ಜನರ ಪೌರತ್ವದ ಮೇಲೆ ಪ್ರಹಾರ: ಕೇಂದ್ರ ಸರಕಾರದ ವಿರುದ್ಧ ಸೀತಾರಾಂ ಯೆಚೂರಿ ವಾಗ್ದಾಳಿ

ಬೆಂಗಳೂರು, ಆ.29: ಕೇಂದ್ರ ಸರಕಾರವು ಪೌರತ್ವ ತಿದ್ದುಪಡಿ ಕಾಯ್ದೆಯ ಮೂಲಕ ಜನರ ಪೌರತ್ವದ ಮೇಲೆ ಪ್ರಹಾರವಾಗಲಿದ್ದು, ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾಕ್ರ್ಸ್ವಾದಿ)-ಸಿಪಿಐ(ಎಂ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಹೇಳಿದರು.
ಸೋಮವಾರ ನಗರದ ಭಾರತೀಯ ವಿದ್ಯಾಭವನ ಸಭಾಂಗಣದಲ್ಲಿ ರಾಷ್ಟ್ರೀಯ ನವ ನಿರ್ಮಾಣ ವೇದಿಕೆ ಹಮ್ಮಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ-96 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಚುನಾವಣಾ ಆಯೋಗದ ಪರಮಾಧಿಕಾರವನ್ನು ಮೊಟಕುಗೊಳಿಸಲಾಗುತ್ತಿದೆ. ಎಲ್ಲ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಆಳುವ ಸರಕಾರ ಅದರ ಮೂಲಕ ದಾಳಿಗೆ ಇಳಿದಿದೆ. ಸರಕಾರದ ನೀತಿಯ ವಿರುದ್ದ ಮಾತಾಡಿದರೆ ಜಾರಿ ನಿರ್ದೇಶನಾಯಲಯ(ಇಡಿ) ದಾಳಿ ಮಾಡಲಾಗುತ್ತಿದೆ ಎಂದು ಟೀಕಿಸಿದರು.
ಇಂದು ಪ್ರಧಾನಿ ನರೇಂದ್ರ ಮೋದಿ ಅಪೌಷ್ಟಿಕತೆ ಬಗ್ಗೆ ಮಾತನಾಡಿದ್ದಾರೆ. ಅದರ ವಿರುದ್ಧ ಸಮರ ಸಾರಬೇಕಂತೆ. ಆದರೆ, ಇದೇ ಸರಕಾರ ಪಡಿತರ ಪಡೆಯಲು ಆಧಾರ್ ಕಾರ್ಡ್ ಜೋಡಣೆ ಮಾಡುವುದು ಕಡ್ಡಾಯ ಎನ್ನುತ್ತಿದೆ. ಮಕ್ಕಳಿಗೆ ಆಧಾರ್ ಕಡ್ಡಾಯ ಎಂದರೆ ಅವರಿಗೆ ಆಹಾರದ ಅಲಭ್ಯತೆ, ಇದು ಅಪೌಷ್ಟಿಕತೆಯನ್ನು ಹೆಚ್ಚಿಸುತ್ತದೆ ಎಂದು ಅವರು ವ್ಯಾಖ್ಯಾನಿಸಿದರು.
ದೇಶದಲ್ಲಿ ಜನ ಸಾಮಾನ್ಯರಿಗೆ ಭಯದ ವಾತಾವರಣವಿದೆ. ಜನಪರವಾಗಿ ಮಾತಾಡಿದರೆ ದೇಶದ್ರೋಹದ ಕೇಸು ದಾಖಲಾಗುತ್ತಿದೆ. ದೇಶದ ಸಾರ್ವಭೌಮತೆಯೇ ಅಪಾಯದಲ್ಲಿದೆ ಎಂದ ಅವರು, ಹತ್ರಾಸ್ ದಲಿತ ಯುವತಿಯ ಕಗ್ಗೊಲೆ ವರದಿ ಮಾಡಲು ಉತ್ತರ ಪ್ರದೇಶಕ್ಕೆ ಹೋದ ಪತ್ರಕರ್ತ ಕಪ್ಪನ್ ಕಾರಣವೇ ಇಲ್ಲದೆ ಜೈಲಿನಲ್ಲಿದ್ದಾನೆ. ಇದು ಒಂದು ಉದಾಹರಣೆ ಆಗಿದ್ದು, ಇಂತಹ ವಿಷಮ ಪರಿಸ್ಥಿತಿ ದೇಶದಲ್ಲಿ ನಿರ್ಮಾಣವಾಗಿದೆ ಎಂದು ಹೇಳಿದರು.
ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ರಾಮಕೃಷ್ಣ ಹೆಗಡೆಯವರ ಕನಸು ಭಾರತ ಒಂದಾಗಿ ಇರುವುದು ಎಂದಾಗಿತ್ತು. ಬಹುತ್ವ ಭಾರತವನ್ನು ಉಳಿಸುವುದೇ ಹೆಗಡೆಯವರಿಗೆ ಗೌರವ ಸಲ್ಲಿಸುವುದಾಗುತ್ತದೆ. ಐಕ್ಯ ಭಾರತವನ್ನು ಉಳಿಸುವ ಮೂಲಕ ಅದನ್ನು ಸಾಧಿಸಬೇಕು ಎಂದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ನವ ನಿರ್ಮಾಣ ವೇದಿಕೆಯ ಅಧ್ಯಕ್ಷೆ ಮಮತಾ ನಿಚ್ಚಾನಿ, ಕಾಂಗ್ರೆಸ್ ಶಾಸಕ ಡಾ. ಶಾಮನೂರು ಶಿವಶಂಕರಪ್ಪ, ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷ ಡಾ.ಬಿ.ಎಲ್.ಶಂಕರ್, ಮಾಜಿ ವಿಧಾನ ಪರಿಷತ್ ಸದಸ್ಯ ಡಾ.ಎಂ.ಪಿ.ನಾಡಗೌಡ ಉಪಸ್ಥಿತರಿದ್ದರು.







