ವಿಘ್ನ ನಿವಾರಕನಿಗೂ ಸಾವರ್ಕರ್ಗೂ ಏನು ಸಂಬಂಧ?: ಡಿಕೆಶಿ ಪ್ರಶ್ನೆ

ಬೆಂಗಳೂರು, ಆ.26: ರಾಜ್ಯದಲ್ಲಿ ಬಿಜೆಪಿಗೆ ಅಭಿವೃದ್ಧಿ ಮಂತ್ರ ಹೇಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಗಲಾಟೆ ಮಾಡಿಸಿ, ಸಮಾಜವನ್ನು ಒಡೆಯಲು ಮುಂದಾಗಿದ್ದಾರೆ. ವಿಘ್ನಕ್ಕೆ ನಾಯಕ ವಿನಾಯಕ. ವಿಘ್ನ ನಿವಾರಕನಿಗೂ ಸಾವರ್ಕರ್ಗೂ ಏನು ಸಂಬಂಧ? ಅವರ ಪಕ್ಷ, ಅವರ ವಿಚಾರಧಾರೆಗಳನ್ನು ಅವರೇ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಶುಕ್ರವಾರ ಸದಾಶಿವನಗರದಲ್ಲಿರುವ ತಮ್ಮ ನಿವಾಸದ ಬಳಿ ‘ಬಿಜೆಪಿಯವರು ಗಣೇಶೋತ್ಸವದ ಹೆಸರಲ್ಲಿ ಸಾವರ್ಕರ್ ಅವರ ಫೋಟೋ ಹಂಚುತ್ತಿರುವ’ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಈ ಮೇಲಿನಂತೆ ಪ್ರತಿಕ್ರಿಯಿಸಿದರು.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ರಾಜ್ಯಕ್ಕೆ ಆಗಮಿಸುತ್ತಿದ್ದು, ‘ಭಾರತ ಜೋಡೋ’ ಪಾದಯಾತ್ರೆ ಸಭೆಗಳು ಇದೇ ತಿಂಗಳು 28, 29 ರಂದು ನಡೆಯಲಿವೆ. ಶಾಸಕಾಂಗ ಸಭೆ ಹಾಗೂ ಪದಾಧಿಕಾರಿಗಳ ಸಭೆ ಮಾಡುತ್ತೇವೆ ಎಂದರು.
ಈ ಸಭೆಯಲ್ಲಿ ಯಾರಿಗೆ ಏನೆಲ್ಲಾ ಜವಾಬ್ದಾರಿ ವಹಿಸಬೇಕು, ಯಾವ ರೀತಿ ಯಾತ್ರೆ ಮಾಡಬೇಕು, ಅಧಿವೇಶನದ ನಡುವೆ ಇದರ ತಯಾರಿ ಬಗ್ಗೆ ಚರ್ಚೆ ಮಾಡುತ್ತೇವೆ. ನಂತರ ಸೆ.1 ರಂದು ದಿಗ್ವಿಜಯ್ ಸಿಂಗ್ ಹಾಗೂ ಜೈರಾಮ್ ರಮೇಶ್ ಅವರ ಜತೆ ಬ್ಲಾಕ್ ಅಧ್ಯಕ್ಷರು, ಪದಾಧಿಕಾರಿಗಳ ಜತೆ ಸಭೆ ಮಾಡಲಿದ್ದೇವೆ ಎಂದು ಶಿವಕುಮಾರ್ ತಿಳಿಸಿದರು.
ಬಿಡಿಎ ವಿಚಾರವಾಗಿ ಪತ್ರಿಕೆಗಳಲ್ಲಿ ನೋಡಿದ್ದೇನೆ. ರಾಜಕೀಯ ಒತ್ತಡ ಇಲ್ಲದೆ ಯಾವುದೇ ಅಧಿಕಾರಿ ಏನನ್ನೂ ಮಾಡಲು ಸಾಧ್ಯವಿಲ್ಲ. ಇದರ ಫಲಾನುಭವಿಗಳು ಮೊದಲು ನೈತಿಕ ಹೊಣೆ ಹೋರಬೇಕು. ಕೂಡಲೇ ಫಲಾನುಭವಿಗಳು, ಸರಕಾರ ದುರುಪಯೋಗ ಮಾಡಿಕೊಂಡಿರುವವರು ರಾಜೀನಾಮೆ ನೀಡಬೇಕು. ಬೊಮ್ಮಾಯಿ ಈ ಸಮಸ್ಯೆ ದೊಡ್ಡದಾಗಿ ಮಾಡಿಕೊಳ್ಳುವ ಮುನ್ನ ಫಲಾನುಭವಿಗಳನ್ನು ಸಂಪುಟದಿಂದ ಕೈ ಬಿಡುವುದು ಸೂಕ್ತ ಎಂದು ಅವರು ಆಗ್ರಹಿಸಿದರು.
ಸೆ.12 ರಿಂದ ಅಧಿವೇಶನ ಕರೆದಿದ್ದು, ನಿಮ್ಮ ಪಕ್ಷದ ಕಾರ್ಯತಂತ್ರ ಏನು ಎಂದು ಕೇಳಿದಾಗ, ‘ಆ ಬಗ್ಗೆ ಈಗ ಮಾಧ್ಯಮಗಳ ಮುಂದೆ ಚರ್ಚೆ ಮಾಡುವುದಿಲ್ಲ. ನಮ್ಮ ಪಕ್ಷದ ನಾಯಕರ ಜತೆ ಚರ್ಚೆ ಮಾಡಿ ನಮ್ಮ ಕಾರ್ಯಯೋಜನೆ ತಿಳಿಸುತ್ತೇವೆ’ ಎಂದು ಶಿವಕುಮಾರ್ ಹೇಳಿದರು.







