ಕೆಂಪುಕೋಟೆಯಲ್ಲಿ ನಡೆದ ಸ್ವಾತಂತ್ರ್ಯ ದಿನ ಪಥಸಂಚಲನದಲ್ಲಿ ಉಡುಪಿಯ ಮೆಹಕ್ ಫಾತಿಮಾ ಶೈಖ್ ಪ್ರತಿನಿಧಿ

ಉಡುಪಿ: ಸ್ವಾತಂತ್ರ್ಯ ದಿನಾಚರಣೆಯಂದು ದೆಹಲಿಯ ಕೆಂಪು ಕೋಟೆಯಲ್ಲಿ ನಡೆದ ಸ್ವಾತಂತ್ರ್ಯ ದಿನ ಪಥಸಂಚಲನದಲ್ಲಿ ಕರ್ನಾಟಕ, ಗೋವಾ ಎನ್ಸಿಸಿ ತಂಡವನ್ನು ಉಡುಪಿಯ ಮೆಹಕ್ ಫಾತಿಮಾ ಶೈಖ್ ಪ್ರತಿನಿಧಿಸಿದ್ದಾರೆ.
ಉಡುಪಿಯ ಎಂಜಿಎಂ ಕಾಲೇಜಿನ ವಿದ್ಯಾರ್ಥಿಯಾಗಿರುವ ಈಕೆ ಬೆಂಗಳೂರಿನ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ ನಡೆದ ಐಡಿಸಿ (ಇಂಡಿಪೆಂಡೆಂಟ್ ಡೇ ಕ್ಯಾಂಪ್) ಪೂರ್ವ ಶಿಬಿರವನ್ನು ಯಶಸ್ವಿಯಾಗಿ ಪೂರೈಸಿದ್ದು, ಆ. 1ರಿಂದ 15ರ ತನಕ ದೆಹಲಿಯಲ್ಲಿ ಶಿಬಿರದಲ್ಲಿ ಭಾಗವಹಿಸದ್ದಾರೆ. ಕರ್ನಾಟಕ ಮತ್ತು ಗೋವಾ ಎನ್ಸಿಸಿ ತಂಡಕ್ಕೆ ಕರ್ನಾಟಕದಿಂದ ಆಯ್ಕೆಯಾದ 42 ಮಂದಿಯ ಪೈಕಿ ಮೆಹಕ್ ಉಡುಪಿಯಿಂದ ಆಯ್ಕೆಯಾದ ಏಕೈಕ ಕೆಡೆಟ್ ಆಗಿದ್ದಾಳೆ. ಕೆಂಪುಕೋಟೆಯಲ್ಲಿ ನಡೆದ ರಾಜ್ಯದ ಸಾಂಪ್ರದಾಯಿಕ ಧಿರಿಸಿನ ಪ್ರದರ್ಶನದಲ್ಲೂ ಈ ತಂಡ ಉತ್ತಮ ಪ್ರದರ್ಶನ ನೀಡಿದೆ.
ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಎನ್ಸಿಸಿಯ ಡೈರಕ್ಟರೇಟ್ ಜನರಲ್ ಲೆಪ್ಟಿನೆಂಟ್ ಗುರ್ಬಿರ್ಪಾಲ್ ಸಿಂಗ್, ಆರ್ಆರ್ಎಂ ಅಜಯ್ ಭಟ್, ಡಿಡಿಜಿ ಏರ್ ಕಮಾಂಡರ್ ಬಿಎಸ್ ಕನ್ವಾರ್ ಮತ್ತಿತರರನ್ನು ಭೇಟಿಯಾಗುವ ಅವಕಾಶ ದೊರೆತಿದ್ದು, ಇದು ನನ್ನ ಜೀವನದ ಅವಿಸ್ಮರಣೀಯ ನೆನಪುಗಳು ಎಂದು ಮೆಹಕ್ ತಿಳಿಸಿದ್ದಾರೆ.
ಲೀಡಿಂಗ್ ಕೆಡೆಟ್ ರ್ಯಾಂಕ್ ಹೊಂದಿರುವ ಮೆಹಕ್ ಉಡುಪಿಯ ಪೌಝಿಯಾ ಶೇಖ್ ಪುತ್ರಿ.






.jpeg)


