ಮದರ್ ತೆರೇಸಾ ಸಂಸ್ಮರಣಾ ದಿನಾಚರಣೆ: ದ.ಕ. ಜಿಲ್ಲಾ ಮಟ್ಟದ ಪ್ರಬಂಧ, ಚಿತ್ರಕಲಾ ಸ್ಪರ್ಧೆ

ಮಂಗಳೂರು, ಆ.20: ಸಂತ ಮದರ್ ತೆರೇಸಾರವರ 25ನೇ ಸಂಸ್ಮರಣಾ ದಿನಾಚರಣೆಯ ಅಂಗವಾಗಿ ಇಂದು ನಗರದ ಮಿಲಾಗ್ರಿಸ್ ಪ.ಪೂ.ಕಾಲೇಜಿನಲ್ಲಿ ದ.ಕ.ಜಿಲ್ಲಾ ಮಟ್ಟದ ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆಗಳನ್ನು ಆಯೋಜಿಸಲಾಯಿತು.
ಜಿಲ್ಲೆಯಾದ್ಯಂತದ 78 ಶಿಕ್ಷಣ ಸಂಸ್ಥೆಗಳಿಂದ 480 ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸೇರಿದಂತೆ ಸುಮಾರು 520ರಷ್ಟು ಸ್ಪರ್ಧಾಳುಗಳು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಕಾರ್ಯಕ್ರಮ ಸಂಯೋಜಕರಾದ ವಂ.ರೂಪೇಶ್ ಮಾಡ್ತಾ ಉದ್ಘಾಟಿಸಿ, ನಿಷ್ಕಲ್ಮಶ ಮನಸಿನಿಂದ ಮಾನವೀಯ ಸೇವೆಗೈದು ಜಗತ್ತಿನ ಮಹಾ ತಾಯಿಯೆಂದೇ ಗುರುತಿಸಿಕೊಂಡ ಸಂತ ಮದರ್ ತೆರೇಸಾರವರ ಚಿಂತನೆಗಳು, ವಿಚಾರಧಾರೆಗಳು ಇಂದಿನ ಯುವ ಪೀಳಿಗೆಗೆ ತೀರಾ ಅತ್ಯಗತ್ಯವಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ರೋಗಿಗಳ ಆರೈಕೆ ಮಾಡುವ ಮೂಲಕ ನೊಂದವರ, ಶೋಷಿತರ ಧ್ವನಿಯಾದ ಮದರ್ ತೆರೇಸಾರವರು ತನ್ನ ಮಾನವೀಯ ಸೇವೆಗಳಿಂದಾಗಿ ಜಗತ್ಪ್ರಸಿದ್ಧರಾದರು.ಅಂತಹ ಮಾನವೀಯ ಮೌಲ್ಯದ ಮಹಾತಾಯಿ ಬಹುತ್ವ ಭಾರತದ ಉಸಿರು ಎಂದರು.
ಕಾರ್ಯಕ್ರಮದಲ್ಲಿ ವಿಚಾರ ವೇದಿಕೆಯ ನಾಯಕರಾದ ಸುಶೀಲ್ ನೊರೋನ್ಹಾ, ಡೋಲ್ಫಿ ಡಿಸೋಜ, ಡಾ.ಕೃಷ್ಣಪ್ಪ ಕೊಂಚಾಡಿ, ಯೋಗೀಶ್ ಜಪ್ಪಿನಮೊಗರು, ಸುಮತಿ ಹೆಗ್ಡೆ,, ಮುನೀರ್ ಕಾಟಿಪಳ್ಳ, ಶಾಂತಿ ಡಾಯಸ್,ಡಯಾನ ಡಿಸೋಜ, ಫ್ಲೇವಿ ಡಿಸೋಜ, ಫ್ಲೇವಿ ಕ್ರಾಸ್ತಾ, ಜಾಸ್ಮಿನ್ ಡಿಸೋಜ, ಅಸುಂತ ಡಿಸೋಜ, ಸಂತೋಷ್ ಬಜಾಲ್, ಮನೋಜ್ ವಾಮಂಜೂರು, ರೇವಂತ್ ಕದ್ರಿ,ಶಾಹಿದ್,ಸ್ಟಾನಿ ಕ್ರಾಸ್ತಾ, ಅಲ್ತಾಫ್ ತುಂಬೆ, ವೀಣಾ ಶೆಟ್ಟಿ, ಶಾಲಿನಿ ರೈ, ಭವಾನಿ ಜೋಗಿ, ಶಾದಿಲ್, ನೂಮನ್, ಜುನೈದ್, ಫಾಹಿಸ್, ರಾಝಿಕ್ ಮುಂತಾದವರು ಹಾಜರಿದ್ದರು.
ಸೆಪ್ಟೆಂಬರ್ 9ರಂದು ನಗರದ ಪುರಭವನದಲ್ಲಿ ಜರುಗಲಿರುವ ಜಿಲ್ಲಾ ಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಈ ಸ್ಪರ್ಧೆಗಳ ಬಹುಮಾನ ವಿತರಣೆ ನಡೆಯಲಿದೆ ಎಂದು ವಿಚಾರ ವೇದಿಕೆಯ ಅಧ್ಯಕ್ಷರಾದ ರೋಯ್ ಕ್ಯಾಸ್ಟಲಿನೋ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.