ಶಿಕ್ಷಣ ಸಂಸ್ಥೆಗಳ ಸ್ವಾಯತ್ತತೆ ಪ್ರಗತಿಯ ಶುಭ ಸಂಕೇತ: ರಾಜಪಾಲ ಥಾವರ್ ಚಂದ್ ಗೆಹ್ಲೋಟ್

ಪುತ್ತೂರು: ಮೌಲ್ಯಯುತ ಮತ್ತು ಕೌಶಲ್ಯಾಧಾರಿತ ಶಿಕ್ಷಣದ ಜೊತೆಗೆ ವಿವಿಧ ಆಯಾಮಗಳಲ್ಲಿ ಆತ್ಮನಿರ್ಭರ ಭಾರತದ ಉದ್ದೇಶವನ್ನು ಸಾಕಾರಗೊಳಿಸುವಲ್ಲಿ ವಿವೇಕಾನಂದ ಮಹಾವಿದ್ಯಾಲಯ ಕಾರ್ಯನಿರ್ವಹಿಸುತ್ತಿದೆ. ಸಾವಿರಾರು ವಿದ್ಯಾರ್ಥಿಗಳಿಗೆ ಬಹುವಿಷಯಾಧಾರಿತ ಶಿಕ್ಷಣ ನೀಡುತ್ತಿರುವ ವಿದ್ಯಾಸಂಸ್ಥೆ ಪ್ರಸ್ತುತ ಸ್ವಾಯತ್ತತೆಯ ಸ್ಥಾನಮಾನವನ್ನು ಪಡೆದಿದೆ. ಯಾವುದೇ ಸಂಸ್ಥೆ ಸ್ವಾಯತ್ತತೆಯನ್ನು ಪಡೆಯುವುದು ಪ್ರಗತಿಯ ಶುಭಸಂಕೇತ ಎಂದು ಕರ್ನಾಟಕ ರಾಜ್ಯದ ರಾಜಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.
ಅವರು ಮಂಗಳವಾರ ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಂಗಸಂಸ್ಥೆ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಸ್ವಾಯತ್ತತೆಯ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ನೂತನ ರಾಷ್ಟ್ರೀಯ ಶಿಕ್ಷಣ ನೀತಿ ವರ್ತಮಾನ ಹಾಗೂ ಭವಿಷ್ಯವನ್ನು ಉಜ್ವಲ ಮತ್ತು ಸುರಕ್ಷಿತಗೊಳಿಸಲಿದೆ. ಪ್ರಪ್ರಥಮವಾಗಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಿದ ಗರಿಮೆ ಕರ್ನಾಟಕ ರಾಜ್ಯಕ್ಕಿದೆ. ರಾಷ್ಟ್ರದ ಅಖಂಡತೆ, ರಾಷ್ಟ್ರೀಯತೆ ಆಧಾರಿತ ಸಮಾಜದ ದೃಷ್ಟಿಕೋನ, ಮಾತೃಭಾಷೆಯಾಧಾರಿತ ಶಿಕ್ಷಣಕ್ಕೆ ಮಹತ್ವ ನೀಡಲಾಗಿದೆ. ಧರ್ಮ-ಸಂಸ್ಕೃತಿಯ ರಕ್ಷಣೆ, ಸಮಾಜದ ಉದ್ದೇಶಗಳನ್ನು ಶಿಕ್ಷಣದ ಮೂಲಕ ಈಡೇರಿಸುವ ವಿಶ್ವಾಸವಿದೆ ಎಂದು ಅಭಿಪ್ರಾಯಪಟ್ಟರು.
ನಮ್ಮ ದೇಶದ ಭವಿಷ್ಯ ಯುವಕರ ಕೈಯಲ್ಲಿದೆ. ತರುಣರು ತಾವು ಕಂಡ ಗುರಿಯನ್ನು ಸಾಧಿಸುವ ಸಂಕಲ್ಪ ತೊಟ್ಟು, ಕಾರ್ಯಪ್ರವೃತ್ತರಾಗಬೇಕು. ರಾಷ್ಟ್ರದ ನಾಗರಿಕರಾಗಿ ನಾಡಿನ ಸಮಗ್ರ ಏಳಿಗೆಗೆ ನಮ್ಮೆಲ್ಲರ ಯೋಗದಾನ ಅಗತ್ಯ. ದೇಶಭಕ್ತಿಯ ವಾತಾವರಣವನ್ನು ಮನೆಮನೆಯಲ್ಲೂ ನಿರ್ಮಿಸುವ ಮೂಲಕ ಅಸಂಖ್ಯಾತ ಮಹನೀಯರ ಕಾರಣಕ್ಕಾಗಿ ಗಳಿಸಿದ ವಿಶ್ವಗುರು ಸ್ಥಾನವನ್ನು ಸಂರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.
ಸ್ವಾಯತ್ತತೆಯ ಕುರಿತ ಸ್ಮರಣಸಂಚಿಕೆ `ಸಮಾಹಿತ' ವನ್ನು ಬಿಡುಗಡೆಗೊಳಿಸಿ ಮಾತನಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಸಹಸರಕಾರ್ಯವಾಹ ಮುಕುಂದ್ ಸಿ ಆರ್ ಅವರು ಸಮಾಜದ ಅವಶ್ಯಕತೆ ಬದಲಾದಂತೆ ಶಿಕ್ಷಣದ ವ್ಯಾಪ್ತಿಯೂ ವಿಸ್ತಾರಗೊಳ್ಳುತ್ತದೆ. ವಿದ್ಯಾಸಂಸ್ಥೆಯ ಉದ್ದೇಶವನ್ನು ಪರಿಣಾಮಕಾರಿಯಾಗಿ ಮತ್ತು ಪ್ರಖರವಾಗಿ ರಾಷ್ಟ್ರದ ಜನಜೀವನದಲ್ಲಿ ಮೂಡಿಸುವುದಕ್ಕೆ ಸಿಕ್ಕ ಬೃಹತ್ ನೆಗೆತ ಸ್ವಾಯತ್ತತೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಅನ್ವಯ ಶಿಕ್ಷಣದ ಪ್ರತಿ ವಿಷಯವನ್ನು ಹಲವು ಆಯಾಮಗಳಲ್ಲಿ ಆಲೋಚನೆ ಮಾಡುವುದಕ್ಕೆ ಸ್ವಾಯತ್ತತೆ ಸಹಕಾರಿ ಎಂದು ಹೇಳಿದರು.
ಪ್ರಸ್ತುತ ಅಂಕಾಧಾರಿತವಾಗಿ ವಿದ್ಯಾರ್ಥಿಗಳನ್ನು ಅಳಿಯುವುದು ಜನಜನಿತವಾಗಿದೆ. ಆದರೆ ಇದರ ಹೊರತಾಗಿ ವಿದ್ಯಾರ್ಥಿಗಳಿಗೆ ಮೌಲ್ಯಗಳ ಪರಿಚಯಿಸುವ ಅಗತ್ಯತೆ ಇದೆ. ರಾಷ್ಟ್ರೀಯ ಮನೋಭಾವನೆಯನ್ನು ಭಿತ್ತಿ, ಪಾಶ್ಚಾತ್ಯ ಪ್ರಭಾವದಿಂದ ಕೂಡಿರುವ ವ್ಯವಸ್ಥೆಗೆ ಭಾರತೀಯ ದೃಷ್ಟಿಕೋನದ ವಿದ್ಯಾರ್ಥಿಗಳು ಸೇರುವಂತಾಗಬೇಕು. ಶಿಕ್ಷಣದ ಮೂಲ ಉದ್ದೇಶ ವ್ಯಕ್ತಿತ್ವ ವಿಕಸನದ ಜೊತೆಗೆ ಸಮಾಜದ ಏಳಿಗೆಗೆ ಬದುಕುವಂತಹವರ ನಿರ್ಮಾಣದ ಅನುಷ್ಠಾನಕ್ಕೆ ಸ್ವಾಯತ್ತತೆ ಉಪಯುಕ್ತವಾಗಿದೆ ಎಂದರು.
ವೇದಿಕೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಕೆ.ಎಂ.ಕೃಷ್ಣಭಟ್, ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಸಂಜೀವ ಮಠಂದೂರು, ಸ್ವಾಯತ್ತ ಕಾಲೇಜಿನ ಪರೀಕ್ಷಾಂಗ ಕುಲಸಚಿವ ಡಾ.ಶ್ರೀಧರ್ ಹೆಚ್.ಜಿ., ಸಂಚಾಲಕ ಮುರಳಿಕೃಷ್ಣ ಕೆ.ಎನ್, ಪ್ರಾಚಾರ್ಯ ವಿಷ್ಣುಗಣಪತಿ ಭಟ್ ಉಪಸ್ಥಿತರಿದ್ದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಪ್ರಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಶ್ರೀಪತಿ ಕಲ್ಲೂರಾಯ ವಂದಿಸಿದರು. ಸ್ನಾತಕೋತ್ತರ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ.ವಿಜಯ ಸರಸ್ವತಿ ಮತ್ತು ಉಪನ್ಯಾಸಕಿ ಸರಸ್ವತಿ ಸಿ.ಕೆ. ಕಾರ್ಯಕ್ರಮವನ್ನು ನಿರ್ವಹಿಸಿದರು.
