ಕಾಂಗ್ರೆಸ್ ಕಚೇರಿಗೆ ನೀಡಿದ ಪೊಲೀಸ್ ಭದ್ರತೆ ಹಿಂಪಡೆಯಿರಿ: ಎಸ್ಪಿಗೆ ಜಿಲ್ಲಾ ಕಾಂಗ್ರೆಸ್ ಮನವಿ
ಉಡುಪಿ, ಆ.18: ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ನಿನ್ನೆ ಹಠಾತ್ತನೆ ನಡೆಸಿದ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಪ್ರಯತ್ನದ ಹಿನ್ನೆಲೆಯಲ್ಲಿ ಒದಗಿಸಲಾದ ಪೊಲೀಸ್ ಭದ್ರತೆಯನ್ನು ಹಿಂಪಡೆಯುವಂತೆ ಕೋರಿ ಜಿಲ್ಲಾ ಕಾಂಗ್ರೆಸ್ ಇಂದು ಉಡುಪಿ ಜಿಲ್ಲಾ ನೂತನ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ. ಹಾಕೆ ಅವರಿಗೆ ಮನವಿ ಅರ್ಪಿಸುವ ಮೂಲಕ ಒತ್ತಾಯಿಸಿದೆ.
ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಅವರ ನೇತೃತ್ವದಲ್ಲಿ ಜಿಲ್ಲಾ ಕಾಂಗ್ರೆಸ್ನ ನಿಯೋಗವೊಂದು ಇಂದು ಎಸ್ಪಿಯವರನ್ನು ಭೇಟಿಯಾಗಿ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಒದಗಿಸಿದ ಭದ್ರತಾ ಸಿಬ್ಬಂದಿಗಳನ್ನು ಶೀಘ್ರವಾಗಿ ತೆರವುಗೊಳಿಸುವಂತೆ ಆಗ್ರಹಿಸಿ ಮನವಿ ಸಲ್ಲಿಸಿತು.
ಜನರ ತೆರಿಗೆ ಹಣದಿಂದ ನಿರ್ವಹಿಸಲ್ಪಡುವ ರಾಜ್ಯ ಪೊಲೀಸ್ ಇಲಾಖೆ ಸಾರ್ವಜನಿಕರ ರಕ್ಷಣೆಗಾಗಿ ಇರುವಂತದ್ದು. ಹಾಗೂ ಆ ಇಲಾಖೆಯ ದುರುಪಯೋಗ ಸಲ್ಲದು. ಕ್ಷುಲ್ಲಕ ವಿಚಾರಕ್ಕಾಗಿ ಉಡುಪಿಯ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಕೆಲವು ಬಿಜೆಪಿ ಕಾರ್ಯಕರ್ತರು ಬಂದು ಘೋಷಣೆ ಕೂಗಿದ ಮಾತ್ರಕ್ಕೆ ಕಾಂಗ್ರೆಸ್ ಕಚೇರಿಗಾಗಲಿ ಅಥವಾ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗಾಗಲಿ ಯಾವುದೆ ಭೀತಿ ತಲೆದೋರಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಮುನ್ನೆಚ್ಚರಿಕೆಯ ಕಾರಣದಿಂದ ಉಡುಪಿ ಪೊಲೀಸರು ಉಡುಪಿ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಪೊಲೀಸ್ ಭದ್ರತೆಯನ್ನು ಒದಗಿಸಿದ್ದನ್ನು ನಾವು ಧನ್ಯತಾ ಪೂರ್ಣವಾಗಿ ಸ್ವೀಕರಿಸುವುದರ ಜೊತೆಗೆ ಕಚೇರಿಗೆ ಭದ್ರತೆ ಒದಗಿಸಿದ ಪೊಲೀಸ್ ಇಲಾಖೆಗೆ ಧನ್ಯವಾದ ಸಲ್ಲಿಸುತ್ತೇವೆ. ಆದರೂ ಜನರ ಭದ್ರತೆಗೆ ಹಾಗೂ ಸುವ್ಯವಸ್ಥೆಗೆ ಮೀಸಲಿರುವ ಪೊಲೀಸರನ್ನು ಯಾವುದೋ ಕಿಡಿಗೇಡಿಗಳ ದುರ್ವರ್ತನೆಯನ್ನು ಪರಿಗಣಿಸಿ ಕಾಂಗ್ರೆಸ್ ಪಕ್ಷದ ಕಛೇರಿಗೆ ಭದ್ರತೆಯ ನೆಪದಲ್ಲಿ ಅನಾವಶ್ಯಕವಾಗಿ ಉಪಯೋಗಿಸುವುದು ನಾವು ಜನರ ತೆರಿಗೆ ಹಣವನ್ನು ದುರುಪಯೋಗ ಮಾಡಿಕೊಂಡಂತೆ ಎಂದು ಮನವಿ ಹೇಳಿದೆ.
ಹೀಗಾಗಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠರು ಕಾಂಗ್ರೆಸ್ ಪಕ್ಷದ ಕಛೇರಿಗೆ ನೀಡಿದ ಭದ್ರತಾ ಸಿಬಂದಿಗಳನ್ನು ಶೀಘ್ರವಾಗಿ ತೆರವು ಮಾಡಿಸಬೇಕು ಹಾಗೂ ಅಂತಹ ಸಂದರ್ಭ ಬಂದಾಗ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ರಕ್ಷಣೆಗೆ ಹಾಗೂ ಕಾಂಗ್ರೆಸ್ ಕಛೇರಿಯ ಭದ್ರತೆಗೆ ತಮ್ಮ ಜೀವ ಪಣ ಇಟ್ಟು ಕೆಲವು ವಿಕೃತ ಶಕ್ತಿಗಳ ವಿರುದ್ಧ ಹೋರಾಡಲು ಸಿದ್ಧರಿದ್ದೇವೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಈ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ.ಎ.ಗಫೂರ್, ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಕಿಶನ್ ಹೆಗ್ಡೆ ಕೊಳ್ಕೆಬೈಲು, ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಸದಾಶಿವ ಪೂಜಾರಿ, ಪ್ರಚಾರ ಸಮಿತಿಯ ಅಧ್ಯಕ್ಷ ಪ್ರಶಾಂತ್ ಪೂಜಾರಿ, ಮಹಿಳಾ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಮಮತಾ ಶೆಟ್ಟಿ, ಮಾಜಿ ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಕಾಂಗ್ರೆಸ್ ಮುಖಂಡರಾದ ನವೀನ್ ಶೆಟ್ಟಿ, ಸುಕನ್ಯಾ ಪೂಜಾರಿ, ಸತೀಶ್ ಕುಮಾರ್ ಮಂಚಿ, ಸಾಯಿರಾಜ್ ಕಿದಿಯೂರು, ಭರತ್ ಮಣಿಪಾಲ್, ಪ್ರಮೀಳಾ ಸುವರ್ಣ, ಶಾಲಿನಿ ಪುರಂದರ ಸಾಲ್ಯಾನ್, ಗಣೇಶ್, ನಾರಾಯಣ್ ಕುಂದರ್, ಹರೀಶ್ ಕಿಣಿ, ನರಸಿಂಹಮೂರ್ತಿ, ಪ್ರಖ್ಯಾತ್ ಶೆಟ್ಟಿ, ಯತೀಶ್ ಕರ್ಕೇರ, ಮಹಮ್ಮದ್, ಸಂಜಯ್ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು.