ಉಡುಪಿ; ನಿರ್ಲಕ್ಷ್ಯತನದಿಂದ ಆಟೋ ಚಲಾಯಿಸಿ ಒಬ್ಬರ ಸಾವಿಗೆ ಕಾರಣವಾದ ಆರೋಪಿಗೆ ಶಿಕ್ಷೆ

ಉಡುಪಿ, ಆ.24: ದುಡುಕು ಹಾಗೂ ನಿರ್ಲಕ್ಷ್ಯತನದಿಂದ ಆಟೋ ಚಲಾಯಿಸಿ, ದ್ವಿಚಕ್ರ ವಾಹನ ಸವಾರನ ಸಾವಿಗೆ ಕಾರಣವಾದ ಆರೋಪಿ ಅಟೋ ಚಾಲಕನಿಗೆ ನಗರದ 1ನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ.
2018ರ ನವೆಂಬರ್ 12ರಂದು ಸಂಜೆ 4.15ರ ಸುಮಾರಿಗೆ ಉದ್ಯಾವರದ ಸಂಪತ್ಕುಮಾರ್ ಎಂಬಾತ ಡಯಾನ ಜಂಕ್ಷನ್ನಿಂದ ಹಳೇ ತಾಲೂಕು ಆಫೀಸ್ ಕಡೆಗೆ ಏಕಮುಖ ಸಂಚಾರ ರಸ್ತೆಯಲ್ಲಿ ತನ್ನ ಆಟೋರಿಕ್ಷಾ ವನ್ನು ನಿರ್ಲಕ್ಷ್ಯತನದಿಂದ ಚಲಾಯಿಸಿ, ದ್ವಿಚಕ್ರ ವಾಹನ ಸವಾರ ಗಣೇಶ್ ಎಂಬವರಿಗೆ ಡಿಕ್ಕಿ ಹೊಡೆದ ಪರಿಣಾಮ, ಗಣೇಶ್ ರಸ್ತೆಗೆ ಬಿದ್ದು, ತಲೆ ಹಾಗೂ ದೇಹದ ಇತರೆ ಭಾಗಗಳಿಗೆ ತೀವ್ರವಾಗಿ ಗಾಯಗೊಂಡು ಮೃತಪಟ್ಟಿರುವ ಹಿನ್ನೆಲೆಯಲ್ಲಿ ಉಡುಪಿ ಸಂಚಾರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆದು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 1ನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶ ಶ್ಯಾಮ್ಪ್ರಕಾಶ್ ಅವರು ಆರೋಪಿ ಸಂಪತ್ ಕುಮಾರ್ಗೆ 2 ವರ್ಷ ಕಾರಾಗೃಹ ವಾಸ ಶಿಕ್ಷೆ ಹಾಗೂ 18 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕಿ ಮೋಹಿನಿ ಕೆ ವಾದ ಮಂಡಿಸಿದ್ದರು.