ಉಡುಪಿ ಜಿಲ್ಲೆಯ ರಜತ ಮಹೋತ್ಸವಕ್ಕೆ ವರ್ಣರಂಜಿತ ಚಾಲನೆ
ಮಹಿಳೆಯರ ಪ್ರಾಬಲ್ಯದ ಜಿಲ್ಲಾ ಪರಂಪರೆ ಮುಂದುವರಿಯಲಿ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

ಉಡುಪಿ(Udupi): ಜಿಲ್ಲೆ ರಚನೆಗೊಂಡು 25 ವರ್ಷ ಪೂರ್ಣಗೊಂಡ ಉಡುಪಿಯ ವೈಶಿಷ್ಟಗಳಲ್ಲಿ ಮಹತ್ವದ್ದು, ಇಲ್ಲಿ ಮಹಿಳೆಯರ ಸಂಖ್ಯೆ ಪುರುಷರಿಗಿಂತ ಅಧಿಕವಿರುವುದು. ದೇಶದ ಯಾವುದೇ ರಾಜ್ಯ ಹಾಗೂ ಜಿಲ್ಲೆಗಿಂತ ಅಧಿಕವಾಗಿರುವ ಈ ಪರಂಪರೆ ಮುಂದುವರಿದುಕೊಂಡು ಹೋಗಲು ಜಿಲ್ಲೆಯ ಎಲ್ಲಾ ಜಾಗೃತ ಜನತೆ ಸಹಕರಿಸಬೇಕು ಎಂದು ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್(Thawar Chand Gehlot) ಹೇಳಿದ್ದಾರೆ.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಿಂದ ಭೌಗೋಳಿಕವಾಗಿ ಬೇರ್ಪಟ್ಟು ಹೊಸ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದ ಉಡುಪಿ ಜಿಲ್ಲೆಗೆ 25 ವರ್ಷ ಪೂರ್ಣಗೊಂಡ ಸಂದರ್ಭದಲ್ಲಿ ಜಿಲ್ಲಾಡಳಿತದ ವತಿಯಿಂದ ನಗರದ ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಆಯೋಜಿಸಲಾದ ಉಡುಪಿ ಜಿಲ್ಲೆಯ ರಜತ ಮಹೋತ್ಸವ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಉಡುಪಿ ಜಿಲ್ಲೆಗೆ ಇದು ನನ್ನ ಎರಡನೇ ಭೇಟಿಯಾಗಿದೆ. ಇಲ್ಲಿಗೆ ನಾನು ಪದೇ ಪದೇ ಭೇಟಿ ನೀಡಲು ಇಚ್ಛಿಸುತ್ತೇನೆ. ಏಕೆಂದರೆ ಇದು ದೇವ-ದೇವತೆಗಳ ನಾಡು. 13ನೇ ಶತಮಾನದಿಂದಲೇ ಇದು ಧಾರ್ಮಿಕ ಕ್ಷೇತ್ರವಾಗಿ ಪ್ರಸಿದ್ಧಿ ಪಡೆದಿದೆ ಎಂದವರು ನುಡಿದರು.
ಅಸ್ತಿತ್ವಕ್ಕೆ ಬಂದು 25 ವರ್ಷಗಳಲ್ಲಿ ಉಡುಪಿ ಜಿಲ್ಲೆ ಅತ್ಯಂತ ವೇಗದ ಅಭಿವೃದ್ಧಿಯನ್ನು ಸಾಧಿಸಿದೆ. ಇಲ್ಲಿನ ಮೂಲಸೌಕರ್ಯಗಳು ವೇಗವಾಗಿ ಬೆಳೆದಿದೆ. ಇದಕ್ಕೆ ಇಲ್ಲಿಗೆ ಬಂದ ಎಲ್ಲಾ ಪ್ರಾಮಾಣಿಕ ಅಧಿಕಾರಿಗಳ, ಜನಪ್ರತಿನಿಧಿ ಗಳ ಕೊಡುಗೆ ಇದೆ. ಎಲ್ಲರ ಸಹಕಾರದಿಂದ ಜಿಲ್ಲೆ ಅತ್ಯಂತ ವೇಗದ ಅಭಿವೃದ್ಧಿ ಕಾಣಲು ಸಾಧ್ಯವಾಗಿದೆ ಎಂದವರು ಹೇಳಿದರು.
ಕರ್ನಾಟಕದ ಸಮುದ್ರದ ತೀರದಲ್ಲಿರುವ ಉಡುಪಿ ಜಿಲ್ಲೆ, ಐತಿಹಾಸಿಕ, ಸಾಂಸ್ಕೃತಿಕ, ಧಾರ್ಮಿಕ ಹಾಗೂ ಕಲಾಸಂಸ್ಕೃತಿಯ ಸಮೃದ್ಧಿಗಾಗಿ ಪ್ರಸಿದ್ಧವಾದುದು. ಇಲ್ಲಿ ಸೌಹಾರ್ದತೆಯ ವಾತಾವರಣವಿದೆ. ಪ್ರಾಕೃತಿಕ ಸೌಂದರ್ಯ ಹಾಗೂ ಮಂದಿರಗಳಿಗೆ ಪ್ರಸಿದ್ಧವಾದುದು. ಧರ್ಮಸಂಸ್ಕೃತಿಗಳ ಪಾವನ ಕ್ಷೇತ್ರದ ಬೆಳವಣಿಗೆಯಲ್ಲಿ ಜಾಗರೂಕ ಜನಪ್ರತಿನಿಧಿಗಳ ಪಾತ್ರ ಹಿರಿದಾಗಿದೆ ಎಂದರು.
ಜಿಲ್ಲೆಯ ಪರಂಪರೆ, ಇತಿಹಾಸ, ಧರ್ಮ ಮತ್ತು ಸಂಸ್ಕೃತಿ ಜೀವಂತವಾಗಿ ರುವಲ್ಲಿ ಜಿಲ್ಲೆಯ ಜನತೆಯ ಪ್ರಾತ್ರ ಹಿರಿದಾಗಿದ್ದು, ಇದರಿಂದಾಗಿ ಜಿಲ್ಲೆ ಪ್ರಗತಿಯ ಪಥದಲ್ಲಿದೆ. ಇದೇ ರೀತಿಯ ಪ್ರಗತಿ ಮುಂದುವರಿದರೆ ಉಡುಪಿ, ರಾಜ್ಯದ ಅಗ್ರಗಣ್ಯ ಜಿಲ್ಲೆ ಎನಿಸಿಕೊಳ್ಳುವ ಸಂಪೂರ್ಣ ವಿಶ್ವಾಸ ತನಗಿದೆ ಎಂದು ಗೆಹ್ಲೋಟ್ ನುಡಿದರು.
ಮಲ್ಪೆಯಲ್ಲಿರುವ ಸರ್ವಋತು ಮೀನುಗಾರಿಕಾ ಬಂದರು ಪ್ರದೇಶಕ್ಕೆ ನಾನಿಂದು ಭೇಟಿ ನೀಡಿದ್ದೇನೆ. ಸುಮಾರು ಎರಡು ಲಕ್ಷ ಮೀನುಗಾರರಿಗೆ ಇದು ಉದ್ಯೋಗವನ್ನು ನೀಡಿದೆ. ಮಲ್ಪೆಯನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸುವಂತೆ ಸಲಹೆ ನೀಡಿದ ರಾಜ್ಯಪಾಲರು ಇದಕ್ಕೆ ಯಾವುದೇ ಸಹಕಾರ ಅಪೇಕ್ಷಿಸಿದರೆ ನಿಮ್ಮೊಂದಿಗೆ ಸಹಕರಿಸಲು ಸಿದ್ಧನಿದ್ದೇನೆ ಎಂದರು.
ಕೇಂದ್ರ ಸರಕಾರದ ಸಾಗರಮಾಲಾ ಯೋಜನೆಯ ಮೂಲಕ ಅನೇಕ ಯೋಜನೆಗಳು ಉಡುಪಿ ಜಿಲ್ಲೆಗೆ ಬರಲು ಸಿದ್ಧವಾಗಿದ್ದು, ಮುಂಬರುವ ದಿನಗಳಲ್ಲಿ ಜಿಲ್ಲೆ ಇನ್ನಷ್ಟು ವೇಗದ ಪ್ರಗತಿ ಸಾಧಿಸುವುದರಲ್ಲಿ ಸಂಶಯವಿಲ್ಲ ಎಂದವರು ವಿಶ್ವಾಸ ವ್ಯಕ್ತಪಡಿಸಿದರು.
1997ರ ಆ.25ರಂದು ಉಡುಪಿ ಜಿಲ್ಲೆ ಅಸ್ತಿತ್ವಕ್ಕೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿ ಅಂದಿನ ಜನರ ಬಹುಕಾಲದ ಕನಸನ್ನು ನನಸು ಮಾಡಿದ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಪ್ರಸ್ತುತ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿರುವ ಕೆ.ಜಯಪ್ರಕಾಶ್ ಹೆಗ್ಡೆ ಅವರನ್ನು ರಜತೋತ್ಸವ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಹೆಗ್ಡೆ, ಉಡುಪಿ ಜಿಲ್ಲೆ ಅಸ್ತಿತ್ವಕ್ಕೆ ಬರಲು ಸಹಕರಿಸಿದ ತನ್ನ ಸಹೋದ್ಯೋಗಿಗಳಾದ ಮುಖ್ಯಮಂತ್ರಿ ಜೆ.ಎಚ್.ಪಟೇಲ್, ಎಂ.ಪಿ.ಪ್ರಕಾಶ್, ಡಾ.ವಿ.ಎಸ್.ಆಚಾರ್ಯ, ಬಿ.ಎ.ಮೊಯ್ದಿನ್, ಡಾ.ವೀರಪ್ಪ ಮೊಯ್ಲಿ, ಯು.ಆರ್.ಸಭಾಪತಿ ಅವರನ್ನು ನೆನಪಿಸಿಕೊಂಡರು.
ಮುಂದಿನ ದಿನಗಳಲ್ಲಿ ಜನರ ಕೆಲಸ ಸಾಧ್ಯವಾದಷ್ಟು ವೇಗದಲ್ಲಿ ಆಗುವಂತೆ ಅಧಿಕಾರಿಗಳು ಗಮನ ಹರಿಸಬೇಕು. ಜಿಲ್ಲೆಯಲ್ಲಿ ಪ್ರವಾಸೋದ್ಯಮ ನಿರೀಕ್ಷಿತ ಪ್ರಗತಿ ಕಂಡಿಲ್ಲ. ಶೀಘ್ರದಲ್ಲೇ 2-3 ಉಪವಿಭಾಗಗಳೊಂದಿಗೆ, ಎಸಿಎಫ್ ಕಚೇರಿ ಹಾಗೂ ಇನ್ನೊಂದು ಆರ್ಟಿಓ ಕಚೇರಿ ತೆರೆಯಲು ಮುತುವರ್ಜಿ ವಹಿಸಬೇಕು ಎಂದು ಸಲಹೆ ನೀಡಿದರು.
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಹಾಗೂ 1997ಲ್ಲಿ ಶಾಸಕರಾಗಿದ್ದ ರಾಜ್ಯದ ಮಾಜಿ ಮುಖಮಂತ್ರಿ ಡಾ.ಎಂ. ವೀರಪ್ಪ ಮೊಯ್ಲಿ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು.
ಉಡುಪಿ ಶಾಸಕ ಕೆ.ರಘುಪತಿ ಭಟ್ ಅಧ್ಯಕ್ಷತೆಯ ಕಾರ್ಯಕ್ರಮದಲ್ಲಿ ರಾಜ್ಯ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ, ರಾಜ್ಯ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ರಾಜ್ಯ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ಕುಮಾರ್, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕಾಪು ಶಾಸಕ ಲಾಲಾಜಿ ಮೆಂಡನ್, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಕರಾವಳಿ ಅಭಿವೃದ್ಧಿ ಪ್ರಾದಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ದಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿ.ನ ಅಧ್ಯಕ್ಷ ಕೆ.ಉದಯಕುಮಾರ್ ಶೆಟ್ಟಿ, ನಗರಸಭಾ ಅಧ್ಯಕ್ಷೆ ಸುಮಿತ್ರಾ ಆರ್.ನಾಯಕ್, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮನೋಹರ್ ಎಸ್.ಕಲ್ಮಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಅವರು ಅತಿಥಿಗಳನ್ನು ಸ್ವಾಗತಿಸಿದರೆ, ಶಾಸಕ ಕೆ.ರಘುಪತಿ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬೆಂಗಳೂರಿನ ಶಂಕರ್ಪ್ರಕಾಶ್ ಕಾರ್ಯಕ್ರಮ ನಿರೂಪಿಸಿ, ಉಡುಪಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಚ್. ವಂದಿಸಿದರು.
ಕಾರ್ಯಕ್ರಮದಲ್ಲಿ ಉಡುಪಿಯ ಪೊಲೀಸ್ ಬ್ಯಾಂಡ್ ರಾಷ್ಟ್ರಗೀತೆಯನ್ನು ನುಡಿಸಿದರೆ, ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ಕಾಮತ್ ನೇತೃತ್ವದಲ್ಲಿ ಶಿಕ್ಷಕಿಯರು ನಾಡಗೀತೆಯನ್ನು ಹಾಡಿದರು. ಉಡುಪಿಯ ಯಕ್ಷಶಿಕ್ಷಣ ಟ್ರಸ್ಟ್ನ ವಿದ್ಯಾರ್ಥಿಗಳು ಯಕ್ಷಗಾನ ನಾಟ್ಯದ ಮೂಲಕ ಅತಿಥಿಗಳನ್ನು ವಿಶಿಷ್ಟವಾಗಿ ಸ್ವಾಗತಿಸಿದರು.
ಪ್ರಥಮ ಜಿಲ್ಲಾಧಿಕಾರಿ ಜಿ.ಕಲ್ಪನಾಗೆ ಸನ್ಮಾನ
25 ವರ್ಷಗಳ ಹಿಂದೆ ಜಿಲ್ಲೆ ಅಸ್ತಿತ್ವಕ್ಕೆ ಬಂದಾಗ ಪ್ರಥಮ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿ, ಎದುರಾದ ಎಲ್ಲಾ ಸವಾಲುಗಳನ್ನು ಎದುರಿಸಿ ಯಶಸ್ವಿಯಾದ ಐಎಎಸ್ ಅಧಿಕಾರಿ ಡಾ.ಕಲ್ಪನಾ ಗೋಪಾಲನ್ ಅವರು ಸಮಾರಂಭದಲ್ಲಿ ಉಪಸ್ಥಿತರಿದ್ದು, ಜಿಲಾಡಳಿತದ ವತಿಯಿಂದ ಸನ್ಮಾನಿಸಲ್ಪಟ್ಟರು.
ಇವರೊಂದಿಗೆ ದಾನಿಗಳಾದ ಮಾಹೆ ವಿವಿ ಕುಲಪತಿ ಲೆ.ಜ.(ಡಾ.) ವೆಂಕಟೇಶ್, ಉದ್ಯಮಿ ಜಿ.ಶಂಕರ್, ನಿಟ್ಟೆ ವಿವಿಯ ಎನ್.ವಿಶಾಲ್ ಹೆಗ್ಡೆ ಅವರನ್ನು ರಜತೋತ್ಸವ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು.
