ಅತ್ಯಾಚಾರಕ್ಕೆ ಪ್ರತಿರೋಧ ತೋರಿದ ಬಾಲಕಿಯ ಕಾಲು ಮುರಿದ ಆಟೊಚಾಲಕ!

ದುಮ್ಕಾ (ಜಾರ್ಖಂಡ್): ಆಟೊ ಚಾಲಕನೊಬ್ಬ ಅತ್ಯಾಚಾರ ಎಸಗಲು ಮುಂದಾದಾಗ ಪ್ರತಿರೋಧ ವ್ಯಕ್ತಪಡಿಸಿದ ಹದಿನಾಲ್ಕು ವರ್ಷ ವಯಸ್ಸಿನ ಬಾಲಕಿಯೊಬ್ಬಳನ್ನು ಅಮಾನುಷವಾಗಿ ಥಳಿಸಿ, ಕಾಲು ಮುರಿದು ಅರೆಪ್ರಜ್ಞಾ ಸ್ಥಿತಿಯಲ್ಲಿ ನಿರ್ಜನ ಪ್ರದೇಶದಲ್ಲಿ ಎಸೆದು ಹೋದ ಘಟನೆ ಜಾರ್ಖಂಡ್ನ ದುಮ್ಕಾ ಜಿಲ್ಲೆಯಲ್ಲಿ ಸಂಭವಿಸಿದೆ.
ಹಲ್ಲೆಯಿಂದ ಬಾಲಕಿಯ ಬಲಗಾಲು ಮುರಿದಿದೆ. ಮುಖದ ಮೇಲೆಯೂ ಹಲವು ಗಾಯದ ಗುರುತುಗಳು ಕಂಡುಬಂದಿವೆ. ದುಮ್ಕಾ ಸರ್ಕಾರಿ ಆಸ್ಪತ್ರೆಯಲ್ಲಿ ಬಾಲಕಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ಅಪರಿಚಿತ ವ್ಯಕ್ತಿಯೊಬ್ಬ ಈ ಕೃತ್ಯ ಎಸಗಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿ, ಆರೋಪಿಯ ಪತ್ತೆಗೆ ಜಾಲ ಬೀಸಲಾಗಿದೆ" ಎಂದು ಉಪವಿಭಾಗೀಯ ಪೊಲೀಸ್ ಅಧಿಕಾರಿ ನೂರ್ ಮುಸ್ತಾಫಾ ಅನ್ಸಾರಿ ಹೇಳಿದ್ದಾರೆ.
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಮ್ಯಾಜೆಸ್ಟ್ರೇಟರ್ ಪೀಠ ಈ ಪ್ರಕರಣವನ್ನು ಸ್ವಯಂಪ್ರೇರಿತರವಾಗಿ ಕೈಗೆತ್ತಿಕೊಂಡಿದ್ದು, ಬಾಲಕಿ ಹಾಗೂ ಆಕೆಯ ಅಜ್ಜಿಯ ಹೇಳಿಕೆ ದಾಖಲಿಸಿಕೊಂಡಿದೆ.
ಶನಿವಾರ ಮಧ್ಯಾಹ್ನ ರಾಮಗಢ ಪ್ರದೇಶದಲ್ಲಿದ್ದ ಸಂಬಂಧಿಕರ ಮನೆಗೆ ಹೋಗಲು 3.40ರ ವೇಳೆಗೆ ಬಾಲಕಿ ಬಾಸುಕಿನಾಥ್ ಬಸ್ ನಿಲ್ದಾಣಕ್ಕೆ ಬಂದಿದ್ದಳು. ಬಾಲಕಿ ಹೋಗಬೇಕಾದ ಸ್ಥಳಕ್ಕೆ ಕರೆದೊಯ್ಯುವುದಾಗಿ ಭರವಸೆ ನೀಡಿದ ಆಟೊ ಚಾಲಕ ಆಕೆಯನ್ನು ಕರೆದೊಯ್ದ ಎನ್ನಲಾಗಿದೆ. ಆಟೊದಲ್ಲಿ ಮತ್ತೊಬ್ಬಳು ಬಾಲಕಿಯೂ ಇದ್ದಳು ಎಂದು ತಿಳಿದು ಬಂದಿದೆ.
ಒಂದೂವರೆ ಗಂಟೆ ಕಾಲ ಪ್ರಯಾಣದ ಬಳಿಕ ಆಟೊ ಚಾಲಕ ನಿರ್ಜನ ಪ್ರದೇಶಕ್ಕೆ ಬಾಲಕಿಯನ್ನು ಕರೆದೊಯ್ದು ಪ್ರಣಯ ಸಂಭಾಷಣೆ ಆರಂಭಿಸಿದ ಎನ್ನಲಾಗಿದೆ. ಮತ್ತೊಬ್ಬಳು ಬಾಲಕಿ ತಪ್ಪಿಸಿಕೊಂಡಳು. ಆದರೆ ಈ ಬಾಲಕಿ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಈ ಸಂದರ್ಭದಲ್ಲಿ ಆಟೊ ಚಾಲಕ ಆಕೆಯ ಮೇಲೆ ಅತ್ಯಾಚಾರ ಎಸಗುವ ಪ್ರಯತ್ನ ಮಾಡಿದ ಎಂದು ದೂರು ನೀಡಲಾಗಿದೆ.
"ನನ್ನ ರಕ್ಷಣೆಗೆ ನಾನು ಪ್ರಯತ್ನಿಸಿದಾಗ, ಆ ವ್ಯಕ್ತಿ ನಾನು ಪ್ರಜ್ಞೆ ತಪ್ಪುವವರೆಗೂ ಅಮಾನುಷವಾಗಿ ದೊಣ್ಣೆಯಿಂದ ಥಳಿಸಿದ. ಬಳಿಕ ಮುಫಾಸ್ಸಿಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಸ್ತೆ ಬದಿ ಎಸೆದು ಹೋಗಿದ್ದಾನೆ. ಇಡೀ ರಾತ್ರಿ ಹಾಗೆಯೇ ಬಿದ್ದಿದ್ದೆ. ರವಿವಾರ ಮುಂಜಾನೆ ಧೈರ್ಯದಿಂದ ಕಾಲೆಳೆದುಕೊಂಡು ರಸ್ತೆಗೆ ಬಂದು ನೆರವು ಯಾಚಿಸಿದೆ" ಎಂದು ಸಂತ್ರಸ್ತ ಬಾಲಕಿ ಹೇಳಿದ್ದಾಳೆ ಎಂದು ndtv.com ವರದಿ ಮಾಡಿದೆ.







