ಬೈಂದೂರು ತಹಶೀಲ್ದಾರ್ ಕಚೇರಿಯಲ್ಲಿನ ಅಕ್ರಮ ತನಿಖೆ: ಗೋಪಾಲ ಪೂಜಾರಿ ಆಗ್ರಹ
![ಬೈಂದೂರು ತಹಶೀಲ್ದಾರ್ ಕಚೇರಿಯಲ್ಲಿನ ಅಕ್ರಮ ತನಿಖೆ: ಗೋಪಾಲ ಪೂಜಾರಿ ಆಗ್ರಹ ಬೈಂದೂರು ತಹಶೀಲ್ದಾರ್ ಕಚೇರಿಯಲ್ಲಿನ ಅಕ್ರಮ ತನಿಖೆ: ಗೋಪಾಲ ಪೂಜಾರಿ ಆಗ್ರಹ](https://www.varthabharati.in/sites/default/files/images/articles/2022/08/27/347439-1661610803.jpg)
ಕುಂದಾಪುರ, ಆ.27: ಬೈಂದೂರು ತಹಶಿಲ್ದಾರ್ ಕಚೇರಿಯಲ್ಲಿ ದಾಖಲಾತಿ ಗಳನ್ನು ತಿದ್ದಿ ವಿವಿಧ ರೀತಿಯ ಅಕ್ರಮ ಮಾಡುತ್ತಿರುವುದಾಗಿ ಬಿಜೆಪಿ ಮಂಡಲ ಅಧ್ಯಕ್ಷರು ಆರೋಪಿಸಿದ್ದಾರೆ. ತಹಶಿಲ್ದಾರ್ ಕಚೇರಿಯಲ್ಲಿ ಇಷ್ಟೆಲ್ಲಾ ಅಕ್ರಮ ನಡೆಯುತ್ತಿದ್ದರೂ ಶಾಸಕರು ಏನು ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಪ್ರಶ್ನಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕ್ಷೇತ್ರದ ಯಾವುದೇ ಅಧಿಕಾರಿಗಳು ಶಾಸಕರ ಹಿಡಿತದಲ್ಲಿ ಇಲ್ಲ. ತಮ್ಮದೆ ಸರಕಾರ, ತಮ್ಮದೇ ಶಾಸಕರು ಇದ್ದರೂ ಕೂಡ ಮಂಡಲದ ಅಧ್ಯಕ್ಷರು ತಮ್ಮ ಸರಕಾರದ ವಿರುದ್ಧ ಅಪಾದನೆ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ. ಶಾಸಕರ ಮೇಲೆ ನಂಬಿಕೆ ಇಲ್ಲ. ಪಕ್ಷದ ಮೇಲೆ ಹಿಡಿತವಿಲ್ಲ ಎಂಬ ಸಂದೇಶ ಪರೋಕ್ಷವಾಗಿ ಹೇಳಿದ್ದಾರೆ ಎಂದು ಟೀಕಿಸಿದರು.
ಬಿಜೆಪಿ ಮಂಡಲ ಅಧ್ಯಕ್ಷರು ಆರೋಪಿಸಿದಂತೆ ತಹಶಿಲ್ದಾರ್ ಕಚೇರಿಯಲ್ಲಿ ಅಕ್ರಮ ನಡೆಯುತ್ತಿದ್ದರೆ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಜಿಲ್ಲಾಧಿಕಾರಿಗಳ ಮೂಲಕ ಸಮಗ್ರ ತನಿಖೆ ನಡೆಸಿ ತಪ್ಪು ಮಾಡಿದವರನ್ನು ಮನೆಗೆ ಕಳಿಸುವ ಕೆಲಸವಾಗಬೇಕು. ಮುಂದೆ ಈ ವ್ಯವಸ್ಥೆ ಪುನರಾವರ್ತನೆಯಾದರೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ತಹಶಿಲ್ದಾರ್ ಕಚೇರಿಯೆದುರು ಧರಣಿ ಸತ್ಯಾಗ್ರಹ ಮಾಡುವುದಲ್ಲದೆ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.