ಬಿಲ್ಕಿಸ್ ಬಾನು ಪ್ರಕರಣದ ಆರೋಪಿಗಳನ್ನು ಮರು ಬಂಧಿಸಿ, ಗಲ್ಲುಶಿಕ್ಷೆ ನೀಡಿ: ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಭಟನೆ

ಉಡುಪಿ : ಬಿಲ್ಕಿಸ್ ಬಾನು ಪ್ರಕರಣದಲ್ಲಿ ಅತ್ಯಾಚಾರ ಹಾಗೂ ಕೊಲೆ ಅಪರಾಧಕ್ಕಾಗಿ ಜೀವಾವಧಿ ಶಿಕ್ಷೆಗೊಳ ಗಾಗಿದ್ದು, ಇತ್ತೀಚೆಗೆ ಗುಜರಾತ್ ಸರಕಾರದಿಂದ ಬಿಡುಗಡೆಗೊಳಿಸಲ್ಪಟ್ಟ ಎಲ್ಲಾ 11 ಮಂದಿಯನ್ನು ಮರು ಬಂಧಿಸಿ ಅವರಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಹಿರಿಯ ಕಾಂಗ್ರೆಸ್ ನಾಯಕಿ ವರೋನಿಕಾ ಕರ್ನೇಲಿಯೊ ಹೇಳಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಹಾಗೂ ಉಡುಪಿ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಜಂಟಿ ಆಶ್ರಯದಲ್ಲಿ ಬಿಲ್ಕಿಸ್ ಬಾನು ಮೇಲಿನ ಅಮಾನವೀಯ ಸಾಮೂಹಿಕ ಅತ್ಯಾಚಾರದ ಅಪರಾಧಿಗಳನ್ನು ಬಿಡುಗಡೆ ಗೊಳಿಸಿದ ಗುಜರಾತ್ ಸರಕಾರದ ನಿರ್ಧಾರವನ್ನು ಖಂಡಿಸಿ ಅಜ್ದರಕಾಡಿನ ಹುತಾತ್ಮರ ಸ್ಮಾರಕದ ಬಳಿ ಇಂದು ಬೆಳಗ್ಗೆ ಆಯೋಜಿಸಿದ ಪ್ರತಿಭಟನಾ ಸಭೆ ಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ಅತ್ಯಾಚಾರ ಹಾಗೂ ಕೊಲೆ ಆರೋಪಗಳು ಸಾಬೀತಾಗಿ ಶಿಕ್ಷೆಗೆ ಗುರಿಯಾಗಿದ್ದ ಎಲ್ಲಾ 11 ಮಂದಿಗೆ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ರದ್ದುಗೊಳಿಸಿ ತ್ವರಿತವಾಗಿ ಗಲ್ಲು ಶಿಕ್ಷೆ ವಿಧಿಸಬೇಕೆಂದು ಅವರು ಆಗ್ರಹಿಸಿದರು.ಈ ಮೂಲಕ ದೇಶದಲ್ಲಿನ್ನೂ ನ್ಯಾಯಧರ್ಮ ಉಳಿದಿದೆ ಎಂಬುದು ಸಾಬೀತಾಗಲಿ ಎಂದರು.
ಜನರಿಂದ ಚುನಾಯಿಸಲ್ಪಟ್ಟ ಜನಪ್ರತಿನಿಧಿಗಳು ಆಡಳಿತ ನಡೆಸುವುದು ಪ್ರಜಾಪ್ರಭುತ್ವದ ಕ್ರಮ. ಆದರೆ ಅವರು ಬಹುಮತ ಹೊಂದಿರುವುದರಿಂದ ತನ್ನ ಪಕ್ಷದ ಕಾರ್ಯಕರ್ತರು ನಡೆಸುವ ಇಂಥ ಹೀನಕೃತ್ಯಗಳನ್ನು ಸಮರ್ಥಿಸಿಕೊಂಡು ಅವರನ್ನು ಬಿಡುಗಡೆಗೊಳಿಸುವುದು ಖಂಡಿತ ಪ್ರಜಾಪ್ರಭುತ್ವದ ಲಕ್ಷಣವಲ್ಲ. ಇದು ಇಡೀ ದೇಶದ ಮಹಿಳೆಯರು ತಲೆತಗ್ಗಿಸುವ ಘಟನೆ ಎಂದರು.
ಅದರಲ್ಲೂ ಶಿಕ್ಷೆಗೆ ಗುರಿಯಾಗಿದ್ದ 11 ಮಂದಿ ಜೈಲಿನಿಂದ ಹೊರಬಂದಾಗ ಅವರನ್ನು ಮಹಿಳೆಯರು ಸೇರಿ ಪಕ್ಷದವರು ಆರತಿ ಬೆಳಗಿ, ತಿಲಕವಿಟ್ಟು, ಸಿಹಿ ಹಂಚಿ ಸ್ವಾಗತಿಸಿರುವುದು ಬಿಜೆಪಿ ಹಾಗೂ ಅದರ ಸಂಘಟನೆಗಳ ನೈತಿಕ ಅದ:ಪತನದ ಸಂಕೇತ. ಇದಕ್ಕಾಗಿ ಇಡೀ ಸಮಾಜ ನಾಚಿಕೆಪಟ್ಟುಕೊಳ್ಳಬೇಕು ಎಂದರು.
ಮತ್ತೊಬ್ಬ ಮುಖಂಡ ಉದ್ಯಾವರ ನಾಗೇಶ ಕುಮಾರ್ ಮಾತನಾಡಿ, ಸಭ್ಯ, ಸುಸಂಸ್ಕೃತ ಸಮಾಜದಲ್ಲಿ ನಾವು ಬದುಕುತಿದ್ದೇವೆ ಎಂಬ ನಂಬಿಕೆಯನ್ನೇ ಈ ಇಡೀ ಪ್ರಕರಣ ಅಲುಗಾಡಿಸಿದೆ. ಸಮಾಜ ಇಂಥ ಕೃತ್ಯಗಳ ಬಗ್ಗೆ ಮೌನ ಮುರಿಯುವವರೆಗೆ ಇಂಥ ಹೀನ ಕೃತ್ಯಗಳು ನಡೆಯುತ್ತಲೇ ಇರುತ್ತವೆ. ಸಜ್ಜನರನ್ನು ದಾರಿತಪ್ಪಿಸುವ ನಾಟಕ ಕರಗತ ಮಾಡಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರ ನಡೆಯನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕಿದೆ ಎಂದು ಅವರು ಹೇಳಿದರು.
ಹರೀಶ್ ಕಿಣಿ ಅವರೂ ಸಭೆಯನ್ನುದ್ದೇಶಿಸಿ ಮಾತನಾಡಿದರು. ಪ್ರತಿಭಟನೆ ಯಲ್ಲಿ ಪಕ್ಷದ ಮುಖಂಡರಾದ ನಗರಸಭಾ ಸದಸ್ಯ ರಮೇಶ್ ಕಾಂಚನ್, ನರಸಿಂಹ ಮೂರ್ತಿ, ಡಾ.ಸುನೀತಾ ಶೆಟ್ಟಿ, ರೋಶನಿ ಒಲಿವೆರಾ, ಅಣ್ಯಯ್ಯ ಶೇರಿಗಾರ್, ಲೂಯಿಸ್ ಲೋಬೊ, ದಿನಕರ ಹೇರೂರು, ಶಬರೀಸ್ ಸುವರ್ಣ, ಮೇರಿ ಡಿಸೋಜ, ಸುಗಂಧಿ ಶೇಖರ್, ಆಶಾ ಕುವೆಲ್ಲೊ, ಕೀರ್ತಿ ಶೆಟ್ಟಿ, ಶೇಖರ್ ಕೋಟ್ಯಾನ್, ತಸ್ಮಿನ್ ಆರಾ, ಶೋಭಾ ಸಚ್ಚಿದಾನಂದ, ಮಹಮ್ಮದ್ ನಿಟ್ಟೂರು, ಸಾಯಿರಾಜ್ ಕಿದಿಯೂರು, ಅಶ್ವಿನಿ, ಪುಷ್ಪಾ, ಜ್ಯೋತಿ, ಶಾಂತಿ ಲೂವಿಸ್, ಗಣೇಶ್ ಕೋಟ್ಯಾನ್ ಮುಂತಾದವರು ಭಾಗವಹಿಸಿದ್ದರು.









