ಬ್ರಹ್ಮೋಸ್ ಕ್ಷಿಪಣಿ ಆಕಸ್ಮಿಕ ಉಡಾವಣೆ ಪ್ರಕರಣ: ಭಾರತದ ಕ್ರಮವನ್ನು ತಿರಸ್ಕರಿಸಿದ ಪಾಕ್
ಇಸ್ಲಮಾಬಾದ್, ಆ.೨೫: ಕಳೆದ ಮಾರ್ಚ್ನಲ್ಲಿ ಬ್ರಹ್ಮೋಸ್ ಕ್ಷಿಪಣಿಯನ್ನು ಪಾಕಿಸ್ತಾನದ ಗಡಿಯೊಳಗೆ ಆಕಸ್ಮಿಕವಾಗಿ ಉಡಾಯಿಸಿದ ಪ್ರಕರಣದಲ್ಲಿ ಭಾರತ ಕೈಗೊಂಡಿರುವ ಕ್ರಮವನ್ನು ತಿರಸ್ಕರಿಸುವುದಾಗಿ ಪಾಕಿಸ್ತಾನ ಹೇಳಿದ್ದು, ಪ್ರಕರಣದ ಕುರಿತು ಜಂಟಿ ತನಿಖೆಯ ಆಗ್ರಹವನ್ನು ಪುನರುಚ್ಚರಿಸಿದೆ.
ಮಾರ್ಚ್ 9ರಂದು ಅತೀ ವೇಗದ ಭಾರತದ ಕ್ಷಿಪಣಿಯೊಂದು ತನ್ನ ವಾಯುಪ್ರದೇಶವನ್ನು ಪ್ರವೇಶಿಸಿ ಖನೇವಾಲ್ ಜಿಲ್ಲೆಯ ಮಿಯಾನ್ ಚನ್ನು ನಗರದ ಬಳಿ ಅಪ್ಪಳಿಸಿ ಕೆಲವು ನಾಗರಿಕ ಆಸ್ತಿಗಳಿಗೆ ಹಾನಿ ಎಸಗಿದೆ ಎಂದು ಪಾಕಿಸ್ತಾನ ಹೇಳಿಕೆ ನೀಡಿದ ಬಳಿಕ ಈ ಬಗ್ಗೆ ಭಾರತದ ರಕ್ಷಣಾ ಸಚಿವಾಲಯ ತನಿಖೆಯನ್ನು ಆರಂಭಿಸಿತ್ತು. ತನಿಖೆಯ ಬಳಿಕ, ಪ್ರಮಾಣಿತ ಕಾರ್ಯಾಚರಣೆಯ ಕಾರ್ಯವಿಧಾನದ ಕ್ರಮ ತಪ್ಪಿದ್ದಕ್ಕಾಗಿ ಭಾರತದ ವಾಯುಪಡೆಯ ಮೂವರು ಅಧಿಕಾರಿಗಳನ್ನು ಮಂಗಳವಾರ ಅಮಾನತುಗೊಳಿಸಿದೆ.
ಆದರೆ, ಘಟನೆಯನ್ನು ಮುಚ್ಚಿಹಾಕುವ ಉದ್ದೇಶದ ಭಾರತದ ಕ್ರಮವನ್ನು ತಿರಸ್ಕರಿಸುವುದಾಗಿ ಪಾಕಿಸ್ತಾನದ ವಿದೇಶಾಂಗ ಇಲಾಖೆ ಪ್ರತಿಕ್ರಿಯಿಸಿದೆ. ನಿರೀಕ್ಷಿಸಿದಂತೆ, ಘಟನೆಯ ನಂತರ ಭಾರತವು ತೆಗೆದುಕೊಂಡ ಕ್ರಮಗಳು ಮತ್ತು ತಥಾಕಥಿತ ಆಂತರಿಕ ವಿಚಾರಣೆಯ ಬಳಿಕದ ಶಿಕ್ಷೆಯು ಸಂಪೂರ್ಣವಾಗಿ ಅತೃಪ್ತಿಕರ, ಅಪೂರ್ಣ ಮತ್ತು ಅಸಮರ್ಪಕವಾಗಿದೆ. ಜಂಟಿ ತನಿಖೆಯ ಕುರಿತ ನಮ್ಮ ಬೇಡಿಕೆಗೆ ಭಾರತ ಸ್ಪಂದಿಸಿಲ್ಲ ಎಂದು ವಿದೇಶಾಂಗ ಇಲಾಖೆಯ ವಕ್ತಾರ ಆಸಿಮ್ ಇಫ್ತಿಕಾರ್ ಅಹ್ಮದ್ ಹೇಳಿದ್ದಾರೆ.