ಮಲ್ಲಾರಿನ ಅಪ್ಪಟ ಗಾಂಧಿವಾದಿ ಬಾಬು ಮಾಸ್ತರ್ ಜೀವನವೇ ಒಂದು ಸಂದೇಶ: ಅಚ್ಯುತನಾರಾಯಣಿ
![ಮಲ್ಲಾರಿನ ಅಪ್ಪಟ ಗಾಂಧಿವಾದಿ ಬಾಬು ಮಾಸ್ತರ್ ಜೀವನವೇ ಒಂದು ಸಂದೇಶ: ಅಚ್ಯುತನಾರಾಯಣಿ ಮಲ್ಲಾರಿನ ಅಪ್ಪಟ ಗಾಂಧಿವಾದಿ ಬಾಬು ಮಾಸ್ತರ್ ಜೀವನವೇ ಒಂದು ಸಂದೇಶ: ಅಚ್ಯುತನಾರಾಯಣಿ](https://www.varthabharati.in/sites/default/files/images/articles/2022/08/22/346843-1661176741.jpg)
ಕಾಪು : ಬಾಲ್ಯದಿಂದಲೇ ಗಾಂಧಿ ವಿಚಾರಧಾರೆಗಳಿಗೆ ಪ್ರಭಾವಿತರಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದಲ್ಲದೆ ರಾಷ್ಟ್ರೀಯ ಸೇವಾದಳದ ಕಾರ್ಯಕರ್ತರಾಗಿ, ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ ಜೈಲುವಾಸ ಅನುಭವಿಸಿದ್ದ ಮಲ್ಲಾರಿನ ಅಪ್ಪಟ ಗಾಂಧಿವಾದಿ ಬಾಬು ಮಾಸ್ತರ್ ರವರ ಜೀವನವೇ ಒಂದು ಸಂದೇಶ ಎಂದು ಅವರ ಪುತ್ರಿ ಅಚ್ಯುತನಾರಾಯಣಿ ತಿಳಿಸಿದರು.
ಅವರು ರವಿವಾರ ಸ್ವಾತಂತ್ರ್ಯ ಸೇನಾನಿ ಮಲ್ಲಾರು ಬಾಬು ಮಾಸ್ತರ್ ನಿವಾಸದಲ್ಲಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು ಘಟಕದ ವತಿಯಿಂದ ಸ್ವಾತಂತ್ರ್ ಸೇನಾನಿಗಳ ಸ್ಮರಣೆಯಲ್ಲಿ ಏರ್ಪಡಿಸಿದ "ಅಮೃತಾಂಜಲಿ" ಸರಣಿ ಕಾರ್ಯಕ್ರಮದ 6ನೇ ಕಾರ್ಯಕ್ರಮವನ್ನು ಜ್ಯೋತಿ ಪ್ರಜ್ವಲನದ ಮೂಲಕ ಚಾಲನೆ ನೀಡಿ ಸೇನಾನಿ ಬಾಬು ಮಾಸ್ತರ್ ಭಾವಚಿತ್ರಕ್ಕೆ ಪುಪ್ಪಾಂಜಲಿಯೊಂದಿಗೆ ನುಡಿನಮನದಲ್ಲಿ ಮಾತನಾಡಿದರು.
ಸಮಾಜ ಸೇವಕ ಕರಂದಾಡಿ ಲೀಲಾಧರ ಶೆಟ್ಟಿ ಮಾತನಾಡಿದರು.
ಅಧ್ಯಕ್ಷತೆಯನ್ನು ಕಾಪು ತಾಲೂಕು ಕಸಾಪ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ವಹಿಸಿ ಮಾತನಾಡಿ ಕಸಾಪ ಕಾಪು ತಾಲೂಕು ಘಟಕವು ದೇಶದ ಸ್ವಾತಂತ್ರ್ಯ ಅಮೃತಮಹೋತ್ಸವದ ಹೊಸ್ತಿಲ್ಲಿ ತಾಲೂಕಿನ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿ ಅವರು ಹುಟ್ಟಿದ ಮನೆ, ಊರಿನಲ್ಲಿ ಸಂಸ್ಮರಣೆ ಮಾಡುವ ಮೂಲಕ ಗೌರವ ಸಲ್ಲಿಸುವುದರ ಜೊತೆಯಲ್ಲಿ ಅವರ ಹೋರಾಟದ ಸಂಕ್ಷಿಪ್ತ ಘಟನೆಗಳನ್ನು ಒಳಗೊಂಡ ಕಿರುಹೊತ್ತಿಗೆಯನ್ನು ಮುದ್ರಿಸಿ ಶಾಲಾ ವಾಚನಾಲಯಗಳಿಗೆ ನೀಡುವ ಬಗ್ಗೆ ಚಿಂತನೆ ನಡೆಸಿದ್ದೇವೆ ಎಂದರು.
ಕಸಾಪ ಉಡುಪಿ ಜಿಲ್ಲಾ ಕನ್ನಡ ಭವನ ನಿರ್ಮಾಣ ಸಮಿತಿಯ ಕಾರ್ಯಾಧ್ಯಕ್ಷ ಕಟ್ಟಿಂಗೇರಿ ದೇವದಾಸ್ ಹೆಬ್ಬಾರ್, ಬಾಬು ಮಾಸ್ತರ್ರವರ ಮೊಮ್ಮಗ ನಂದಕಿಶೋರ್ ತಲ್ವಾರ್ ಉಪಸ್ಥಿತರಿದ್ದರು. ಕಸಾಪ ತಾಲೂಕು ಘಟಕದ ಸದಸ್ಯೆ ಪ್ರಜ್ಞಾ ಮಾರ್ಪಳ್ಳಿ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ನೀಲಾನಂದ ನಾಯ್ಕ್ ನಿರೂಪಿಸಿದರು. ಗೌರವ ಕೋಶಾಧಿಕಾರಿ ವಿದ್ಯಾಧರ್ ಪುರಾಣಿಕ್ ವಂದಿಸಿದರು.
ಕಾರ್ಯಕ್ರಮದ ಸಮಗ್ರ ಸಂಯೋಜಕ ಎಸ್.ಎಸ್.ಪ್ರಸಾದ್, ಸದಸ್ಯರಾದ ಮಧುಕರ್ ಎಸ್.ಯು, ದೇವದಾಸ್ ಪಾಟ್ಕರ್, ಬಾಬು ಮಾಸ್ತರ್ರವರ ಮೊಮ್ಮಗ ಪ್ರಶಾಂತ್ ಮೊದಲಿಯಾರ್, ಸ್ವಾತಂತ್ರ್ಯ ಸೇನಾನಿ ಆರ್.ಜಿ.ಸಾಲಿಯಾನ್ರ ಪುತ್ರಿ ಶಾರದಾ ಎರ್ಮಾಳ್, ಆಮಂತ್ರಿತ ಗಣ್ಯರು ಉಪಸ್ಥಿತರಿದ್ದರು.