ರಾಷ್ಟ್ರಧ್ವಜಕ್ಕೆ ಅಗೌರವ ಉಂಟಾಗದಂತೆ ನೋಡಿಕೊಳ್ಳಿ: ಉಡುಪಿ ಜಿಲ್ಲಾಧಿಕಾರಿ

ಉಡುಪಿ, ಆ.11: ಹರ್ಘರ್ ತಿರಂಗಾ ಕಾರ್ಯಕ್ರಮವು ಕೇಂದ್ರ ಸರಕಾರದ ರಾಷ್ಟ್ರಾಭಿಮಾನ ಬಿಂಬಿಸುವ ವಿಶೇಷ ಕಾರ್ಯಕ್ರಮವಾಗಿದ್ದು, ಆಗಸ್ಟ್ 13ರಿಂದ 15ರವರೆಗೆ ಎಲ್ಲಾ ಸರಕಾರಿ ಕಚೇರಿಗಳು ಸೇರಿದಂತೆ ಮನೆ ಮನೆ ಮೇಲೆ ತ್ರಿವರ್ಣಧ್ವಜವನ್ನು ಹಾರಿಸುವ ಮೂಲಕ ರಾಷ್ಟ್ರಾಭಿಮಾನವನ್ನು ಮೆರೆಯಲು ಹಾಗೂ ಕಾರ್ಯಕ್ರಮ ಗಳನ್ನು ಯಶಸ್ವಿಗೊಳಿಸಲು ಜಿಲ್ಲಾಡಳಿತ ಕೋರಿದೆ.
ಸಾರ್ವಜನಿಕರು ತಮ್ಮ ತಮ್ಮ ಮನೆಯಲ್ಲಿ ಆ.13ರಂದು ಬೆಳಗ್ಗೆ ರಾಷ್ಟ್ರಧ್ವಜದ ಧ್ವಜಾರೋಹಣ ನೆರವೇರಿಸಿ, ಆ.15ರ ಸಂಜೆ ಧ್ವಜಅವರೋಹಣ ಮಾಡಿ, ನಂತರ ಧ್ವಜವನ್ನು ಸುರಕ್ಷಿತವಾಗಿ ತಮ್ಮ ಮನೆಗಳಲ್ಲಿಯೇ ಗೌರವ ಪೂರ್ವಕವಾಗಿ ಇಟ್ಟುಕೊಳ್ಳಬೇಕು.
ಎಲ್ಲಾ ಸರಕಾರಿ ಕಚೇರಿ, ಶಾಲಾ-ಕಾಲೇಜುಗಳ ಧ್ವಜಸ್ಥಂಬಗಳಲ್ಲಿ ಆಗಸ್ಟ್ 13ರಿಂದ 15 ರವರೆಗೆ ಪ್ರತಿದಿನ ಬೆಳಗ್ಗೆ 8 ಗಂಟೆಗೆ ಧ್ವಜಾರೋಹಣ ಮಾಡಿ ಸಂಜೆ 6 ಗಂಟೆಗೆ ಧ್ವಜಾವರೋಹಣ ಮಾಡಬೇಕು. ಧ್ವಜಾರೋಹಣ ಸಮಯದಲ್ಲಿ ರಾಷ್ಟ್ರಧ್ವಜಕ್ಕೆ ಅಗೌರವ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
Next Story