ಮರುಘಾ ಶರಣರ ವಿರುದ್ಧ ಲೈಂಗಿಕ ಕಿರುಕುಳ ಆರೋಪ; ನಿಷ್ಪಕ್ಷಪಾತ ತನಿಖೆಗೆ ಸಿಪಿಎಂ ಆಗ್ರಹ

ಬೆಂಗಳೂರು, ಆ. 29: ‘ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಶರಣರ ವಿರುದ್ಧದ ಪೋಸ್ಕೋ ಪ್ರಕರಣವನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಿ, ಆರೋಪಿಗಳೆಲ್ಲರನ್ನು ಬಂಧಿಸಿ ನಿಷ್ಪಕ್ಷಪಾತ ತನಿಖೆ ಕೈಗೊಳ್ಳಬೇಕು. ಆ ಮೂಲಕ ನಿಜವೇನೆಂದು ಬಹಿರಂಗಪಡಿಸಿ ಜನರ ಆತಂಕ ನಿವಾರಿಸಬೇಕು ಹಾಗೂ ತಪ್ಪಿತಸ್ಥರ ಮೇಲೆ ಕಠಿಣ ಕಾನೂನಿನ ಕ್ರಮ ಕೈಗೊಳ್ಳಬೇಕು' ಎಂದು ಸಿಪಿಎಂ ಆಗ್ರಹಿಸಿದೆ.
ಸೋಮವಾರ ಪ್ರಕಟಣೆ ನೀಡಿರುವ ಸಿಪಿಎಂ ರಾಜ್ಯ ಕಾರ್ಯದರ್ಶಿ ಯು.ಬಸವರಾಜು, ‘ಶಿವಮೂರ್ತಿ ಸ್ವಾಮೀಜಿಯವರು ತನ್ನ ಜೊತೆಗಾರರ ಬೆಂಬಲದಿಂದ ಅವರದೆ ಸಂಸ್ಥೆ ನಡೆಸುವ ಹಾಸ್ಟೆಲ್ಗಳಲ್ಲಿನ ಇಬ್ಬರು ಬಾಲಕಿಯರ ಮೇಲೆ ಎರಡು-ಮೂರು ವರ್ಷಗಳಿಂದ, ಆಮಿಷ ಮತ್ತು ಬೆದರಿಕೆಗಳ ಮೂಲಕ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂಬ ಗಂಭೀರ ದೂರು ನೆನ್ನೆ ದಿನ ಅವರ ಮೇಲೆ ದಾಖಲಾಗಿದೆ. ಇದೊಂದು ತೀವ್ರ ಆಘಾತಕಾರಿ ಪ್ರಕರಣವಾಗಿದೆ' ಎಂದು ತಿಳಿಸಿದ್ದಾರೆ.
‘ಉಚಿತ ಹಾಸ್ಟೆಲ್ನಲ್ಲಿ ವಾಸವಿದ್ದು ವಿದ್ಯಾಭ್ಯಾಸ ಮಾಡಬಹುದು ಮತ್ತು ಶಿಕ್ಷಣ ಪಡೆಯಬಹುದೆಂದು ಹಾಗೂ ಆ ಮೂಲಕ ಭವಿಷತ್ತಿನಲ್ಲಿ ಒಳ್ಳೆಯ ಜೀವನ ರೂಪಿಸಿಕೊಳ್ಳಬಹುದೆಂದು ಕನಸು ಹೊತ್ತು ಬಂದ ಬಾಲಕಿಯರ ಬಡತನ ಹಾಗೂ ಅಸಹಾಯಕತೆಯನ್ನು ದುರ್ಬಳಕೆ ಮಾಡಿಕೊಂಡು ಲೈಂಗಿಕ ದೌರ್ಜನ್ಯ ಎಸಗುವ ಇಂತಹ ಹೇಯ ದುಷ್ಕøತ್ಯ ಸರಿಯಲ್ಲ ಎಂದು ಅವರು ಆಕ್ಷೇಪಿಸಿದ್ದಾರೆ.
ಶಂಕರಾಚಾರ್ಯ ಸ್ವಾಮಿ ಬಂಧಿಸಿ: ‘ಡಾ.ರಾಮಶಂಕರ್ ಕಟೆರಿಯಾ ಉತ್ತರ ಪ್ರದೇಶದ ಇಟವಾ ಕ್ಷೇತ್ರದ ಸಂಸದರು, ನೆನ್ನೆ ಬೆಂಗಳೂರಿನ ಶಂಕರಾಚಾರ್ಯ ಸ್ವಾಮೀಜಿಯೊಬ್ಬರಿಂದ ಅಪಮಾನಿತರಾದ ಮತ್ತು ಜಾತಿದೌರ್ಜನ್ಯಕ್ಕೊಳಗಾದ ಪ್ರಕರಣ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.ಸಂಸದರು ಸ್ವಾಮೀಜಿಗಳ ಪಾದಗಳಿಗೆ ನಮಸ್ಕರಿಸಲು ಹೋದಾಗ, ನಮಸ್ಕರಿಸಲು ಬಿಡದೇ ‘ನೀನು ಅಸ್ಪೃಶ್ಯ' ನಿನಗೆ ನಮಸ್ಕರಿಸಲು ಬಿಡಲಾರೆ? ನೀನು ಹೇಗೆ ಒಳಬಂದೆ? ಎಂದು ಅವಾಚ್ಯವಾಗಿ ನಿಂದಿಸಿ ಅಪಮಾನಿಸಿರುವುದು ಆಘಾತಕಾರಿ' ಎಂದು ಅವರು ಟೀಕಿಸಿದ್ದಾರೆ.
‘ಶಂಕರಾಚಾರ್ಯರು ಜಾತಿ ತಾರತಮ್ಯ, ಅಸ್ಪೃಶ್ಯತೆ ಆಚರಣೆ ಮಾಡಿದ್ದು, ಕೂಡಲೇ ರಾಜ್ಯದ ಜನತೆಯ ಕ್ಷಮೆಯಾಚಿಸಬೇಕು. ಜೊತೆಗೆ ಜಾತಿ ನಿಂದನೆಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಅವರ ಮೇಲೆ ಜಾತಿ ನಿಂದನೆ ಹಾಗೂ ಅಸ್ಪೃಶ್ಯತಾ ಆಚರಣೆಯ ಪ್ರಕರಣವನ್ನು ಸ್ವಯಂ ಪ್ರೇರಣೆಯಿಂದ ದಾಖಲಿಸಿ ಕಾನೂನಿನ ಕ್ರಮವಹಿಸಬೇಕೆಂದು ಸಿಪಿಎಂ ಪ್ರಕಟಣೆಯಲ್ಲಿ ಆಗ್ರಹಿಸಿದೆ.







