ಸಕಲೇಶಪುರ | ಕರು ಸಾಗಿಸುತ್ತಿದ್ದ ದಲಿತ ಯುವಕನ ಮೇಲೆ ಹಲ್ಲೆ ಆರೋಪ: ಬಜರಂಗದಳದ 9 ಮಂದಿ ಕಾರ್ಯಕರ್ತರ ವಿರುದ್ಧ FIR

ಸಕಲೇಶಪುರ,: ಆ,21: ಮನೆಗೆ ಕರು ಸಾಗಿಸುತ್ತಿದ್ದ ದಲಿತ ಯುವಕ ಹಾಗೂ ಆತನ ಸಂಬಂಧಿಕನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಬಜರಂಗದಳದ 9 ಮಂದಿ ಕಾರ್ಯಕರ್ತರ ವಿರುದ್ಧ (Sakleshpura) ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಜರಂಗದಳದ ಕಾರ್ಯಕರ್ತರಾದ ಗುರು, ದೀಪು, ರಘು, ಕಿರಣ್, ಕೌಶಿಕ್, ನವೀನ್, ಲೋಕೇಶ್, ಶಿವು ಜಿಫ್ಟಿ ಹಾಗೂ ರಘು ಸಕಲೇಶಪುರ ವಿರುದ್ಧ ದಲಿತ ದೌರ್ಜನ್ಯ ತಡೆ ಕಾಯ್ದೆ ಸೇರಿದಂತೆ ವಿವಿಧ ಕಲಂನಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಘಟನೆ ವಿವರ: ಶನಿವಾರ ಸಂಜೆ 4 ಗಂಟೆ ಸುಮಾರಿಗೆ ತನ್ನ ಮನೆಗೆ ವಾಹನದಲ್ಲಿ ಕರುವನ್ನು ತೆಗೆದುಕೊಂಡು ಹೋಗುತ್ತಿದ್ದ ಮಂಜುನಾಥ್ ಮೇಲೆ ಪಟ್ಟಣದ ಹೊಸ ಬಸ್ ನಿಲ್ದಾಣಬಳಿ ವಾಹನವನ್ನು ತಡೆದು ಆರೋಪಿಗಳು ಹಲ್ಲೆ ನಡೆಸಿದ್ದರು. ಮಂಜುನಾಥ್ ಹಲಸುಲಿಗೆ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಹಾಗೂ ಹಾಲಿ ಸದಸ್ಯರಾಗಿದ್ದು, ಆರೋಪಿಗಳು ಮಂಜುನಾಥ್ ಅಣ್ಣನ ಮಗ ಕಾವೇಶ್ ಮೇಲೆಯೂ ಹಲ್ಲೆಗೆ ಮುಂದಾಗಿ ಬೆದರಿಕೆ ಹಾಕಿದ್ದರು.
ದಲಿತ ಸಂಘಟನೆಗಳ ಮುಖಂಡರ ಮೇಲೆ ಪ್ರತಿದೂರು: ಬಜರಂಗದಳದ ಕಾರ್ಯಕರ್ತ ಶಿವು, ತನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ ರವಿವಾರ ನೀಡಿರುವ ದೂರಿನ ಮೇರೆಗೆ ದಲಿತ ಮುಖಂಡರಾದ ಪುರಸಭೆ ಸದಸ್ಯ ಅಣ್ಣಪ್ಪ, ಬೈಕೆರೆ ದೇವರಾಜ್, ವಕೀಲ ವೇಣು ಕುಮಾರ್ ಸೇರಿದಂತೆ 9 ಜನರ ಮೇಲೆ ದೂರು ದಾಖಲಿಸಲಾಗಿದೆ.







