ಮಟ್ಟು: ಮಳೆಯಿಂದ ಮನೆ ಸಂಪೂರ್ಣ ಹಾನಿ
ಫೈಲ್ ಫೋಟೊ
ಉಡುಪಿ : ಭಾರೀ ಮಳೆಯಿಂದ ಕಾಪು ವಿಧಾನಸಭಾ ಕ್ಷೇತ್ರದ ಕಟಪಾಡಿ ಸಮೀಪದ ಮಟ್ಟುವಿನ ಸೂರಪ್ಪ ಎಂಬವರ ಮನೆ ಸಂಪೂರ್ಣ ಹಾನಿಗೊಂಡಿದ್ದು, ಒಂದೂವರೆ ಲಕ್ಷ ರೂ.ಗಳಿಗೂ ಅಧಿಕ ನಷ್ಟ ಸಂಭವಿಸಿದೆ ಎಂದು ವರದಿ ತಿಳಿಸಿದೆ.
ಅದೇ ರೀತಿ ಕುಂದಾಪುರ ತಾಲೂಕು ಹಳ್ಳಾಡಿ ಹರ್ಕಾಡಿಯ ಪರಮೇಶ್ವರ ಎಂಬವರ ಮನೆಯೂ ಇತ್ತೀಚಿನ ಗಾಳಿ-ಮಳೆಯಿಂದ ಭಾಗಶ: ಹಾನಿಗೊಳಗಾ ಗಿದ್ದು, ೫೦ಸಾವಿರ ರೂ.ನಷ್ಟದ ಅಂದಾಜು ಮಾಡಲಾಗಿದೆ.
ಇಂದು ಬೆಳಗ್ಗೆ ೮:೩೦ಕ್ಕೆ ಕೊನೆಗೊಂಡಂತೆ ಹಿಂದಿನ ೨೪ ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ ೩೦ಮಿ.ಮೀ. ಮಳೆ ಬಿದ್ದಿದೆ. ಬೈಂದೂರು ತಾಲೂಕಿನಲ್ಲಿ ೩೭.೨ಮಿ.ಮೀ., ಹೆಬ್ರಿಯಲ್ಲಿ ೩೪.೮, ಕುಂದಾಪುರದಲ್ಲಿ ೩೨.೨, ಕಾರ್ಕಳದಲ್ಲಿ ೨೮.೯, ಉಡುಪಿಯಲ್ಲಿ ೨೮.೭, ಕಾಪುವಿನಲ್ಲಿ ೧೮.೩ ಹಾಗೂ ಬ್ರಹ್ಮಾವರದಲ್ಲಿ ೧೭.೫ಮಿ.ಮೀ. ಮಳೆ ಬಿದ್ದಿದೆ ಎಂದು ವರದಿಯಾಗಿದೆ.
ಜಿಲ್ಲೆಯಲ್ಲಿ ಇನ್ನೂ ಎರಡು ದಿನ ಆ.೧೩ ಮತ್ತು ೧೪ರಂದು ಆರೆಂಜ್ ಅಲರ್ಟ್ನ್ನು ಘೋಷಿಸಲಾಗಿದೆ. ಬಲವಾದ ಗಾಳಿ ಬೀಸುವ ಸಂಭವವಿರುವು ದರಿಂದ, ಸಮುದ್ರ ಪ್ರಕ್ಷುಬ್ಧವಾಗಿರಲಿದ್ದು, ೩.೫ರಿಂದ ೪.೫ಮೀ. ಎತ್ತರದ ಅಲೆಗಳು ಏಳುವ ಸಾಧ್ಯತೆಯ ಹಿನ್ನೆಲೆಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.