ಸ್ವಾತಂತ್ರ್ಯ ಸೇನಾನಿಗಳಿಗೆ ಅಪಮಾನ ದೇಶದ್ರೋಹದ ಕೆಲಸ : ರಮಾನಾಥ ರೈ
ಬ್ಲಾಕ್ ಕಾಂಗ್ರೆಸ್ ವತಿಯಿಂದ ಬಂಟ್ವಾಳ ತಾಲೂಕಿನಲ್ಲಿ ಪಾದಯಾತ್ರೆ

ಬಂಟ್ವಾಳ, ಆ. 23: ಪರಕೀಯರ ದಾಸ್ಯದಿಂದ ಈ ದೇಶಕ್ಕೆ ಸ್ವಾತಂತ್ರ್ಯ ಸಿಗಲು ತಮ್ಮ ಜೀವನವನ್ನೇ ಮುಡುಪಾಗಿಟ್ಟ ಸ್ವಾತಂತ್ರ ಸೇನಾನಿಗಳನ್ನು ಅಪಮಾನ ಮಾಡುವ ಕೆಲಸ ಇಂದು ಬಹಿರಂಗವಾಗಿ ನಡೆಯುತ್ತಿದ್ದು, ಸ್ವಾತಂತ್ರ್ಯ ಸೇನಾನಿಗಳಿಗೆ ಅಪಮಾನ ಮಾಡುವವರು ದೇಶ ದ್ರೋಹಿಗಳಾಗಿದ್ದಾರೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ದೇಶಾದ್ಯಂತ ಕಾಂಗ್ರೆಸ್ ವತಿಯಿಂದ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸುವ ಕಾರ್ಯಕ್ರಮದ ಅಂಗವಾಗಿ ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ನಿಂದ ಬಂಟ್ವಾಳ ತಾಲೂಕಿನಲ್ಲಿ ಮಂಗಳವಾರ ಹಮ್ಮಿಕೊಂಡ ಪಾದಯಾತ್ರೆಯ ಸಮಾರೋಪ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು.
ಯಾವ ದೇಶದಲ್ಲಿ ಮನುಷ್ಯರ ನಡುವೆ ಒಗ್ಗಟ್ಟು ಮುರಿದು ಸಂಘರ್ಷ ನಡೆಯುತ್ತದೆಯೋ ಆ ದೇಶ ಸಂಪೂರ್ಣ ನಾಶವಾದ ಇತಿಹಾಸ ಇದೆ. ಆದರೆ ದೇಶದ ಜನರು ಒಗ್ಗಟ್ಟಾಗಿ ಅಹಿಂಸಾ ಮತ್ತು ಜಾತ್ಯಾತೀತವಾಗಿ ನಡೆದ ಹೋರಾಟವೇ ಸ್ವಾತಂತ್ಯ ಸಂಗ್ರಾಮವಾಗಿದ್ದು ಈ ಮಾದರಿ ಹೋರಾಟ ಯಶಸ್ವಿಯಾಗಿ ದೇಶ ಸ್ವಾತಂತ್ರ್ಯ ಗೊಂಡಿದೆ. ದೇಶದ ಜನರು ಒಗ್ಗಟ್ಟು ಮುರಿದಿದ್ದರೆ, ಜಾತಿ ಧರ್ಮಗಳ ನಡುವೆ ಸಂಘರ್ಷಕ್ಕೆ ಇಳಿದಿದ್ದರೆ ಪರಕೀಯರು ಅದರ ಲಾಭ ಪಡೆದು ಇಂದಿಗೂ ದೇಶ ಸ್ವಾತಂತ್ರವಾಗುತ್ತಿರಲಿಲ್ಲ ಎಂದು ಅವರು ನುಡಿದರು.
ಜಾತಿ, ಧರ್ಮದ ನಡುವೆ ಕಲಹ ಏರ್ಪಟ್ಟು ಜನಾಂಗೀಯ ಸಂಘರ್ಷ ನಡೆಯಲು ಕೆಲವರು ಇಂದು ಕಾಯುತ್ತಿದ್ದಾರೆ. ಅದರಿಂದ ಅವರಿಗೆ ರಾಜಕೀಯ ಲಾಭ ಇದೆ. ಮತ ಬ್ಯಾಂಕ್ ಅನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ. ಆದರೆ ಇದರಿಂದ ದೇಶ ಅವನತಿ ಕಾಣುತ್ತದೆ. ಇದಕ್ಕೆ ಯಾರೂ ಅವಕಾಶ ಕೊಡಬಾರದು. ಮುಂದಿನ ಭಾರತ ಸುಂದರ, ಸಾಮರಸ್ಯದ, ಸೌಹಾರ್ದದ, ಮೇಲು ಕೀಳು ಇಲ್ಲದ ದೇಶ ಆಗಲಿ ಎಂದು ಹೇಳಿದರು.
ನ್ಯಾಯವಾದಿ ಸುದೀರ್ ಕುಮಾರ್ ಕೊಪ್ಪ ಮಾತನಾಡಿ, ಕಾಂಗ್ರೆಸ್ ಇಲ್ಲದ ಭಾರತವನ್ನು ಊಹಿಸಲೂ ಸಾಧ್ಯವಿಲ್ಲ. ಶಿಕ್ಷಣ, ಆರೋಗ್ಯ, ರೈಲ್ವೆ, ವಿಮಾನ, ಬ್ಯಾಂಕ್, ಬಂದರು, ಸೇನೆ ಹೀಗೆ ಸರ್ವವನ್ನು ಕಟ್ಟಿ ಬೆಳೆಸಿದ್ದು ಕಾಂಗ್ರೆಸ್. ಅದನ್ನು ಮಾರಾಟ ಮಾಡಿ ತಿನ್ನುವವರಿಗೆ ಅದರ ಮಹತ್ವ ತಿಳಿಯದು. ಅತ್ಯಾಚಾರಿಗಳನ್ನು ಬಿಡುಗಡೆ ಮಾಡಿ ಅವರಿಗೆ ಸನ್ಮಾನಿಸುವ ದುಷ್ಟ ಪರಂಪರೆ, ಹಿನ್ನಲೆ ಇರುವವರಿಗೆ ಇವೆಲ್ಲಾ ಹೇಗೆ ಅರ್ಥವಾಗುತ್ತದೆ. ಅವರಿಗೆ ಸ್ವಾತಂತ್ರ್ಯದ ಮಹತ್ವವೇ ಗೊತ್ತಿಲ್ಲ ಎಂದು ಹೇಳಿದರು.
ಬೆಳಗ್ಗೆ ಬಂಟ್ವಾಳದ ಮಣಿಹಳ್ಳ ಜಂಕ್ಷನ್ ನಲ್ಲಿ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ಜಕ್ರಿಬೆಟ್ಟು - ಬಂಟ್ವಾಳ ಪೇಟೆ - ಬಸ್ತಿಪಡ್ಪು - ಬಿ.ಸಿ.ರೋಡ್ ನಾರಾಯಣ ಗುರು ವೃತ್ತ - ಮೆಲ್ಕಾರ್ ಜಂಜ್ಷನ್ - ಆಳಡ್ಕ - ಪಾಣೆಮಂಗಳೂರು ಪೇಟೆ - ಗೂಡಿನಬಳಿ - ಬಿ.ಸಿ.ರೋಡ್ ನಾರಾಯಣಗುರು ವೃತ್ತ - ಸರ್ವೀಸ್ ರಸ್ತೆಯ ಮೂಲಕ ಸಾಗಿ ಬಂದ ಪಾದಯಾತ್ರೆ ಕೈಕಂಬದಲ್ಲಿ ಸಮಾಪರೋಪಗೊಂಡಿತು.
ಪಕ್ಷದ ಪ್ರಮುಖರಾದ ಪಿಯೂಸ್ ಎಲ್. ರೋಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪದ್ಮಶೇಖರ ಜೈನ್, ಎಂ.ಎಸ್.ಮುಹಮ್ಮದ್, ಮಮತಾ ಗಟ್ಟಿ, ಸುದರ್ಶನ್ ಜೈನ್, ದಿವ್ಯ ಪ್ರಭಾ ಗೌಡ ಚಿಲ್ತಡ್ಕ, ಜಯಂತಿ ಪೂಜಾರಿ, ಮಾಯಿಲಪ್ಪ ಸಾಲ್ಯಾನ್, ಅಬ್ಬಾಸ್ ಅಲಿ, ಸುಭಾಶ್ಚಂದ್ರ ಶೆಟ್ಟಿ ಕೊಳ್ನಾಡು, ಅರ್ಶದ್ ಸರವು, ಇಬ್ರಾಹೀಂ ನವಾಝ್ ಬಡಕಬೈಲ್, ಸುರೇಶ್ ಜೋರಾ, ಶರೀಫ್ ಶಾಂತಿ ಅಂಗಡಿ, ಹಸೈನಾರ್ ಶಾಂತಿಅಂಗಡಿ, ಅಬೂಬಕ್ಕರ್ ಸಿದ್ದೀಕ್ ಬೋಗೋಡಿ, ಉಮಾನಾಥ ಶೆಟ್ಟಿ, ಸದಾಶಿವ ಬಂಗೇರ, ಮುಹಮ್ಮದ್ ನಂದರಬೆಟ್ಟು, ಲೋಲಾಕ್ಷ, ಹೈಡಾ ಸುರೇಶ್, ಜೋಸ್ಮಿನ್ ಪಿಂಟೋ, ಯೂಸುಫ್ ಕರಂದಾಡಿ, ಚಿತ್ತರಂಜನ್ ಶೆಟ್ಟಿ, ಈಶ್ವರ ಭಟ್ ಪುತ್ತೂರು, ಮುಹಮ್ಮದ್ ನಂದಾವರ, ರಝಾಕ್ ಕುಕ್ಕಾಜೆ, ಸಿದ್ದೀಕ್ ಸರವು, ಅನ್ವರ್ ಖಾಸಿಂ, ಫಾರೂಕ್ ಬಯಬೆ, ಹನೀಫ್ ಪುನ್ಚತ್ತಾರ್, ಪಿ.ಎ.ರಹೀಂ ಬಿ.ಸಿ.ರೋಡ್, ಕೆ.ಶ್ರೀಧರ ರೈ, ಬಾಲಕೃಷ್ಣ ಆಳ್ವ ಕೊಡಾಜೆ, ನಿರಂಜನ್ ರೈ, ಕಾಂಗ್ರೆಸ್ ಸೇವಾದಳದ ಜಿಲ್ಲಾಧ್ಯಕ್ಷ ಜೋಕಿಂ ಡಿ'ಸೋಜಾ, ಜಿಲ್ಲಾ ಪದಾಧಿಕಾರಿಗಳಾದ ಝುಬೈರ್ ತಲಮುಗೇರ್, ಮಧುಸೂದನ್ ಭಟ್, ವೆಂಕಪ್ಪ ಪೂಜಾರಿ, ಸಮೀರ್, ಅಬ್ದುಲ್ ಅಝೀಝ್ ಜಿ.ಎಂ, ಚಂದ್ರಕಲಾ ರಾವ್ ಹಾಗೂ ಚಂದ್ರಕಲಾ ಜೋಗಿ ಮೊದಲಾದವರು ಭಾಗವಹಿಸಿದ್ದರು.
ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಸ್ವಾಗತಿಸಿ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ವಂದಿಸಿದರು.