ಆ.30ರಂದು ಉಲಮಾ, ಉಮರಾ ಕಾನ್ಫರೆನ್ಸ್: ಕುಕ್ಕಿಲ ದಾರಿಮಿ

ಬಂಟ್ವಾಳ, ಆ.27: ಅಕ್ರಮ ಚಟುವಟಿಕೆಗಳ ವಿರುದ್ಧ ಜಾಗೃತಿ ಮೂಡಿಸುವ ಸಲುವಾಗಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕರ್ನಾಟಕ ಮುಶಾವರದಿಂದ ಆ.30ರಂದು ಮಾಣಿ ಸಮೀಪದ ನೇರಳಕಟ್ಟೆಯ ಜನಪ್ರಿಯಾ ಗಾರ್ಡನ್ ಹಾಲ್ ನಲ್ಲಿ ಉಲಮಾ ಉಮರಾ ಕಾನ್ಪರೆನ್ಸ್ ಆಯೋಜಿಸಲಾಗಿದೆ ಎಂದು ಕೆ.ಐ.ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ ಹೇಳಿದರು.
ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಶನಿವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಪೂರ್ವಾಹ್ನ 10ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಕಾರ್ಯಕ್ರಮ ನಡೆಯಲಿದ್ದು ಸಮಸ್ತ ಅಧ್ಯಕ್ಷ ಸಯ್ಯದುಲ್ ಉಲಮಾ ಮುಹಮ್ಮದ್ ಜಿಫ್ರಿ ಮುತ್ತು ಕೋಯ ತಂಙಳ್ ನೇತೃತ್ವ ವಹಿಸಲಿದ್ದಾರೆ ಎಂದರು.
ಸಮಾಜದಲ್ಲಿ ತಾಂಡವಾಡುತ್ತಿರುವ ಮದ್ಯಪಾನ, ಗಾಂಜಾ ಮೊದಲಾದ ಅಮಲು ಪದಾರ್ಥಗಳ ದುಷ್ಚಟಗಳಿಗೆ ಹೆಚ್ಚಾಗಿ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಯುವ ಸಮುದಾಯ ಬಲಿ ಪಶುವಾಗುತ್ತಿದ್ದಾರೆ. ಇದರಿಂದ ಸಮಾಜದಲ್ಲಿ ಪದೇ ಪದೇ ಗಲಭೆ, ಅಶಾಂತಿ, ಅಹಿತಕರ ಘಟನೆಗಳು ಸಂಭವಿಸುತ್ತಿದೆ. ಇದನ್ನು ನಿಯಂತ್ರಣಕ್ಕೆ ತರುವ ಉದ್ದೇಶದಿಂದ ಗಂಭೀರ ಚರ್ಚೆ ನಡೆಸುವ ಸಲುವಾಗಿ ಸಮುದಾಯದ ಪ್ರಮುಖ ಉಲಮಾ ಉಮರಾ ನೇತಾರರ ಕಾನ್ಫರೆನ್ಸ್ ಕರೆಯಲಾಗಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಸ್ತ ಕರ್ನಾಟಕ ಮುಶಾವರ ಸ್ವಾಗತ ಸಮಿತಿ ಕನ್ವೀನರ್ ಕೆ.ಎಂ.ಉಸ್ಮಾನ್ ಫೈಝಿ ತೋಡಾರ್, ಪ್ರಮುಖರಾದ ಅಬೂಬಕ್ಕರ್ ಸಿದ್ದೀಕ್ ದಾರಿಮಿ ಕಡಬ, ಕೆ.ಎಲ್.ಉಮರ್ ದಾರಿಮಿ ಪಟ್ಟೋರಿ, ಖಾಸಿಂ ದಾರಿಮಿ ನಂದಾವರ ಉಪಸ್ಥಿತರಿದ್ದರು.