ಈಶ್ವರಪ್ಪರ ಹೇಳಿಕೆಗಳಿಂದ ಜಿಲ್ಲೆಯಲ್ಲಿ ಶಾಂತಿ ಕದಡಿ ಹೋಗಿದೆ: ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು

ಶಿವಮೊಗ್ಗ, ಆ.29: 'ಶಾಸಕ ಕೆ.ಎಸ್. ಈಶ್ವರಪ್ಪ ಅವರ ಹಾಳು ಬಾಯಿಯಿಂದ ಜಿಲ್ಲೆಯಲ್ಲಿ ಶಾಂತಿಯೇ ಕದಡಿ ಹೋಗಿದೆ. ಅವರು ಬಳಸುವ ಕೆಟ್ಟ ಪದಗಳು, ಆರೋಗ್ಯಕರವಲ್ಲದ ಟೀಕೆಗಳಿಂದ ಇಡೀ ವ್ಯವಸ್ಥೆಯೇ ಕದಡಿಹೋಗಿದೆ' ಎಂದು ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಶಿವಮೊಗ್ಗದಲ್ಲಿ ಆಡಳಿತ ಸಂಪೂರ್ಣ ಕುಸಿದಿದೆ. ಅತಂತ್ರ ಪರಿಸ್ಥಿತಿ ಉಂಟಾಗಿದೆ ಎಂದು ಆರೋಪಿಸಿದರು.
'ಸುಖಾ ಸುಮ್ಮನೆ ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್ ಕೊಲೆ ಮಾಡಿದವರನ್ನು ನೇಣಿಗೆ ಏರಿಸಿ ಎಂದು ಹೇಳುತ್ತಲೇ ಬಂದಿದೆ. ತಮ್ಮ ವೈಫಲ್ಯತೆಗಳನ್ನು ಮುಚ್ಚಿಕೊಳ್ಳಲು ಬಿಜೆಪಿಯವರು ಕಾಂಗ್ರೆಸ್ ನವರ ಮೇಲೆ ವಿನಾಕರಾಣ ಆರೋಪ ಮಾಡುತ್ತಿದ್ದಾರೆ. ಅದರಲ್ಲೂ ಈಶ್ವರಪ್ಪ ಸಿದ್ದರಾಮಯ್ಯ ಅವರ ಮೇಲೆ ಇಲ್ಲ ಸಲ್ಲದ ಟೀಕೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಅನ್ನು ಟೀಕೆ ಮಾಡುವ ಯಾವುದೇ ನೈತಿಕತೆ ಅವರಿಗೆ ಇಲ್ಲ' ಎಂದರು.
'ಈ ಬಾರಿಯ ಸ್ವಾತಂತ್ರ್ಯೋತ್ಸವ ಬಿಜೆಪಿಯವರಿಗೆ ಮಾತ್ರ ಬಂದಿದೆ. ಎಲ್ಲಾ ಕಡೆ ಶೇ. 40 ರಷ್ಟಿದ್ದ ಲಂಚ ಶೇ. 60 ಕ್ಕೆ ಏರಿದೆ. ಧ್ವಜದ ವಿಚಾರವೂ ಅಷ್ಟೇ. ಧ್ವಜಾರೋಹಣದ ರೋಮಾಂಚನಗಳನ್ನೇ ಆಡಳಿತ ಪಕ್ಷ ಕಸಿದುಕೊಂಡಿದೆ. ಬೇಲಿ, ಗದ್ದೆ, ಕಸದ ಬುಟ್ಟಿಗಳಲ್ಲಿ ರಾಷ್ಟ್ರಧ್ವಜಗಳನ್ನು ಎಸೆಯಲಾಗಿದೆ. ಇದು ಅತ್ಯಂತ ಬೇಸರ ಮತ್ತು ಖಂಡನೀಯ. ಇಷ್ಟರ ಮೇಲೆ ಆರ್.ಎಸ್.ಎಸ್. ಕಟ್ಟಡಗಳಲ್ಲಿ ರಾಷ್ಟ್ರಧ್ವಜ ಹಾರಿಲ್ಲ. ಇದರಿಂದಲೇ ಗೊತ್ತಾಗುತ್ತದೆ ಯಾರು ರಾಷ್ಟ್ರದ್ರೋಹಿಗಳು' ಎಂದು ಟೀಕಿಸಿದರು.
'ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ಬಿಜೆಪಿ ನಾಯಕರು ಸಾವರ್ಕರ್ ಫೋಟೋ ಕುರಿತು ಮಾತನಾಡುತ್ತಾರೆ. ಅವರ ಫೋಟೋ ಇಡದವರನ್ನು ಜೈಲಿಗೆ ಹಾಕಬೇಕು ಎನ್ನುತ್ತಾರೆ. ಆದರೆ, ಬಿಜೆಪಿ ಸರ್ಕಾರದಲ್ಲಿ ನೆಹರು ಫೋಟೋ ಹಾಕಿಲ್ಲವಲ್ಲ, ಶೋಭಾ ಮೇಡಂ ಅವರನ್ನು ತಿಹಾರ್ ಜೈಲಿಗೆ ಹಾಕಬೇಕಲ್ಲವೇ ಎಂದು ಪ್ರಶ್ನಿಸಿದ ಅವರು ಗಾಂಧಿಜಿ ಅವರನ್ನು ಕೊಂದ ಗೋಡ್ಸೆಗೆ ದೇವರ ಗುಡಿ ಕಟ್ಟುವವರು ಹೇಗೆ ರಾಷ್ಟ್ರ ಭಕ್ತರಾಗುತ್ತಾರೆ' ಎಂದು ಪ್ರಶ್ನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಜಿ.ಡಿ. ಮಂಜುನಾಥ್, ಆರ್. ರಾಜಶೇಖರ್, ಸಿ.ಎಸ್. ಚಂದ್ರಭೂಪಾಲ್, ಕೆ. ರಂಗನಾಥ್, ರಾಜಕುಮಾರ್, ಚಿನ್ಮಯ್ ಇದ್ದರು.







