ಬೆಂಗಳೂರು: ಸಾವರ್ಕರ್ ಬದಲು ಪುನೀತ್ ರಾಜ್ಕುಮಾರ್, ಶಂಕರ್ ನಾಗ್ ಗಣೇಶೋತ್ಸವಕ್ಕೆ ಪಟ್ಟು

ಬೆಂಗಳೂರು, ಆ.24: ರಾಜ್ಯ ಸರಕಾರವೂ ಸಾವರ್ಕರ್ ಉತ್ಸವ ಬದಲು ಈ ಬಾರಿ ಗಣೇಶೋತ್ಸವದೊಂದಿಗೆ ಕನ್ನಡ ಚಿತ್ರರಂಗದ ದಿವಂಗತ ನಟರಾದ ಪುನೀತ್ ರಾಜ್ಕುಮಾರ್, ಶಂಕರ್ ನಾಗ್ ಅವರ ಉತ್ಸವಗಳನ್ನು ಮಾಡಲಿ ಎಂದು ಶಂಕರ್ ನಾಗ್ ಕನ್ನಡ ಜ್ಯೋತಿ ಗೆಳೆಯರ ಬಳಗ ಆಗ್ರಹಿಸಿದೆ.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಳಗದ ಕಾರ್ಯದರ್ಶಿ ಗಜೇಂದ್ರ, 'ಕರ್ನಾಟಕ ರಾಜ್ಯಕ್ಕೂ ಸಾವರ್ಕರ್ ಗೂ ಯಾವುದೇ ಸಂಬಂಧ ಇಲ್ಲ. ಅಂತಹ ವ್ಯಕ್ತಿಯ ಹೆಸರಿನಲ್ಲಿ ಸಾರ್ವಜನಿಕರ ಹಣದಿಂದ ಈ ರೀತಿಯ ಕಾರ್ಯಕ್ರಮ ಆಯೋಜನೆ ಮಾಡುವುದು ಖಂಡನೀಯ' ಎಂದರು.
ರಾಜ್ಯದಲ್ಲಿ ಕೋಮುಗಲಭೆ ಸೃಷ್ಟಿಸುವ ಭಾರೀ ಸಂಚು ಇದೆ. ಹಾಗಾಗಿ, ಈ ರೀತಿಯ ವಿವಾದಿತ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಇದನ್ನು ಹತ್ತಿಕ್ಕಬೇಕಾದ ಸರಕಾರವೇ ಪ್ರೋತ್ಸಾಹ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ವಾಗ್ದಾಳಿ ನಡೆಸಿದರು.
ರಾಜ್ಯ ಸರಕಾರ ಚಾಮರಾಜೇಂದ್ರ ಒಡೆಯರ್, ಅಪ್ಪು ಹಾಗೂ ಶಂಕರ್ ನಾಗ್ ಗಣೇಶೋತ್ಸವ ಆಚರಣೆಗೆ ಮುಂದಾಗಬೇಕು. ಇಲ್ಲದಿದ್ದರೆ, ನಾವೇ ಸ್ವತಃ ಅಭಿಮಾನಿಗಳೇ ಆಚರಣೆ ಮಾಡುತ್ತೇವೆ ಎಂದು ತಿಳಿಸಿದರು.







