ತನ್ನದಲ್ಲದ ತಪ್ಪಿಗೆ ಕಷ್ಟ ಅನುಭವಿಸಿದ ಮಹಿಳೆಗೆ ಕೋರ್ಟ್ ರಕ್ಷಣೆ
ಉಡುಪಿ ಜಿಲ್ಲಾ ಬಳಕೆದಾರರ ನ್ಯಾಯಾಲಯದಿಂದ ಮಹತ್ವ ತೀರ್ಪು

ಉಡುಪಿ: ತನ್ನದಲ್ಲದ ತಪ್ಪಿಗಾಗಿ ಪಿಂಚಣಿ ಕಡಿತದ ಶಿಕ್ಷೆಗೊಳಗಾದ ಹೆಜಮಾಡಿಯ ಗೀತಾ ಕಾಂಚನ್(68) ಅವರಿಗೆ ಉಡುಪಿ ಜಿಲ್ಲಾ ಬಳಕೆದಾರರ ನ್ಯಾಯಾಲಯವು ರಕ್ಷಣೆ ನೀಡಿ ತೀರ್ಪು ಪ್ರಕಟಿಸಿದೆ ಎಂದು ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ಅಧ್ಯಕ್ಷ ಡಾ.ರವೀಂದ್ರನಾಥ್ ಶ್ಯಾನುಬಾಗ್ ತಿಳಿಸಿದ್ದಾರೆ.
ಉಡುಪಿ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದಲ್ಲಿ ಸೋಮವಾರ ಗೀತಾ ಕಾಂಚನ್ ಉಪಸ್ಥಿತಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಈ ಕುರಿತು ಮಾಹಿತಿ ನೀಡಿದರು.
ಪ್ರಕರಣದ ಹಿನ್ನೆಲೆ: ಹೆಜಮಾಡಿಯ ಗೀತಾ ಕಾಂಚನ್ ಪತಿಯನ್ನು ಕಳೆದುಕೊಂಡರೂ ಕೂಲಿ ಮಾಡಿ ಮೂವರು ಹೆಣ್ಣು ಮಕ್ಕಳನ್ನು ವಿದ್ಯಾ ವಂತರನ್ನಾಗಿಸಿ ಮದುವೆ ಮಾಡಿಸಿದರು. ಸುಮಾರು 17 ವರ್ಷಗಳ ಕಾಲ ಮಹಾಲಕ್ಷ್ಮಿ ಬ್ಯಾಂಕಿನ ಹೆಜಮಾಡಿ ಶಾಖೆಯಲ್ಲಿ ಅತೀ ಕಡಿಮೆ ಸಂಬಳದಲ್ಲಿ ಅಟೆಂಡರ್ಆಗಿ ಸೇವೆ ಸಲ್ಲಿಸಿ 2014ರಲ್ಲಿ ನಿವೃತ್ತಿ ಹೊಂದಿದರು. ಇವರ ಸೇವಾವಧಿಯುದ್ದಕ್ಕೂ ಬ್ಯಾಂಕಿನವರು ಪ್ರಾವಿಡೆಂಟ್ ಫಂಡ್ ದೇಣಿಗೆಯನ್ನು ಕಡಿತಗೊಳಿಸುತ್ತಿದ್ದರು. ನಿವೃತ್ತಿಯ ಮರು ತಿಂಗಳಿನಿಂದ ಸಿಗುತ್ತಿದ್ದ 1756ರೂ. ಪಿಂಚಣಿ ಮೊತ್ತದಲ್ಲಿ ಜೀವನ ಸಾಗಿಸುವುದು ಅಸಾಧ್ಯವಾಗಿತ್ತು.
ಸುಮಾರು 6 ವರ್ಷಗಳ ನಂತರ 2020ರ ಸೆ.22ರಂದು ಉಡುಪಿಯ ಪಿಎಫ್ ರೀಜನಲ್ ಕಛೇರಿಯಿಂದ ಅವರಿಗೆ ಬಂದ ಪತ್ರದಲ್ಲಿ 2020ರ ಮೇ ತಿಂಗಳಿನಿಂದ ನಿಮ್ಮ ಮಾಸಿಕ ಪಿಂಚಣಿಯಲ್ಲಿ 500 ರೂ. ಕಡಿತಗೊಳಿಸಲಾಗಿದೆ ಎಂಬ ಸೂಚನೆ ನೀಡಲಾಗಿತ್ತು. ಕಳೆದ ಆರು ವರ್ಷಗಳಿಂದ ಪ್ರತಿ ತಿಂಗಳೂ 500ರೂ. ಅಧಿಕ ಪಿಂಚಣಿ ಹಣವನ್ನು ಪಾವತಿಸಿರುವುದರಿಂದ ಈಗಾಗಲೇ ಪಾವತಿಸಿರುವ ಅಧಿಕ ಹಣ 50,147ರೂ.ಗಳನ್ನು ಏಕಗಂಟಿನಲ್ಲಿ ಡಿಮಾಂಡ್ ಡ್ರಾಪ್ಟ್ ಮೂಲಕ ಹಿಂದಿರುಗಿಸುವಂತೆ ಗೀತಾ ಅವರಿಗೆ ತಿಳಿಸಲಾಗಿತ್ತು.
ಈ ಎಲ್ಲಾ ಗೊಂದಲಗಳ ಉತ್ತರಕ್ಕಾಗಿ ಗೀತಾ, ಪ್ರತಿ ಬಾರಿ ಉಡುಪಿಯ ಕಛೇರಿಗೆ ಹೋದಾಗ ಜಂಟಿ ಡಿಕ್ಲರೇಶನ್ ಎಂಬ ದಾಖಲೆ ನಮ್ಮ ಕಡತದಲ್ಲಿಲ್ಲ, ಅದರ ಪ್ರತಿ ತಂದರೆ ಈ ಹಿಂದೆ ನೀಡಿದ ಪಿಂಚಣಿ ನೀಡಬಹುದು ಎಂದು ಅಧಿಕಾರಿಗಳು ತಿಳಿಸಿದ್ದರು.
ವಾರ್ತಾಭಾರತಿಯ ನ್ಯೂಸ್ ಅಪ್ಡೇಟ್ಸ್ ನಿಮ್ಮ ವಾಟ್ಸ್ ಆಪ್ ಗೆ ತಲುಪಬೇಕೇ ? ಈ ಲಿಂಕ್ https://bit.ly/3Cd3adz ಕ್ಲಿಕ್ ಮಾಡಿ ನಮ್ಮ ಗ್ರೂಪ್ Join ಆಗಿ.
ಪ್ರತಿಷ್ಠಾನದ ಆಶ್ರಯ: 2021ರ ಜನವರಿ ತಿಂಗಳಲ್ಲಿ ಅದೇ ಕಛೇರಿಯಿಂದ ಗೀತಾ ಅವರಿಗೆ ಬಂದ ಪತ್ರದಲ್ಲಿ ನಿಮ್ಮಿಂದ ಬರಬೇಕಾದ ಬಾಕಿ ಹಣ ನೀಡದಿದ್ದಲ್ಲಿ ಕಾನೂನು ರೀತಿಯಲ್ಲಿ ವಸೂಲಿ ಮಾಡಲಾಗುವುದು ಎಂದು ಎಚ್ಚರಿಸಲಾಗಿತ್ತು. ಇದರಿಂದ ಅವರು ನೇರವಾಗಿ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನವನ್ನು ಸಂಪರ್ಕಿಸಿ ರಕ್ಷಣೆ ಯಾಚಿಸಿದರು.
ಜಂಟಿ ಡಿಕ್ಲರೇಶನ್ ದಾಖಲೆಯನ್ನು ಹುಡುಕಿಸಿ ಕೊಡುವಂತೆ ಗೀತಾ ಮಹಾ ಲಕ್ಷ್ಮಿ ಬ್ಯಾಂಕ್ ಶಾಖೆಗೆ ತೆರಳಿ ಮನವಿ ಮಾಡಿದರು. ಶಾಖೆಯವರು ಅವರನ್ನು ಉಡುಪಿ ಮುಖ್ಯ ಕಚೇರಿಗೆ ಸಾಗ ಹಾಕಿದರು. ಅಲ್ಲಿಗೂ ಹಲವು ಬಾರಿ ಅಲೆ ದಾಡಿದರೂ ಗೀತಾ ಅವರಿಗೆ ದಾಖಲೆ ದೊರೆಯಲಿಲ್ಲ ಎಂದು ಅವರು ತಿಳಿಸಿದರು.
ದೂರು ದಾಖಲು: ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ ಪ್ರತಿಷ್ಠಾನ, ಮಹಾಲಕ್ಷ್ಮೀ ಬ್ಯಾಂಕ್ ಹಾಗೂ ಪ್ರಾವಿಡೆಂಟ್ ಪಂಡ್ ಕಛೇರಿಯ ಮುಖ್ಯಸ್ಥರಿಗೆ ಪ್ರತ್ಯೇಕ ಪತ್ರಗಳನ್ನು ಬರೆದು, ಜಂಟಿ ಡಿಕ್ಲರೇಶನ್ ದಾಖಲೆಯ ಆಧಾರದಲ್ಲಿಯೇ ಆಕೆಯ ಪಿಂಚಣಿ 1755ರೂ. ಎಂದು ನಿರ್ಧರಿಸಲಾಗಿದ್ದು, ಈಗ ಅದು ಇಲ್ಲದಿರುವುದಕ್ಕೆ ಗೀತಾ ಕಾಂಚನರನ್ನು ಹೊಣೆಗಾರರನ್ನಾಗಿಸುವುದು ಸರಿಯಲ್ಲ ಎಂದು ತಿಳಿಸಿತು.
ಇದೀಗ ನಿವೃತ್ತರಾದ 7 ವರ್ಷದ ನಂತರದ ಕಾಣೆಯಾದ ದಾಖಲೆಯ ಪ್ರತಿ ತಂದು ಕೊಡಿ ಎಂದು ಗೀತಾರನ್ನು ಸತಾಯಿಸುವುದು ನ್ಯಾಯವಲ್ಲ. ದಾಖಲೆ ಕಾಣೆಯಾಗಿದೆ ಎಂಬ ಒಂದೇ ಕಾರಣಕ್ಕಾಗಿ ಅವರ ಪಿಂಚಣಿ ಕಡಿತ ಮಾಡಿರುವುದು ಆಕೆಗೆ ಮಾಡಿರುವ ಅನ್ಯಾಯ. ಆದುದರಿಂದ ಈ ಕೂಡಲೇ ಆಕೆಗೆ ಈ ಹಿಂದೆ ನೀಡುತ್ತಿದ್ದ 1755 ರೂ.ಗಳ ಪಿಂಚಣಿಯನ್ನೇ ನೀಡಬೇಕು ಎಂದು ಪ್ರತಿಷ್ಠಾನ ಪತ್ರದಲ್ಲಿ ಆಗ್ರಹಿಸಿತು. ಅಲ್ಲದೆ ಮಹಾಲಕ್ಷ್ಮೀ ಬ್ಯಾಂಕ್ ಮತ್ತು ಪಿಎಫ್ ಕಛೇರಿಯ ವಿರುದ್ಧ ಉಡುಪಿ ಜಿಲ್ಲಾ ಬಳಕೆದಾರರ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಯಿತು.
ಕೋರ್ಟ್ ತೀರ್ಪು: ಸುಮಾರು 9 ತಿಂಗಳುಗಳ ಕಾಲ ವಿಚಾರಣೆ ನಡೆಸಿದ ನ್ಯಾಯಾಲಯ, ಕೂಡಲೇ ಗೀತಾ ಕಾಂಚನ್ರಿಗೆ ಈವರೆಗೆ ನೀಡಿದಂತಹ 1756ರೂ.ಗಳ ಮಾಸಿಕ ಪಿಂಚಣಿಯನ್ನು ನೀಡಬೇಕು ಎಂದು ಪಾವಿಡೆಂಟ್ ಪಂಡ್ ಸಂಸ್ಥೆಗೆ ಆದೇಶಿಸಿದೆ.
ಕಳೆದೆರಡು ವರ್ಷಗಳಿಂದ ಕಡಿತಗೊಳಿಸಿದ್ದ 500ರೂ. ಮಾಸಿಕ ಪಿಂಚಣಿಯ ಬಾಕಿಯನ್ನು ಆಕೆಗೆ ಪಾವತಿಸಬೇಕು ಹಾಗೂ ಹೆಚ್ಚಾಗಿ ಪಾವತಿಸಿದೆ ಎನ್ನಲಾದ 50,147ರೂ.ಗಳನ್ನು ಆಕೆಯಿಂದ ವಸೂಲಿ ಮಾಡುವ ಪ್ರಕ್ರಿಯೆಯನ್ನು ನಿಲ್ಲಿಸಬೇಕು ಎಂದು ಆದೇಶದಲ್ಲಿ ತಿಳಿಸಿತು.
ಇದರೊಂದಿಗೆ ಕಳೆದೆರಡು ವರ್ಷಗಳಿಂದ ಮಾನಸಿಕವಾಗಿ ಜರ್ಜರಿತವಾಗಿ ರುವ ಗೀತಾ ಕಾಂಚನ್ರಿಗೆ ಪರಿಹಾರವಾಗಿ 25,000ರೂ. ಹಾಗೂ ದಾವೆಗಾಗಿ ವ್ಯಯಿಸಿದ 10,000 ರೂ. ಒಂದು ತಿಂಗಳೊಳಗಾಗಿ ನೀಡುವಂತೆ ನ್ಯಾಯಾ ಲಯ ಆದೇಶಿಸಿದೆ ಎಂದು ಡಾ.ರವೀಂದ್ರನಾಥ್ ಶಾನುಭಾಗ್ ತಿಳಿಸಿದರು.







