ಪಡು ಪಣಂಬೂರು: ಬಸ್ ಢಿಕ್ಕಿ; ಬೈಕ್ ಸವಾರನಿಗೆ ಗಂಭೀರ ಗಾಯ

ಮುಲ್ಕಿ: ಪಣಂಬೂರು ಪೆಟ್ರೋಲ್ ಬಂಕ್ ಬಳಿ ಬೈಕ್ ಗೆ ಬಸ್ ಢಿಕ್ಕಿಯಾದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.
ಗಾಯಾಳು ಬೈಕ್ ಸವಾರನನ್ನು ಮುಲ್ಕಿ ಸಮೀಪದ ಕೆಎಸ್ ರಾವ್ ನಗರದ ಲಿಂಗಪ್ಪಯ್ಯ ಕಾಡು ನಿವಾಸಿ ಶಿವಪ್ಪ ಹನುಮಂತ ರಾಯ (35) ಎಂದು ಗುರುತಿಸಲಾಗಿದೆ.
ಗಾಯಾಳು ಬೈಕ್ ಸವಾರ ಪಡುಪಣಂಬೂರು ಪೆಟ್ರೋಲ್ ಬಂಕ್ ಬಳಿ ಯು ಟರ್ನ್ ತೆಗೆದುಕೊಂಡು ಮುಲ್ಕಿ ಕಡೆ ಚಲಿಸುತ್ತಿರುವಾಗ ಹಿಂದಿನಿಂದ ತಡೆರಹಿತ ಬಸ್ಸು ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಅಪಘಾತದಿಂದ ಬೈಕ್ ಜಖಂ ಗೊಂಡಿದ್ದು ಬಸ್ಸಿನ ಎದುರು ಭಾಗಕ್ಕೆ ಹಾನಿಯಾಗಿದೆ.
ಅಪಘಾತದಿಂದ ಕೆಲ ಹೊತ್ತು ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿದ್ದು ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಈ ನಡುವೆ ಪಡು ಪಣಂಬೂರು ಕಿರು ಸೇತುವೆ ಬಳಿ ಬೈಕ್ ಹಾಗೂ ಆಟೋ ನಡುವೆ ಅಪಘಾತ ನಡೆದಿದ್ದು ಕೆಲ ಹೊತ್ತು ಮಾತಿನ ಚಕಮಕಿ ನಡೆದಿದ್ದು ಕೂಡಲೇ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ವಾಹನ ಸವಾರರಿಗೆ ಎಚ್ಚರಿಕೆ ನೀಡಿ ಎರಡು ವಾಹನಗಳನ್ನು ಸ್ಥಳದಿಂದ ತೆರವುಗೊಳಿಸಿದ್ದಾರೆ.