ಪುರಾತತ್ವದೊಂದಿಗಿನ ಸಂಬಂಧ ಸರಣಿ ಕಾರ್ಯಕ್ರಮ

ಉಡುಪಿ: ಹಾವಂಜೆ ಭಾವನಾ ಫೌಂಡೇಶನ್ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ, ಉಡುಪಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಹಾಗೂ ಶಿರಾಲಿ ಶ್ರೀ ಮಹಾಗಣಪತಿ ಮಹಾಮಾಯ ದೇವಸ್ಥಾನದ ಸಂಯುಕ್ತ ಆಶ್ರಯದಲ್ಲಿ ಪುರಾತತ್ವದೊಂದಿಗಿನ ಸಂಬಂಧ ಸರಣಿ ಕಾರ್ಯಕ್ರಮವು ಸಂಗೀತಪುರ ಎಂಬ ಶೀರ್ಷಿಕೆಯಡಿಯಲ್ಲಿ ಎರಡು ದಿನಗಳ ಕಾಲ ಭಟ್ಕಳ ತಾಲೂಕಿನಲ್ಲಿ ನಡೆಯಿತು.
ಇತಿಹಾಸ, ಕಲೆ ಹಾಗೂ ಸಂಸ್ಕೃತಿಯನ್ನು ಅರ್ಥೈಸಿಕೊಳ್ಳುವ ಈ ಸರಣಿ ಕಾರ್ಯಕ್ರಮವು ಪುರಾತನ ಹಿಂದೂ ಜೈನ ಮುಸ್ಲಿಂ ವಾಸ್ತು ಶಿಲ್ಪ, ಕಾವಿಕಲೆ, ಇನ್ನಿತರ ಶಿಲ್ಪಗಳ ಅಧ್ಯಯನ ಮತ್ತು ದಾಖಲಾತಿಯನ್ನು ಒಳಗೊಂಡಿತ್ತು. ಪಾಶ್ಚಿಮಾತ್ಯರೊಂದಿಗಿನ ವ್ಯಾಪಾರದ ಕೇಂದ್ರವಾಗಿದ್ದ ಭಟ್ಕಳ ತಾಲೂಕಿನ ಕೇತಪ್ಪನಾರಾಯಣ ದೇವಾಲಯ, ಶಾಂತಪ್ಪತಿರುಮಲ ದೇವಾಲಯ, ಜಟ್ಟಪ್ಪ ನಾಯಕ ಚಂದ್ರ ನಾಥೇಶ್ವರ ಬಸದಿ, ಭಟ್ಕಳದಲ್ಲಿನ ಮಸೀದಿ, ಸುಮಾರು 150-200 ವರ್ಷಗಳಷ್ಟು ಹಳೆಯ ಹಲವಾರು ಮನೆಗಳು ಮೊದಲಾದ ಹಲವಾರು ಪಾರಂಪರಿಕ ಕಟ್ಟಡಗಳನ್ನು ಸಂದರ್ಶಿಸಲಾಯಿತು.
ಶಿರಾಲಿಯ ಮಹಾಗಣಪತಿ ಮಹಾಮಾಯ ದೇವಾಲಯದಲ್ಲಿನ ಇಂಡೋ- ಯುರೋಪಿಯನ್ ಮರಾಠ ವಾಸ್ತುಶಿಲ್ಪದ ಕಟ್ಟಡದಲ್ಲಿನ ಕಾವಿ ಬಿತ್ತಿಚಿತ್ರಕಲೆಯ ಪ್ರಭಾವ-ಪರಿಣಾಮ ಮತ್ತು ಇದನ್ನು ಪುನರುಜ್ಜೀವನ ಗೊಳಿಸುವ ನಿಟ್ಟಿನಲ್ಲಿ ಚರ್ಚಿಸಲಾಯಿತು. ವಿಜಯನಗರ ಸಾಮ್ರಾಜ್ಯದ ಸಾಲ್ವ ಅರಸರ ನೆಲೆವೀಡಾಗಿದ್ದ ಸಂಗೀತ ಪುರ( ಹಾಡುವಳ್ಳಿ) ಒಂದು ಕಾಲದಲ್ಲಿ ಗತವೈಭವವನ್ನು ಮೆರೆದ ನಾಡಾಗಿತ್ತು. ಇಲ್ಲಿನ ಪ್ರಾಚೀನ ಸ್ಮಾರಕಗಳು ಹಾಗೂ ಅವಶೇಷ ಗಳನ್ನು ಸಂದರ್ಶಿಸಲಾಯಿತು.







