ಅಭಿವೃದ್ಧಿಗೆ ಅನುದಾನದಷ್ಟೇ ಶಾಂತಿ, ಸೌಹಾರ್ದ ಮುಖ್ಯ: ಯು.ಟಿ.ಖಾದರ್
ಫರಂಗಿಪೇಟೆ ರಿಕ್ಷಾ ಪಾರ್ಕ್ ನ ಮೇಲ್ಛಾವಣಿ ಉದ್ಘಾಟನೆ

ಬಂಟ್ವಾಳ, ಆ.30: ಎಲ್ಲಿ ಶಾಂತಿ, ಸೌಹಾರ್ದ, ಕಾನೂನು ಸುವ್ಯವಸ್ಥೆ ಇರುತ್ತದೆಯೋ ಆ ಪ್ರದೇಶ ಅತೀ ವೇಗವಾಗಿ ಅಭಿವೃದ್ಧಿಯಾಗುತ್ತದೆ. ಆದ್ದರಿಂದ ಅಭಿವೃದ್ಧಿ ಕಾರ್ಯಗಳಿಗೆ ಅನುದಾನದಷ್ಟೇ ಶಾಂತಿ, ನೆಮ್ಮದಿ ಮುಖ್ಯವಾಗಿದ್ದು, ಶಾಂತಿ ಸುವ್ಯವಸ್ಥೆಯನ್ನು ನೀವು ನಮ್ಮ ಕೈಗೆ ನೀಡಿದರೆ ನಿಮ್ಮ ಕಾಲ ಬುಡಕ್ಕೆ ನಾವು ಅಭಿವೃದ್ಧಿಯನ್ನು ತಲುಪಿಸುತ್ತೇವೆ ಎಂದು ಶಾಸಕ ಯು.ಟಿ.ಖಾದರ್ ಹೇಳಿದರು.
ತನ್ನ ಅನುದಾನದಲ್ಲಿ ಫರಂಗಿಪೇಟೆ ಕರಾವಳಿ ರಿಕ್ಷಾ ಪಾರ್ಕ್ ಗೆ ನಿರ್ಮಿಸಿದ ಮೇಲ್ಛಾವಣಿ, ಫಾದರ್ ಮುಲ್ಲರ್ ಆಸ್ಪತ್ರೆಯಿಂದ ರಿಕ್ಷಾ ಪಾರ್ಕ್ ಗೆ ಕೊಡುಗೆಯಾಗಿ ನೀಡಿದ ಕುಡಿಯುವ ನೀರಿನ ಡ್ರಮ್ ಅನ್ನು ಉದ್ಘಾಟಿಸಿದ ಬಳಿಕ ಫರಂಗಿಪೇಟೆ ಮತ್ತು ಮೇರಮಜಲು ಕರಾವಳಿ ರಿಕ್ಷಾ ಪಾರ್ಕ್ ಅಸೋಸಿಯೇಶನ್ ನಿಂದ ಹಮ್ಮಿಕೊಂಡ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಫರಂಗಿಪೇಟೆ ಅಮ್ಮೆಮ್ಮಾರ್ ರೈಲು ಹಳಿಯ ಪಕ್ಕದ ರಸ್ತೆ, ಕುಂಪನಮಜಲು ಮುಖ್ಯ ರಸ್ತೆಗೆ ಒಂದು ಕೋಟಿ ರೂ. ಅನುದಾನದಲ್ಲಿ ಶೀಘ್ರದಲ್ಲೇ ಕಾಂಕ್ರಿಟ್ ಆಗಲಿದೆ. ಈ ಬೇಡಿಕೆ ಸಹಿತ ಗ್ರಾಮಸ್ಥರ ಪ್ರತಿಯೊಂದು ಅಭಿವೃದ್ಧಿ ಕೆಲಸದ ಬೇಡಿಕೆಯನ್ನು ಹಂತ ಹಂತವಾಗಿ ಈಡೇರಿಸಲಾಗುವುದು. ಅಭಿವೃದ್ಧಿಯಲ್ಲಿ ಪುದು ಗ್ರಾಮ ರಾಜ್ಯದಲ್ಲಿಯೇ ಮಾದರಿಯಾಗಿದೆ. ಇದಕ್ಕೆ ಈ ಗ್ರಾಮದ ಜನರ ಸೌಹಾರ್ದ, ಶಾಂತಿ, ಪ್ರೀತಿ, ಸಹೋದರತೆಯೇ ಕಾರಣವಾಗಿದೆ ಎಂದು ಅವರು ಹೇಳಿದರು.
ಎಲ್ಲಾ ಧರ್ಮದ ಜನರು ಒಟ್ಟು ಸೇರಿ ಕಾರ್ಯಕ್ರಮ ಆಯೋಜಿಸುವುದನ್ನು ನಾವು ಪುದು ಗ್ರಾಮದಲ್ಲಿ ಕಾಣಬಹುದು. ಇದು ಇಂದಿನ ಸಮಾಜಕ್ಕೆ ಅತೀ ಮುಖ್ಯವಾಗಿ ಬೇಕಾಗಿದೆ. ಭಾರತ ಒಂದು ಭಾರತೀಯರು ನಾವು ಎಂಬ ಪರಿಕಲ್ಪಣೆಯಲ್ಲಿ ಎಲ್ಲರೂ ಒಟ್ಟು ಸೇರಿ ಬದುಕಿದರೆ ಮಾತ್ರ ದೇಶ ಅಭಿವೃದ್ಧಿ ಹೊಂದಲಿದೆ ಎಂದು ಅವರು ನುಡಿದರು.
ಅತೀ ಪ್ರಾಮಾಣಿಕ ಮತ್ತು ಸ್ವಾಭಿಮಾನದಿಂದ ಬದುಕುವ ವರ್ಗಗಳಲ್ಲಿ ರಿಕ್ಷಾ ಚಾಲಕರು ಒಂದು. ಫರಂಗಿಪೇಟೆಯ ಎರಡು ರಿಕ್ಷಾ ಪಾರ್ಕ್ ಗಳ ಚಾಲಕರ ಬೇಡಿಕೆಯಂತೆ ಪಾರ್ಕ್ ಗೆ ಮೇಲ್ಛಾವಣಿ ನಿರ್ಮಿಸಿಕೊಡಲಾಗಿದೆ. ಮುಂದೆಯೂ ರಿಕ್ಷಾ ಚಾಲಕರ ಬೇಡಿಕೆಯನ್ನು ಈಡೇರಿಸಲು ತಾನು ಬದ್ಧನಾಗಿದ್ದೇನೆ. ರಿಕ್ಷಾ ಚಾಲಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುವ ಕೆಲಸವನ್ನು ಮಾಡಬೇಕು ಎಂದು ಅವರು ಹೇಳಿದರು.
ಜಿಪಂ ಮಾಜಿ ಸದಸ್ಯ ಉಮ್ಮರ್ ಫಾರೂಕ್ ಮಾತನಾಡಿ, ಪುದು ಗ್ರಾಮ ಶಾಸಕ ಯು.ಟಿ.ಖಾದರ್ ಅವರ ಕ್ಷೇತ್ರಕ್ಕೆ ಒಳಪಟ್ಟ ಬಳಿಕ ಗ್ರಾಮದಲ್ಲಿ ರಸ್ತೆ, ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಭಾರೀ ಬದಲಾವಣೆಯಾಗಿದೆ. ಗ್ರಾಮದ ಪ್ರತಿಯೊಂದು ರಸ್ತೆಗಳು ಕಾಂಕ್ರಿಟ್ ಆಗಿದೆ. ಗ್ರಾಮದಿಂದ ಯಾವುದೇ ಬೇಡಿಕೆ ನೀಡಿದ ಕೂಡಲೇ ಶಾಸಕರಿಂದ ಸ್ಪಂದನೆ ದೊರೆಯುತ್ತಿದ್ದು, ಈಗಾಗಲೇ ನೂರಾರು ಕೊಟಿ ರೂ. ಅನುದಾನ ಗ್ರಾಮಕ್ಕೆ ನೀಡಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಮಾತನಾಡಿ,ತುರ್ತು ಸಂದರ್ಭ ಹಾಗೂ ಆಪತ್ಕಾಲದಲ್ಲಿ ಆಂಬುಲೆನ್ಸ್ ಗೂ ಮೊದಲು ಜನರ ಸಹಾಯಕ್ಕೆ ಬರುವವರು ರಿಕ್ಷಾ ಚಾಲಕರು. ಶ್ರಮ ಜೀವಿಗಳಾದ ರಿಕ್ಷಾ ಚಾಲಕರು ಇಡೀ ದಿನ ತಮ್ಮ ರಿಕ್ಷಾದೊಂದಿದೆ ಬಿಸಿಲು, ಮಳೆಯಲ್ಲಿ ನಿಲ್ಲಬೇಕಾದ ಪರಿಸ್ಥಿತಿ. ಅವರಿಗೆ ನೆರಳಾಗಲು ಇಲ್ಲಿನ ರಿಕ್ಷಾ ಪಾರ್ಕ್ ಗೆ ಮೇಲ್ಛಾವಣಿ ನಿರ್ಮಿಸುವ ಬೇಡಿಕೆ ಇಟ್ಟಾಗ ಶಾಸಕರು ಕೂಡಲೇ ಸ್ಪಂದಿಸಿ ಅನುದಾನ ನೀಡಿದ್ದಾರೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಗ್ರಾಪಂ ಉಪಾಧ್ಯಕ್ಷೆ ಲಿಡಿಯಾ ಪಿಂಟೊ, ಅಭಿವೃದ್ಧಿ ಅಧಿಕಾರಿ ಹರೀಶ್ ಕೆ.ಎ., ತಾಪಂ ಮಾಜಿ ಸದಸ್ಯ ಅಸೀಫ್ ಇಕ್ಬಾಲ್, ಮೇರಮಜಲು ಗ್ರಾಪಂ ಸದಸ್ಯೆ ವೃಂದಾ ಪೂಜಾರಿ, ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೆ.ಕೃಷ್ಣಕುಮಾರ್ ಪೂಂಜ, ಅಡ್ಯಾರ್ ಸಹ್ಯಾದ್ರಿ ಕಾಲೇಜಿನ ನಿರ್ದೇಶಕ ದೇವದಾಸ್ ಹೆಗ್ಡೆ, ಸಮಾಜ ಸೆವಕ ಇಸ್ಮಾಯೀಲ್ ಕೆ.ಎಲ್., ಗ್ರಾಪಂ ಸದಸ್ಯ ಮುಹಮ್ಮದ್ ಮೋನು, ರಿಕ್ಷಾ ಪಾರ್ಕ್ ಗೌರವಾಧ್ಯಕ್ಷ ದಿನೇಶ್ ಶೆಟ್ಟಿ ಕೊಟ್ಟಿಂಜ, ಶಾಹುಲ್ ಹಮೀದ್ ಮೋನು, ಕರಾವಳಿ ರಿಕ್ಷಾ ಪಾರ್ಕ್ ಅಸೋಸಿಯೇಶನ್ ಅಧ್ಯಕ್ಷ ಮುಹಮ್ಮದ್ ಹನೀಫ್, ನಂ.೧ ರಿಕ್ಷಾ ಪಾರ್ಕ್ ಅಧ್ಯಕ್ಷ ಇನ್ಶಾದ್ ಮಾರಿಪಳ್ಳ, ಉದ್ಯಮಿಗಳಾದ ವಸಂತ ಸಾಲಿಯಾನ್, ಸುಕುಮಾರ್, ಜೀವನ್ ಎಂ.ಶೆಟ್ಟಿ ದೇವಸ್ಯ, ನಾರಾಯಣ ಮೂಲ್ಯ, ಮಸೀದಿಯ ಅಧ್ಯಕ್ಷ ಅಬ್ದುಲ್ ಖಾದರ್, ಗ್ರಾಪಂ ಮಾಜಿ ಅಧ್ಯಕ್ಷ ಮುಹಮ್ಮದ್ ಹನೀಫ್ ಉಪಸ್ಥಿತರಿದ್ದರು.
ನಂ.1 ರಿಕ್ಷಾ ಪಾರ್ಕ್ ಸದಸ್ಯ ಅಶ್ರಫ್ ಮಲ್ಲಿ ಸ್ವಾಗತಿಸಿದರು. ಇರಾ ಗ್ರಾಪಂ ಮಾಜಿ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ ಕಾರ್ಯಕ್ರಮ ನಿರ್ವಹಿಸಿದರು.