'ವಾರ್ತಾಭಾರತಿ'ಯ ಸಂಶುದ್ದೀನ್ ಎಣ್ಮೂರುಗೆ 'ಬಿ.ಜಿ.ಮೋಹನ್ ದಾಸ್ ಪ್ರಶಸ್ತಿ'
ಡಿಜಿಟಲ್ ಮಾಧ್ಯಮದ ಅತ್ಯುತ್ತಮ ವರದಿಗೆ ನೀಡುವ ಗೌರವ

ಸಂಶುದ್ದೀನ್ ಎಣ್ಮೂರು
ಮಂಗಳೂರು, ಆ.29: ತುಂಬೆಯ ನಿರತ ಸಾಹಿತ್ಯ ಸಂಪದ ಮತ್ತು ಗಲ್ಫ್ ಕನ್ನಡಿಗ ಸಂಸ್ಥೆಯು ಡಿಜಿಟಲ್ ಮಾಧ್ಯಮದಲ್ಲಿ ಉತ್ತಮ ವರದಿಗೆ ನೀಡುವ ರಾಜ್ಯ ಮಟ್ಟದ 'ಬಿ.ಜಿ.ಮೋಹನ್ ದಾಸ್ ಪ್ರಶಸ್ತಿ'ಗೆ 'ವಾರ್ತಾಭಾರತಿ'ಯ ಸಂಶುದ್ದೀನ್ ಎಣ್ಮೂರು ಆಯ್ಕೆಯಾಗಿದ್ದಾರೆ.
ವಾರ್ತಾಭಾರತಿ ವೆಬ್ಸೈಟ್ ನಲ್ಲಿ ಪ್ರಕಟಗೊಂಡ ಸಂಶುದ್ದೀನ್ ಎಣ್ಮೂರು ಅವರ 'ಕೊರಗುತ್ತಿರುವ ಕೊರಗರ ಬದುಕು' ಎಂಬ ವಿಶೇಷ ವರದಿ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಪ್ರಶಸ್ತಿ 5 ಸಾವಿರ ರೂ. ನಗದು ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.
ಸೆ.4ರಂದು ಬೆಳಗ್ಗೆ 10 ಗಂಟೆಗೆ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಕೈಕುಂಜೆಯಲ್ಲಿರುವ ಕನ್ನಡ ಭವನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.
ವಿದೇಶದಲ್ಲಿ ಮೊದಲ ಕನ್ನಡ ವೆಬ್ಸೈಟ್ ಗಲ್ಫ್ ಕನ್ನಡಿಗ.ಕಾಮ್ (gulfkannadiga.com) ಎರಡು ದಶಕಗಳ ಹಿಂದೆ ಆರಂಭಿಸಿದ್ದ ದಿವಂಗತ ಬಿ.ಜಿ. ಮೋಹನ್ ದಾಸ್ ಅವರ ಸ್ಮರಣಾರ್ಥ ಡಿಜಿಟಲ್ ಮಾಧ್ಯಮದಲ್ಲಿ ಅತ್ಯುತ್ತಮ ವರದಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ.
'ವಾರ್ತಾಭಾರತಿ' ಪತ್ರಿಕೆಯ ಹಿರಿಯ ಉಪಸಂಪಾದಕರಾಗಿರುವ ಸಂಶುದ್ದೀನ್ ಎಣ್ಮೂರು ಅವರು ದ.ಕ. ಜಿಲ್ಲೆಯ ಸುಳ್ಯ ತಾಲೂಕಿನ ಕೊಳ್ತಂಗೆರೆಯ ಎಂ.ಕೆ.ಯೂಸುಫ್ ಅವರ ಪುತ್ರ.