'ಕೊರಗರು ದುಶ್ಚಟಗಳಿಂದ ಸಾಯುತ್ತಿದ್ದಾರೆಂದು ಸರಕಾರಿ ಆದೇಶದಲ್ಲಿ ಉಲ್ಲೇಖ': ಆದಿವಾಸಿಗಳ ಸಮನ್ವಯ ಸಮಿತಿ ಖಂಡನೆ
ಉಡುಪಿ: ಕೊರಗರು ಕುಡಿತ ಹಾಗೂ ದುಶ್ಚಟಗಳಿಂದ ಸಾಯುತ್ತಿದ್ದಾರೆ ಎಂದು ಯಾವುದೇ ಅಧ್ಯಯನ, ದಾಖಲೆ ಇಲ್ಲದೇ ವರದಿಯೊಂದರಲ್ಲಿ ಹೇಳಿರುವುದನ್ನು ಕೊರಗರ ವೈದ್ಯಕೀಯ ವೆಚ್ಚ ಮರುಪಾವತಿ ಅವಕಾಶ ರದ್ದುಪಡಿಸುವ ಆದೇಶದಲ್ಲಿ ಉಲ್ಲೇಖಿಸಿರುವುದನ್ನು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಜಿಲ್ಲಾ ಸಂಘಟನಾ ಸಮಿತಿ ತೀವ್ರವಾಗಿ ಖಂಡಿಸಿದೆ.
ಈ ಬಗ್ಗೆ ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿರುವ ಜಿಲ್ಲಾ ಸಂಘಟನಾ ಸಮಿತಿಯ ಜಿಲ್ಲಾ ಸಂಚಾಲಕ ಶ್ರೀಧರ ನಾಡಾ, ಯಾವುದೇ ವೈಜ್ಞಾನಿಕ ಅಧ್ಯಯನ ನಡೆಯದೇ, ಯಾವುದೇ ದಾಖಲೆ ಇಲ್ಲದೇ ಸರಕಾರಿ ಆದೇಶದಲ್ಲಿ ಉಲ್ಲೇಖ ಮಾಡಿರುವುದು ಖಂಡನೀಯ ಎಂದಿದ್ದಾರೆ.
ಇತ್ತೀಚೆಗಷ್ಟೇ ಕೊರಗ ಸಮುದಾಯದ 20 ವರ್ಷದ ಒಳಗಿನ ಮಕ್ಕಳು ಎರಡು- ಮೂರು ತಿಂಗಳ ಅಂತರದಲ್ಲಿ ಸತ್ತಿದ್ದಾರೆ. ಅವರಿಗೆ ಯಾವುದೇ ದುಶ್ಚಟ ಗಳಿರಲಿಲ್ಲ. ಕಾರ್ಕಳದಲ್ಲಿ 7 ವರ್ಷದ ಮಗು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದೆ. ಬೈಂದೂರು ಕಾಲೇಜು ಓದುವ ಕೊರಗ ಹುಡುಗಿ 2 ಕಿಡ್ನಿ ಸಮಸ್ಯೆಗಾಗಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಬಾರ್ಕೂರಿನಲಿ ಮೊನ್ನೆ ಒಂದು ಹುಡುಗಿ ಸಾವು ಆಗಿದೆ. ಬೈಂದೂರು ತಾಲೂಕಿನ ನಾಡದಲ್ಲಿ ಯಾವುದೇ ಕುಡಿತ ದುಶ್ಚಟ ಇಲ್ಲದ ಚಂದ್ರ ಕೊರಗ ಎಂಬವರು ಕರುಳು ಸಂಬಂಧಿ ಕಾಯಿಲೆ, ಕಿಡ್ನಿ ವೈಫಲ್ಯ, ರಕ್ತ ಹೀನತೆ, ಮಧುಮೇಹದಂತಹ ಬಹು ಖಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಅವರು ಉದಾಹರಣೆಗಳನ್ನು ನೀಡಿದ್ದಾರೆ.
ಚಂದ್ರ ಕೊರಗ ಅವರಿಗೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಅವರು ಖಾಯಿಲೆ ತುತ್ತಾಗಿ 5 ವರ್ಷಗಳಾಗಿವೆ. ದುಡಿಯುವ ಏಕೈಕ ವ್ಯಕ್ತಿಯಾಗಿ ತನ್ನ ಕುಟುಂಬದ ಆಧಾರ ಸ್ಥಂಬವಾಗಿದ್ದ ಅವರ ಕುಟುಂಬದ ಸ್ಥಿತಿ ಇಂದು ಅದೋಗತಿಯಲ್ಲಿದೆ. ಸರಕಾರದ ಅತ್ಯಂತ ಅವೈಜ್ಞಾನಿಕ ಆದೇಶದಿಂದ ಇವರು ಇನ್ನು ಚಿಕಿತ್ಸೆ ಪಡೆಯಲು ಸಾಧ್ಯವಾಗಲಾರದು ಎಂದು ಶ್ರೀಧರ ನಾಡ ವಿವರಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಕೊರಗರ ಆರೋಗ್ಯ ಚಿಕಿತ್ಸೆಗೆ ಹಣ ಬಿಡುಗಡೆ ಮಾಡಲು ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಇಲಾಖೆ (ಐಟಿಡಿಪಿ) ಇಲಾಖೆ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಿದೆ. ಆದರೆ ಉನ್ನತ ಮಟ್ಟದ ಅಧಿಕಾರಿಗಳು ಅವೈಜ್ಞಾನಿಕ ವಿವರದೊಂದಿಗೆ ತಿರಸ್ಕಾರ ಮಾಡಿದ್ದರು. ಕೊರಗ ಸಮುದಾಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ಆರೋಗ್ಯದ ಚಿಕಿತ್ಸೆ ಪಡೆದವರ ಅಂಕಿ ಅಂಶಗಳು ನೋಡಿದರೆ ಶೇ.90ರಷ್ಟು ಕುಡಿತ ದುಶ್ಚಟ ಇಲ್ಲದವರು ಅನಾರೋಗ್ಯದ ಕಾರಣದಿಂದ ಚಿಕಿತ್ಸೆ ಪಡೆದಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಉಡುಪಿ ಜಿಲ್ಲೆಯಲ್ಲಿ ಕೊರಗರ ಆರೋಗ್ಯ ಚಿಕಿತ್ಸೆಗೆ ಹಣ ಬಿಡುಗಡೆ ಮಾಡಲು ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಇಲಾಖೆ (ಐಟಿಡಿಪಿ) ಇಲಾಖೆ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಿದೆ. ಆದರೆ ಉನ್ನತ ಮಟ್ಟದ ಅಧಿಕಾರಿಗಳು ಅವೈಜ್ಞಾನಿಕ ವಿವರದೊಂದಿಗೆ ತಿರಸ್ಕಾರ ಮಾಡಿದ್ದರು. ಕೊರಗ ಸಮುದಾಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ಆರೋಗ್ಯದ ಚಿಕಿತ್ಸೆ ಪಡೆದವರ ಅಂಕಿ ಅಂಶಗಳು ನೋಡಿದರೆ ಶೇ.90ರಷ್ಟು ಕುಡಿತ ದುಶ್ಚಟ ಇಲ್ಲದವರು ಅನಾರೋಗ್ಯದ ಕಾರಣದಿಂದ ಚಿಕಿತ್ಸೆ ಪಡೆದಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ನಿಜವಾಗಿಯೂ ಕಳೆದ 15 ವರ್ಷದಿಂದ ಕೊರಗರಲ್ಲಿ ಕುಡಿತ ತುಂಬಾ ಕಡಿಮೆ ಆಗಿದೆ. ಎಲ್ಲಾ ಸಮುದಾಯದಲ್ಲಿ ಇರುವಂತೆ ಗುಂಪಿನಲ್ಲಿ ಒಂದಿಬ್ಬರು ಕುಡಿಯುವವರು ಇರಬಹುದು. ಆದರೆ ಖಂಡಿತ ಕೊರಗರಲ್ಲಿ ಸ್ವಯಂ ಜಾಗೃತಿ ಬಂದಿದೆ. ಕರಾವಳಿ ಜಿಲ್ಲೆಗಳಲ್ಲಿ ಇಂದು ಕೊರಗ ಸಮುದಾಯದಲ್ಲಿ ಆಗಿರುವ ಬದಲಾವಣೆಯನ್ನು ನಾಗರಿಕ ಸಮಾಜ ಮಾದರಿಯಾಗಿ ಕಲಿಯಬೇಕು. ಅಳಿವಿನ ಭೀತಿಯಲ್ಲಿರುವ ಕೊರಗ ಸಮುದಾಯದ ವಿನಾಶಕ್ಕೆ ನಿಜವಾಗಿಯೂ ಸರಕಾರವೇ ಕಾರಣವಾಗಲಿದೆ ಎಂದವರು ಎಚ್ಚರಿಸಿದ್ದಾರೆ.
ಕೊರಗ ಸಮುದಾಯದ ಜನಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುವ ಕುರಿತು ಕಳೆದ 30 ವರ್ಷಗಳಿಂದ ತಿಳಿದಿದ್ದರೂ, ಯಾವುದೇ ಸರಕಾರ ಇದರ ಕಾರಣಗಳ ಬಗ್ಗೆ ಸಮಗ್ರವಾದ ಅಧ್ಯಯನ ನಡೆಸಿ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲವಾಗಿವೆ. ಕಳೆದ 2016ರಿಂದ 2021ರವರೆಗೂ ಕೇಂದ್ರ ಮತ್ತು ರಾಜ್ಯ ಸರಕಾರ, ಕೊರಗ ಮತ್ತು ಜೇನು ಕುರುಬ ಜನಾಂಗದವರಿಗೆ ನೀಡಬೇಕಾದ ಪಿವಿಟಿಜಿ ಅನುದಾನ ಬಿಡುಗಡೆ ಮಾಡದೆ ವಂಚಿಸಿದೆ. ಅನುದಾನದ ಕೊರತೆಯಿಂದ ಈವರೆಗೆ ಜಿಪಂನ ಟಿಎಸ್ಪಿ ಅನುದಾನ ಕ್ರೊಡೀಕರಿಸಿ ಕೊರಗರ ಆರೋಗ್ಯ ಚಿಕಿತ್ಸೆಗೆ ಖರ್ಚು ಮಾಡಲಾಗುತ್ತಿದೆ. ಈ ಹಣವು ಸಹ ಖಾಲಿಯಾಗುವ ಹಂತಕ್ಕೆ ಬಂದಿದೆ.
ಈ ವ್ಯವಸ್ಥೆ ಶತಮಾನಗಳಿಂದ ಅತ್ಯಂತ ಕ್ರೂರವಾಗಿ ಕೊರಗ ಸಮುದಾಯ ವನ್ನು ನಡೆಸಿಕೊಂಡು ಬರುತ್ತಿದೆ. ದೇಶದ ಯಾವುದೇ ಆದಿವಾಸಿ ಸಮುದಾಯಕ್ಕೆ ಇಲ್ಲದ ಅಸ್ಪೃಶ್ಯತೆ ಕೊರಗರನ್ನು ಕಾಡುತ್ತಿದೆ. ಅಸ್ಪೃಶ್ಯತೆಗೆ ಒಳಗಾದ ದಲಿತರು ಸಹ ಕೊರಗರನ್ನು ಮುಟ್ಟಿಸಿಕೊಳ್ಳುವುದಿಲ್ಲ. ಕೊರಗ ಸಮುದಾಯದ ಮೇಲೆ ಅಜಲು ಪದ್ದತಿಯಂತಹ ಆಚರಣೆಗಳನ್ನು ಹೇರಿಕೆ ಮಾಡಿರುವ ವ್ಯವಸ್ಥೆಯ ಪರಿಣಾಮ ಇಂದು ವಿನಾಶದಂಚಿಗೆ ಹೋಗಲು ಕಾರಣವಾಗಿದೆ. ಅಜಲು ಪದ್ಧತಿ ಕೊರಗರನ್ನು ಗುಲಾಮರಾಗಿ ಮಾಡಿದೆ. ಇದರಿಂದ ಆರ್ಥಿಕವಾಗಿ ಮಾತ್ರವಲ್ಲದೆ ಸಾಮಾಜಿಕವಾಗಿ ಸಹ ಶೋಷಣೆ ಅನುಭವಿಸಿದೆ.
ಕೊರಗರು ಬದುಕುವ ಕ್ರಮಗಳು, ತಲೆಮಾರುಗಳ ಕಾಲ ನಡೆದುಕೊಂಡು ಬಂದ ಅವಮಾನ, ದೌರ್ಜನ್ಯಗಳು, ಮೂಢನಂಬಿಕೆಗಳು, ಯಾವುದೇ ಕಾಯಿಲೆ ಬಂದಾಗ ಆಸ್ಪತ್ರೆಗೆ ಹೋಗಬೇಕೆಂಬ ಪ್ರಜ್ಞೆ ಇಲ್ಲದೆ ಇರುವುದು. ಕೊರಗರ ಸಮುದಾಯದ ಒಳಗಿನ ಸಾಮಾಜಿಕ ಕಟ್ಟುಪಾಡುಗಳು, ಪೌಷ್ಟಿಕ ಆಹಾರದ ಕೊರತೆ, ಜೀವನ ಭದ್ರತೆಯ ವಿಷಯಗಳು ಆರೋಗ್ಯದ ಮೇಲೆ ಪ್ರಭಾವ ಬೀರಿದೆ. ದೇಶದಲ್ಲಿ ಅತ್ಯಂತ ಅಂಚಿಗೆ ತಳಲ್ಪಟ ಅಳಿವಿನಂಚಿನಲ್ಲಿ ಇರುವ ಕೊರಗ ಸಮುದಾಯದ ಬದುಕನ್ನು ರಕ್ಷಣೆ ಮಾಡುವುದು ಸರಕಾರದ ಜವಾಬ್ದಾರಿ ಯಾಗಿದೆ ಎಂದು ಹೇಳಿಕೆ ತಿಳಿಸಿದೆ.
ಕೊರಗ ಸಮುದಾಯದವರಲ್ಲಿ ಹದಗೆಡುತ್ತಿರುವ ಆರೋಗ್ಯ ಪರಿಸ್ಥಿತಿ ಮತ್ತು ಜನಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುವ ಕುರಿತು ಸಮಗ್ರವಾದ ಅಧ್ಯಯನವನ್ನು ಸರಕಾರ ತುರ್ತಾಗಿ ನಡೆಸಬೇಕಾಗಿದೆ. ವಿಶೇಷವಾಗಿ ಈ ಸಮುದಾಯದ ಉಳಿವಿಗಾಗಿ ಸರಕಾರ ಆದ್ಯತೆ ಮೇರೆಗೆ ಇನಷ್ಟು ಯೋಜನೆ ರೂಪಿಸಿ ಜಾರಿಗೆ ತರಬೇಕು. ಅಲ್ಲದೇ ಕೊರಗ ಸಮುದಾಯದ ವೈದ್ಯಕೀಯ ವೆಚ್ಚ ಮರುಪಾವತಿಗೆ ಸಂಬಂಧಿಸಿದಂತೆ ಸರಕಾರ ಆದೇಶವನ್ನು ಕೂಡಲೇ ಹಿಂದಕ್ಕೆ ಪಡೆಯಬೇಕು. ಈ ಹಿಂದಿನಂತೆ ಆರೋಗ್ಯದ ಅನುದಾನ ಒದಗಿಸಬೇಕು ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಒತ್ತಾಯಿಸುತ್ತದೆ ಎಂದು ಹೇಳಿಕೆ ತಿಳಿಸಿದೆ.







