲ್ಲಾ ಸಮಿತಿ ಸದಸ್ಯ ಜಿಲ್ಲಾ ಸಮಿತಿ ಸದಸ್ಯರಾದ ಬಿ.ಪುಂಡಲೀಕ ಮರಾಠೆ ಶಿರ್ವ, ಜಯಲಕ್ಷ್ಮೀ, ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಬೋನಿಪಾಸ್ ಡಿಸೋಜ, ಶಾಲಾ ಎಸ್ಡಿಎಂಸಿ ಅಧ್ಯಕ್ಷ ಬಾಲಕೃಷ್ಣ, ಸೇವಾದಳ ಶಿಕ್ಷಕಿಯರಾದ ಜೆಸಿಂತಾ ಅಲ್ಮೇಡಾ, ವನಿತಾ ನಾಯಕ್, ಎಎಸ್ಸೈ ವಿಜಯ್. ಜಯಕರ್, ಚೇತನ್ ಮೊದಲಾದವರು ಉಪಸ್ಥಿತರಿದ್ದರು.
ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಜೋಯ್ಸ್ ಡೇಸಾ ಸ್ವಾಗತಿಸಿದರು. ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಮೇರಿ ಕ್ರಾಸ್ತಾ ವಂದಿಸಿದರು. ಭಾರತ ಸೇವಾದಳದ ಜಿಲ್ಲಾ ಸಂಘಟಕ ಪಕ್ಕೀರಗೌಡ ಹಳೆಮನಿ ಕಾರ್ಯಕಮ್ರ ಸಂಯೋಜಿಸಿದ್ದರು. ವಿದ್ಯಾರ್ಥಿ ಗಳ ನಗರ ಪಥಸಂಚಲನ ದೇಶಭಕ್ತಿ ಗೀತೆ, ಜಯಘೋಷಣೆಗಳೊಂದಿಗೆ ಬಸ್ ನಿಲ್ದಾಣದವರೆಗೆ ಸಾಗಿತು. ಕೇಂದ್ರಭಾಗಲ್ಲಿರುವ ಗಾಂಧೀ ಪ್ರತಿಮೆಗೆ ಮಾಲಾ ರ್ಪಣೆ ಮಾಡಲಾಯಿತು. ಪಥ ಸಂಚಲನವು ಶಾಲಾ ಆವರಣದಲ್ಲಿ ಸಮಾಪನಗೊಂಡಿತು.