ಟಿಕಾಯತ್ ದಿಲ್ಲಿ ಪ್ರವೇಶಕ್ಕೆ ತಡೆ: ರಾಜಧಾನಿ ಗಡಿಯಲ್ಲೇ ರೈತ ನಾಯಕನನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು

ಹೊಸದಿಲ್ಲಿ, ಆ.21: ದೇಶದಲ್ಲಿ ತಾಂಡವವಾಡುತ್ತಿರುವ ನಿರುದ್ಯೋಗ ಸಮಸ್ಯೆ ವಿರುದ್ದ ಜಂತರ್ಮಂತರ್ನಲ್ಲಿ ಆಯೋಜಿಸಲಾದ ಪ್ರತಿಭಟನರ್ಯಾಲಿಯಲ್ಲಿ ಭಾಗವಹಿಸಲು ಆಗಮಿಸುತ್ತಿದ್ದ ರೈತ ನಾಯಕ ರಾಕೇಶ್ ಟಿಕಾಯತ್ ಅವರನ್ನು ದಿಲ್ಲಿಯ ಗಾಝಿಪುರ ಗಡಿಯಲ್ಲಿ ಪೊಲೀಸರು ರವಿವಾರ ಬಂಧಿಸಿದ್ದಾರೆ.
ಭಾರತೀಯ ಕಿಸಾನ್ ಒಕ್ಕೂಟದ ರಾಷ್ಟ್ರೀಯ ವಕ್ತಾರ ಹಾಗೂ ಸಂಯುಕ್ತ ಕಿಸಾನ್ ಮೋರ್ಚಾ (ಎಸ್ಕೆಎಂ)ದ ಪ್ರಮುಖ ನಾಯಕರೂ ಆದ ಟಿಕಾಯತ್ ಅವರನ್ನು ರವಿವಾರ ಮಧ್ಯಾಹ್ನ ದಿಲ್ಲಿ ಗಡಿಯ ಸಮೀಪ ವಶಕ್ಕೆ ತೆಗೆದುಕೊಳ್ಳಲಾಯಿತೆಂದು ದಿಲ್ಲಿಯ ವಿಶೇಷ ಪೊಲೀಸ್ ಆಯುಕ್ತ (ಕಾನೂನು , ಸುವ್ಯವಸ್ಥೆ) ದೀಪೇಂದ್ರ ಪಾಠಕ್ ತಿಳಿಸಿದ್ದಾರೆ.
ಆನಂತರ ಅವರನ್ನು ಮಧುವಿಹಾರ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಅಲ್ಲಿ ಪೊಲೀಸರು ಅವರೊಂದಿಗೆ ಮಾತನಾಡಿ, ಹಿಂತಿರುಗುವಂತೆ ಮನವಿ ಮಾಡಿದರೆಂದು ಪಾಠಕ್ ಸುದ್ದಿಗಾರರಿಗೆ ತಿಳಿಸಿದರು.
ರಾಜಧಾನಿ ಪ್ರವೇಶಿಸಬಾರದೆಂಬ ತನ್ನ ಮನವಿಗೆ ಟಿಕಾಯತ್ ಸಮ್ಮತಿಸಿದರು ಹಾಗೂ ಅವರನ್ನು ಬೆಂಗಾವಲಿನೊಂದಿಗೆ ಹಿಂದೆ ಕಳುಹಿಸಲಾಯಿತು ಎಂದು ಡಿಸಿಪಿ ತಿಳಿಸಿದ್ದಾರೆ. ರಾಜಧಾನಿಯಲ್ಲಿ ಅನಗತ್ಯವಾಗಿ ಸಭೆ ಸೇರುವುದನ್ನು ತಡೆಯು ಯತ್ನವಾಗಿ ರಾಕೇಶ್ ಟಿಕಾಯತ್ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿಯೆಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಮಧ್ಯೆ ತನ್ನ ದಿಲ್ಲಿ ಪ್ರವೇಶಕ್ಕೆ ತಡೆಯೊಡ್ಡಿರುವುದನ್ನು ರಾಕೇಶ್ ಟಿಕಾತ್ ಖಂಡಿಸಿದ್ದಾರೆ ಮತ್ತು ದಿಲ್ಲಿ ಪೊಲೀಸರು ಕೇಂದ್ರ ಸರಕಾರದ ಕುಮ್ಮಕ್ಕಿನಿಂದ ಕಾರ್ಯಾಚರಿಸುತ್ತಿದ್ದಾರೆಂದು ಅವರು ಆರೋಪಿಸಿದ್ದಾರೆ.
ರಾಕೇಶ್ ಟಿಕಾಯತ್ ಅವರಿಗೆ ರಾಜಧಾನಿ ಪ್ರವೇಶಿಸದಂತೆ ತಡೆದು, ಅವರನ್ನು ವಶಕ್ಕೆ ತೆಗೆದುಕೊಂಡ ದಿಲ್ಲಿ ಪೊಲೀಸರ ಕ್ರಮವನ್ನು ದಿಲ್ಲಿಯ ಸಚಿವ ಹಾಗೂ ಆಮ್ ಆದ್ಮಿ ಪಕ್ಷದ ನಾಯಕ ಗೋಪಾಲ್ ರಾಯ್ ಖಂಡಿಸಿದ್ದಾರೆ.
ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ಇತರ ರೈತ ಸಂಘಟನೆಗಳು ಸೋಮವಾರ ಜಂತರ್ಮಂತರ್ನಲ್ಲಿ ಆಯೋಜಿಸಿದ್ದ ಈ ಪ್ರತಿಭಟನಾ ರ್ಯಾಲಿಯಲ್ಲಿ ರಾಕೇಶ್ ಟಿಕಾಯತ್ ಅವರು ಭಾಷಣ ಮಾಡುವವರಿದ್ದರು. ‘‘ಪ್ರತಿಭಟನೆಯ ಹಿನ್ನೆಲೆಯಲ್ಲಿ ದಿಲ್ಲಿಯ ಹೊರವಲಯದ ಟಿಕ್ರಿತ್ನಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಪ್ರಮುಖ ಕೂಡುರಸ್ತೆಗಳು, ರೈಲ್ವೆ ಹಳಿಗಳು ಹಾಗೂ ಮೆಟ್ರೋ ನಿಲ್ದಾಣಗಳಲ್ಲಿಯೂ ಪೊಲೀಸರನ್ನು ನಿಯೋಜಿಸಲಾಗಿದೆಯೆಂದು ದಿಲ್ಲಿ ಹೊರವಲಯದ ಪೊಲೀಸ್ ಉಪ ಆಯುಕ್ತ ಸಮೀರ್ ಶರ್ಮಾ ತಿಳಿಸಿದ್ದಾರೆ.
‘‘ದಿಲ್ಲಿ ಪೊಲೀಸರು ಕೇಂದ್ರ ಸರಕಾರದ ಒತ್ತಾಸೆಯಂತೆ ಕೆಲಸ ಮಾಡುತ್ತಿದ್ದಾರೆ. ರೈತರ ಧ್ವನಿಯನ್ನು ಅದುಮಿಡಲು ಅವರಿಗೆ ಸಾಧ್ಯವಿಲ್ಲ. ಈ ಬಂಧನವು ಹೊಸ ಕ್ರಾಂತಿಗೆ ನಾಂದಿ ಹಾಡಲಿದೆ. ನನ್ನ ಕೊನೆಯುಸಿರಿನವರೆಗೂ ಈ ಹೋರಾಟ ಮುಂದುವರಿಯಲಿದೆ. ‘‘ನಾನು ನಿಲ್ಲುವುದಿಲ್ಲ, ದಣಿಯುವುದಿಲ್ಲ ಹಾಗೂ ಮಣಿಯುವುದಿಲ್ಲ’’ .
ರಾಕೇಶ್ ಟಿಕಾಯತ್







