ಶಿವಮೊಗ್ಗ: ಸಾವರ್ಕರ್ ಬ್ಯಾನರ್ ತೆರವು, 2 ಗುಂಪುಗಳ ಮಧ್ಯೆ ಗಲಾಟೆ
ನಗರದಲ್ಲಿ ನಿಷೇಧಾಜ್ಞೆ ಜಾರಿ
![ಶಿವಮೊಗ್ಗ: ಸಾವರ್ಕರ್ ಬ್ಯಾನರ್ ತೆರವು, 2 ಗುಂಪುಗಳ ಮಧ್ಯೆ ಗಲಾಟೆ ಶಿವಮೊಗ್ಗ: ಸಾವರ್ಕರ್ ಬ್ಯಾನರ್ ತೆರವು, 2 ಗುಂಪುಗಳ ಮಧ್ಯೆ ಗಲಾಟೆ](https://www.varthabharati.in/sites/default/files/images/articles/2022/08/15/345960-1660561657.jpeg)
ಶಿವಮೊಗ್ಗ: ನಗರದ ಅಮೀರ್ ಅಹಮದ್ ಸರ್ಕಲ್ ನಲ್ಲಿ ಸಾವರ್ಕರ್ ಫೋಟೋ ಇರುವ ಬ್ಯಾನರ್ ಹಾಕಿದ್ದನ್ನು ಗುಂಪೊಂದು ಆಕ್ಷೇಪಿಸಿದ್ದು, ಈ ವೇಳೆ ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆದಿದೆ.
75ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಅಮೀರ್ ಅಹಮದ್ ವೃತ್ತದಲ್ಲಿ ಸಾವರ್ಕರ್ ಫೋಟೋ ಇರುವ ಬ್ಯಾನರ್ ಹಾಕಲಾಗಿತ್ತು. ಈ ವೇಳೆ ಸಾವರ್ಕರ್ ಬ್ಯಾನರ್ ತೆರವುಗೊಳಿಸಲು ಇನ್ನೊಂದು ಗುಂಪು ಮುಂದಾಗಿದೆ. ಈ ಕಾರಣಕ್ಕಾಗಿ ಎರಡು ಗುಂಪುಗಳ ನಡುವೆ ಜಟಾಪಟಿ ಉಂಟಾಗಿದ್ದು, ಬಳಿಕ ಮಧ್ಯ ಪ್ರವೇಶಿಸಿದ ಪೊಲೀಸರು ಬ್ಯಾನರ್ ತೆರವುಗೊಳಿಸಿದ್ದಾರೆ.
ಬ್ಯಾನರ್ ತೆರವುಗೊಳಿಸಿದ್ದನ್ನು ಖಂಡಿಸಿ ಸಂಘಪರಿವಾರದ ಕಾರ್ಯಕರ್ತರು ಸರ್ಕಲ್ ಬಳಿ ಪ್ರತಿಭಟನೆ ನಡೆಸಿದಾಗ ಮತ್ತೊಂದು ಗುಂಪು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿತು. ಈ ವೇಳೆ ಗುಂಪನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.
ಮುಂಜಾಗ್ರತಾ ಕ್ರಮವಾಗಿ ಶಿವಮೊಗ್ಗದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದು , ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಸೆಕ್ಷನ್ 144 ನಿಷೇದಾಜ್ಞೆ ಜಾರಿ ಮಾಡಿ ತಹಶೀಲ್ದಾರ್ ನಾಗರಾಜ್ ಆದೇಶಿಸಿದ್ದಾರೆ .
ವಶಕ್ಕೆ: ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿ 10 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
![](https://www.varthabharati.in/sites/default/files/images/galllery/2022/08/15/WhatsApp Image 2022-08-15 at 3.41.27 PM.jpeg)