ಕಂದಾಯ ಹಂಚಿಕೆಯಲ್ಲಿ ಕೇಂದ್ರ-ರಾಜ್ಯಗಳ ನಡುವೆ ಹೆಚ್ಚುತ್ತಿರುವ ಅಂತರವೆಷ್ಟು?
ರಾಜ್ಯಗಳ ಪಾಲು ನಿರಂತರ ಕುಸಿತ

ಎರಡು ವಾರಗಳ ಹಿಂದೆ, ಪ್ರಧಾನಿ ಅಧ್ಯಕ್ಷತೆಯಲ್ಲಿ ನಡೆದ ನೀತಿ ಆಯೋಗದ ಸಭೆಯಲ್ಲಿ, ರಾಜ್ಯಗಳ ಕಂದಾಯಗಳು ಕುಸಿಯುತ್ತಿರುವ ಬಗ್ಗೆ ಮುಖ್ಯಮಂತ್ರಿ ಕಳವಳ ವ್ಯಕ್ತಪಡಿಸಿದರು. ಪಾಲಾಗುವ ತೆರಿಗೆಯಲ್ಲಿ ಹೆಚ್ಚಿನ ಪಾಲು ಮತ್ತು ಜಿಎಸ್ಟಿ ಪರಿಹಾರದಲ್ಲಿ ಹೆಚ್ಚಳಕ್ಕಾಗಿ ಮುಖ್ಯಮಂತ್ರಿ ಒತ್ತಾಯಿಸಿದರು. ಈ ಎರಡೂ ವಿಷಯಗಳು ತುಂಬಾ ಸಮಯದಿಂದ ಕೇಂದ್ರ ಸರಕಾರ ಮತ್ತು ರಾಜ್ಯಗಳ ನಡುವಿನ ವಿವಾದಗಳ ಕೇಂದ್ರವಾಗಿದೆ.
ಉಜ್ವಲ್ ಡಿಸ್ಕಾಮ್ ಭರವಸೆ ಯೋಜನೆ ಮತ್ತು ಕೃಷಿ ಸಾಲಗಳ ಮನ್ನಾದಿಂದಾಗಿ ಹಾಗೂ 2019-20ರ ಸಾಲಿನ ಆರ್ಥಿಕ ಬೆಳವಣಿಗೆಯಲ್ಲಿ ಆಗಿರುವ ಕುಸಿತದಿಂದಾಗಿ ರಾಜ್ಯಗಳ ಹಣಕಾಸು ಆರೋಗ್ಯ ಹದಗೆಟ್ಟಿದೆ. ಆದರೆ, ಸಾಂಕ್ರಾಮಿಕದ ಅವಧಿಯಲ್ಲಿ ಖರ್ಚುಗಳಲ್ಲಿ ಆಗಿರುವ ಅಗಾಧ ಹೆಚ್ಚಳ ಮತ್ತು ಕಂದಾಯದಲ್ಲಿನ ಕುಸಿತದಿಂದಾಗಿ ರಾಜ್ಯಗಳ ಆರ್ಥಿಕ ಪರಿಸ್ಥಿತಿಯು ಮತ್ತಷ್ಟು ಕುಸಿಯಿತು.
ಹಾಗಾಗಿ, ಕಂದಾಯ ಸೃಷ್ಟಿಸುವುದು ಯಾರು ಹಾಗೂ ಅದರ ಸಿಂಹಪಾಲನ್ನು ಒಯ್ಯುವುದು ಯಾರು ಎನ್ನುವುದನ್ನು ತಿಳಿಯುವುದು ಅಗತ್ಯವಾಗಿದೆ. ಆದಾಯ ಸೃಷ್ಟಿಸುವ ಹೆಚ್ಚಿನ ಅಧಿಕಾರಗಳನ್ನು ಭಾರತೀಯ ಸಂವಿಧಾನವು ಕೇಂದ್ರ ಸರಕಾರಕ್ಕೆ ಕೊಟ್ಟಿದೆ. ಅದೇ ವೇಳೆ, ಹೆಚ್ಚಿನ ಅಭಿವೃದ್ಧಿ ಮತ್ತು ಕಲ್ಯಾಣ ಸಂಬಂಧಿ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಹೊಣೆಯನ್ನು ರಾಜ್ಯಗಳಿಗೆ ವಹಿಸಿದೆ.
ಆದರೆ, ತೆರಿಗೆ ವಿಧಿಸುವ ಅಧಿಕಾರಗಳು ಮತ್ತು ಖರ್ಚು ಮಾಡುವ ಜವಾಬ್ದಾರಿಗಳ ಹಂಚಿಕೆಯು ಅಸಮಾನತೆಗೆ ದಾರಿಮಾಡುತ್ತವೆ. ಹಾಗಾಗಿ, ಕೇಂದ್ರ ಸರಕಾರದ ಕಂದಾಯವನ್ನು ರಾಜ್ಯಗಳೊಂದಿಗೆ ಹಂಚಿಕೊಳ್ಳಬೇಕೆಂದು ಸಂವಿಧಾನ ಹೇಳುತ್ತದೆ. ಒಂದರ ನಂತರ ಒಂದರಂತೆ ಬಂದ ಹಣಕಾಸು ಆಯೋಗಗಳು, ಕೇಂದ್ರೀಯ ತೆರಿಗೆಗಳಲ್ಲಿ ರಾಜ್ಯಗಳ ಪಾಲನ್ನು ಹೆಚ್ಚಿಸುವ ಮೂಲಕ ಅಸಮಾನತೆಯನ್ನು ತಗ್ಗಿಸಲು ಪ್ರಯತ್ನಿಸಿದವು.
ರಾಜ್ಯಗಳ ಪಾಲು ನಿರಂತರ ಕುಸಿತ
14 ಮತ್ತು 15ನೇ ಹಣಕಾಸು ಆಯೋಗಗಳು ಒಟ್ಟು ತೆರಿಗೆಗಳಲ್ಲಿ ರಾಜ್ಯಗಳ ಪಾಲನ್ನು ಶೇ.40ಕ್ಕಿಂತ ಹೆಚ್ಚಿನ ಮಟ್ಟಕ್ಕೆ ಏರಿಸಿದವು. ಆದರೆ, ವಾಸ್ತವಿಕ ಹಂಚಿಕೆ ಯಾವತ್ತೂ ಈ ಮಟ್ಟವನ್ನು ತಲುಪಿಲ್ಲ.
2018-19ರಲ್ಲಿ ರಾಜ್ಯಗಳ ತೆರಿಗೆ ಪಾಲು ಗರಿಷ್ಠ ಶೇ. 36.6 ತಲುಪಿತ್ತು. ಆದರೆ, ಬಳಿಕ ಕುಸಿತ ಕಂಡು ಈಗ ಶೇ.29ರ ಮಟ್ಟದಲ್ಲಿದೆ.
ಅದೇ ವೇಳೆ, ಹಣಕಾಸು ಆಯೋಗಗಳು ಶಿಫಾರಸು ಮಾಡಿರುವ ಪಾಲು ಮತ್ತು ವಾಸ್ತವಿಕವಾಗಿ ರಾಜ್ಯಗಳಿಗೆ ಲಭಿಸಿರುವ ಪಾಲಿನ ನಡುವಿನ ಅಂತರವು ಶೇ. 11ಕ್ಕಿಂತಲೂ ಹೆಚ್ಚು ವಿಸ್ತಾರಗೊಂಡಿದೆ. ಇದು ಕನಿಷ್ಠ ಎರಡು ದಶಕಗಳಲ್ಲೇ ಅಧಿಕವಾಗಿದೆ.
ರಿಸರ್ವ್ ಫಂಡ್ಗಳಿಗೆ ತಲುಪಿದ ಸೆಸ್ ಮೊತ್ತವೆಷ್ಟು?
Thehindu*ಹಣಕಾಸು ವರ್ಷ 2019-20ರಲ್ಲಿ, 78,376 ಕೋಟಿ ರೂ. ಮೊತ್ತದ ಸೆಸ್ (ಒಟ್ಟು ಸೆಸ್ನ ಶೇ.40) ರಿಸರ್ವ್ ಫಂಡ್ಗೆ ವರ್ಗಾವಣೆಯಾಗಿಲ್ಲ.
*ಹಣಕಾಸು ವರ್ಷ 2019-20ರ ಅವಧಿಯಲ್ಲಿ ಕಚ್ಚಾ ತೈಲ ಮೇಲಿನ ಸೆಸ್ ಮೂಲಕ ಸುಮಾರು 1.28 ಲಕ್ಷ ಕೋಟಿ ರೂ. ಮೊತ್ತವನ್ನು ಸಂಗ್ರಹಿಸಲಾಗಿತ್ತು. ಆದರೆ, ಆ ಹಣವನ್ನು ತೈಲ ಉದ್ದಿಮೆ ಅಭಿವೃದ್ಧಿ ಮಂಡಳಿಗೆ ವರ್ಗಾಯಿಸಲಾಗಿಲ್ಲ. ಆ ಹಣವನ್ನು ಕನ್ಸಾಲಿಡೇಟಡ್ ಫಂಡ್ ಆಫ್ ಇಂಡಿಯಾದಲ್ಲಿ ಉಳಿಸಿಕೊಳ್ಳಲಾಗಿದೆ. ಅದನ್ನು ಉದ್ದೇಶಿತ ಕಾರ್ಯಗಳಿಗಾಗಿ ಬಳಸಿಕೊಳ್ಳಲಾಗಿದೆ ಎಂಬ ಬಗ್ಗೆ ಭರವಸೆಯಿಲ್ಲ.
*2018-19ರ ಹಣಕಾಸು ವರ್ಷದಲ್ಲಿ, 1.1 ಲಕ್ಷ ಕೋಟಿ ರೂ. (ಒಟ್ಟು ಸೆಸ್ನ ಶೇ. 40) ಸೆಸ್ ಮೊತ್ತವನ್ನು ರಿಸರ್ವ್ ಫಂಡ್ಗೆ ವರ್ಗಾಯಿಸಲಾಗಿಲ್ಲ. ಅದನ್ನು ಕನ್ಸಾಲಿಡೇಟಡ್ ಫಂಡ್ ಆಫ್ ಇಂಡಿಯಾದಲ್ಲೇ ಉಳಿಸಿಕೊಳ್ಳಲಾಗಿದೆ.
*2018-19ರ ಹಣಕಾಸು ವರ್ಷದಲ್ಲಿ ಕಸ್ಟಮ್ಸ್ ಮೇಲಿನ ಸಮಾಜ ಕಲ್ಯಾಣ ಸರ್ಚಾರ್ಜ್ ಮೂಲಕ 8,871.19 ಕೋಟಿ ರೂಪಾಯಿ ಮೊತ್ತವನ್ನು ಸಂಗ್ರಹಿಸಲಾಗಿತ್ತು. ಆದರೆ, ಆ ಹಣ ನಿಗದಿತ ಉದ್ದೇಶಕ್ಕೆ ಖರ್ಚಾಗುವುದನ್ನು ಖಾತರಿಪಡಿಸುವುದಕ್ಕಾಗಿ ನಿರ್ದಿಷ್ಟ ನಿಧಿಯೇ ಸ್ಥಾಪನೆಯಾಗಲಿಲ್ಲ.
ಸೆಸ್, ಸರ್ಚಾರ್ಜ್ಗಳಲ್ಲಿ ಗಣನೀಯ ಏರಿಕೆ
ಕಳೆದ ಹಲವಾರು ವರ್ಷಗಳಲ್ಲಿ, ತೆರಿಗೆಯಿಂದ ಬಂದ ಒಟ್ಟು ಕಂದಾಯದಲ್ಲಿ ಸೆಸ್ ಮತ್ತು ಸರ್ಚಾರ್ಜ್ಗಳ ಪಾಲು ಗಣನೀಯವಾಗಿ ಹೆಚ್ಚಿದೆ. 2011-12ರ ಹಣಕಾಸು ವರ್ಷದಲ್ಲಿ ಅವುಗಳ ಪಾಲು ಶೇ. 10.4 ಆಗಿತ್ತು. 2020-21ರ ವೇಳೆಗೆ ಅದು ಶೇ. 20ಕ್ಕೆ ಏರಿದೆ.
ಕೇಂದ್ರ ಸರಕಾರವು ತನ್ನ ಬೊಕ್ಕಸವನ್ನು ತುಂಬಿಸಿ ಕೊಳ್ಳುವುದಕ್ಕಾಗಿ ಪೆಟ್ರೋಲ್ ಉತ್ಪನ್ನಗಳ ಮೇಲೆ ವಿವಿಧ ಸೆಸ್ ಮತ್ತು ಸರ್ಚಾರ್ಜ್ಗಳನ್ನು ಹೇರಿತು.
ಇದರಿಂದಾಗಿ ರಾಜ್ಯಗಳೊಂದಿಗೆ ಹಂಚಿಕೊಳ್ಳುವ ಕಂದಾಯದ ಪ್ರಮಾಣ ಕಡಿಮೆಯಾಯಿತು.
ಸಾಂಕ್ರಾಮಿಕ ಕಾಲದಲ್ಲಿ ನರಳಿದ ರಾಜ್ಯಗಳು
ಕೊರೋನ ವೈರಸ್ ಸಾಂಕ್ರಾಮಿಕದ ಅವಧಿಯಲ್ಲಿ ತೆರಿಗೆ ಕಂದಾಯ ಸಂಗ್ರಹದ ಮೇಲೆ ದೊಡ್ಡ ಪೆಟ್ಟು ಬಿತ್ತು. ಕೇಂದ್ರ ಸರಕಾರದ ತೆರಿಗೆಗಳಲ್ಲಿನ ರಾಜ್ಯಗಳ ಪಾಲು 2019-20ರಲ್ಲಿ ಶೇ. 15 ಮತ್ತು 2020-21ರಲ್ಲಿ ಶೇ. 9ಕ್ಕೆ ಕುಸಿಯಿತು. ಆದರೆ, ಕೇಂದ್ರ ಸರಕಾರದ ಪಾಲು ನಿರಂತರವಾಗಿ ಹೆಚ್ಚಿತು. ಸೆಸ್ಗಳು ಮತ್ತು ಸರ್ಚಾರ್ಜ್ಗಳನ್ನು ಹೆಚ್ಚಿಸುವ ಮೂಲಕ ಕೇಂದ್ರ ಸರಕಾರ ಇದನ್ನು ಸಾಧಿಸಿತು. ಇವುಗಳನ್ನು ರಾಜ್ಯಗಳೊಂದಿಗೆ ಹಂಚಿಕೊಳ್ಳಬೇಕೆಂದಿಲ್ಲ.
ಕಂದಾಯ ಕೇಂದ್ರಕ್ಕೆ, ವೆಚ್ಚ ರಾಜ್ಯಗಳಿಗೆ
15ನೇ ಹಣಕಾಸು ಆಯೋಗದ ವರದಿಯ ಪ್ರಕಾರ, 2018-19ನೇ ಹಣಕಾಸು ವರ್ಷದಲ್ಲಿ, ಕೇಂದ್ರ ಸರಕಾರ ಮತ್ತು ರಾಜ್ಯಗಳು ಸಂಗ್ರಹಿಸಿದ ಒಟ್ಟು ಕಂದಾಯದ ಶೇ. 62.7ರಷ್ಟನ್ನು ಕೇಂದ್ರ ಸರಕಾರ ಪಡೆಯಿತು. ಇದರಲ್ಲಿ ರಾಜ್ಯಗಳಿಗೆ ಸಿಕ್ಕಿದ್ದು ಶೇ. 37.3. ಆದರೆ, ಆ ವರ್ಷದ ಒಟ್ಟು ವೆಚ್ಚದ ಶೇ. 62.4ನ್ನು ರಾಜ್ಯಗಳು ಮಾಡಿದವು. ಕೇಂದ್ರ ಸರಕಾರ ಮಾಡಿದ ವೆಚ್ಚ ಕೇವಲ ಶೇ. 37.6.
ಕೃಪೆ: Thehindu







