ಬೆಳ್ತಂಗಡಿ ಏತ ನೀರಾವರಿ ಯೋಜನೆಯು ಮಾರ್ಚ್ ತಿಂಗಳಾಂತ್ಯದಲ್ಲಿ ಲೋಕಾರ್ಪಣೆ: ಸಚಿವ ಕಾರಜೋಳ

ಉಪ್ಪಿನಂಗಡಿ: ದ.ಕ ಜಿಲ್ಲೆಯಲ್ಲಿಯೇ ಮೊತ್ತ ಮೊದಲ ಬಾರಿಗೆ ಅನುಷ್ಠಾನಗೊಳ್ಳುತ್ತಿರುವ 240 ಕೋಟಿ ರೂಪಾಯಿ ವೆಚ್ಚದ ಬೆಳ್ತಂಗಡಿ ಏತ ನೀರಾವರಿ ಯೋಜನೆಯು ಮುಂಬರುವ ಮಾರ್ಚ್ ತಿಂಗಳಾಂತ್ಯದ ಒಳಗಾಗಿ ಲೋಕಾರ್ಪಣೆಗೊಳ್ಳಲಿದೆ ಎಂದು ರಾಜ್ಯ ಜಲಸಂಪನ್ಮೂಲ ಖಾತೆ ಸಚಿವ ಗೋವಿಂದ ಎಂ ಕಾರಜೋಳ ತಿಳಿಸಿದರು.
ಅವರು ಗುರುವಾರ ಬೆಳ್ತಂಗಡಿ ತಾಲೂಕು ಮೊಗ್ರು ಗ್ರಾಮದ ಮುಗೇರಡ್ಕ ಎಂಬಲ್ಲಿ ನೇತ್ರಾವತಿ ನದಿಗೆ ನಿರ್ಮಿಸಲಾಗುತ್ತಿರುವ ಅಣೆಕಟ್ಟು ಸಹಿತ ಸೇತುವೆ ನಿರ್ಮಾಣ ಕಾರ್ಯ ಹಾಗೂ ಅದರಿಂದ ಬೆಳ್ತಂಗಡಿ ತಾಲೂಕಿನ 16ಗ್ರಾಮಗಳಿಗೆ ನೀರುಣಿಸಲಿರುವ ಏತ ನೀರಾವರಿ ಯೋಜನೆಯ ಕಾಮಗಾರಿ ಪರಿಶೀಲನೆ ನಡೆಸಿ ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದರು.
ದ.ಕ ಜಿಲ್ಲೆಯ ಇತಿಹಾಸದಲ್ಲಿ ಈ ಹಿಂದೆ ದೊಡ್ಡ ನೀರಾವರಿ ಯೋಜನೆಗಳು ಬಂದಿರಲಿಲ್ಲ. ಇಲ್ಲಿನ ತೂಗು ಸೇತುವೆ ಭಾರೀ ನೆರೆಗೆ ಕೊಚ್ಚಿ ಹೋದಾಗ, ಪರ್ಯಾಯ ತೂಗು ಸೇತುವೆ ರಚನೆಯ ಬದಲು ಸಾರ್ವಕಾಲಿಕ ಸೇತುವೆಯ ನಿರ್ಮಾಣಕ್ಕೆ ಶಾಸಕರು ಆದ್ಯತೆ ನೀಡಿದ್ದರು. ಸೇತುವೆಯ ನಿರ್ಮಾಣದ ಜೊತೆ ಜೊತೆಗೆ ಕಿಂಡಿ ಅಣೆಕಟ್ಟು ನಿರ್ಮಿಸಿ ತಾಲೂಕಿನ ಹಲವು ಗ್ರಾಮಗಳ ನೀರಿನ ಬೇಡಿಕೆಯನ್ನು ಪೂರೈಸುವ ಉದ್ದೇಶದಿಂದ ಏತ ನೀರಾವರಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಕಳೆದ ಅವಧಿಯಲ್ಲಿ ಸತತ ಮಳೆಯಿಂದಾಗಿ ಕೇವಲ 3 ತಿಂಗಳು ಮಾತ್ರ ಕಾಮಗಾರಿಗೆ ಅವಕಾಶ ಲಭಿಸಿದ್ದು, ಈ ಬಾರಿ ಪ್ರಕೃತಿ ಸಹಕರಿಸಿದರೆ ಮುಂದಿನ ಐದು ತಿಂಗಳ ಒಳಗಾಗಿ ಕಾಮಗಾರಿ ಪೂರ್ಣೈಸಲು ಪ್ರಯತ್ನಿಸಲಾಗುವುದು ಎಂದರು.
ಪ್ರಸಕ್ತ ರಾಜ್ಯ ಸರಕಾರ 66 ಲಕ್ಷ ಹೆಕ್ಟೇರು ಕೃಷಿ ಭೂಮಿಗೆ ನೀರುಣಿಸಲು ಯೋಜನೆ ರೂಪಿಸಿದ್ದು, ಈ ಪೈಕಿ 40 ಲಕ್ಷ ಹೆಕ್ಟೇರು ಕೃಷಿ ಭೂಮಿಗೆ ಬೃಹತ್ ಮತ್ತು ಮಧ್ಯಮ ಗಾತ್ರದ ನೀರಾವರಿ ಯೋಜನೆಯ ಮೂಲಕ 10 ಲಕ್ಷ ಹೆಕ್ಟೇರು ಕೃಷಿ ಭೂಮಿಗೆ ಸಣ್ಣ ನೀರಾವರಿ ಯೋಜನೆಯ ಮೂಲಕ ನೀರುಣಿಸುವ ಗುರಿ ಸಾಧಿಸಲಾಗುತ್ತಿದೆ. ಅಂತರ್ ರಾಜ್ಯ ಹರಿಯುವ ನೀರಿನ ಹಂಚಿಕೆಯಲ್ಲಿ ರಾಜ್ಯದ ಪಾಲನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಸರಕಾರ ಬದ್ದವಾಗಿದ್ದು, ಕೃಷ್ಣ ಮೇಲ್ದಂಡೆ ಯೋಜನೆಗೆ ಮಹಾರಾಷ್ಟ್ರ, ಆಂದ್ರಪ್ರದೇಶ, ತೆಲಂಗಾಣ ರಾಜ್ಯ ಸರಕಾರ ನ್ಯಾಯಾಲಯದ ಮೆಟ್ಟಿಲೇರಿಸಿರುವುದರಿಂದ ಯೋಜನೆಯ ಅನುಷ್ಠಾನ ವಿಳಂಬವಾಗಿದೆ. ಮೇಕೆದಾಟು ಯೋಜನೆಯಲಿ ರಾಜ್ಯದ 4.75 ಟಿಎಂಸಿ ನೀರಿನ ಪಾಲು ದೊರತರೆ ಬೆಂಗಳೂರು ಮತ್ತದರ ಸುತ್ತಮುತ್ತಲ ಪ್ರದೇಶಗಳ ಜನರ ಕುಡಿಯುವ ನೀರಿನ ಬೇಡಿಕೆ ಈಡೇರಿಸಬಹುದಾಗಿದೆ. ತಮಿಳುನಾಡು ಸರಕಾರ ಇದರ ಬಗ್ಗೆ ದಾವೆ ಹೂಡಿರುವುದರಿಂದ ಯೋಜನೆಯ ಅನುಷ್ಠಾನ ವಿಳಂಬವಾಗಿದೆ ಎಂದರು.
ಎತ್ತಿನ ಹೊಳೆ ಕಾಮಗಾರಿ ಪ್ರಗತಿಯಲ್ಲಿದ್ದು, ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಯೋಜನೆಯ ಒಟ್ಟು ಕಾಮಗಾರಿಯು ನಿಗದಿತ ಅವಧಿಯಲ್ಲಿ ಪೂರ್ಣಗೊಂಡಿಲ್ಲ. ಮಹಾದಾಯಿ ಯೋಜನೆಯಿಂದ ರಾಜ್ಯದ ಪಾಲಾದ 3.9 ಟಿಎಂಸಿ ನೀರಿನ ಲಭ್ಯತೆಗಾಗಿ ಕೇಂದ್ರ ಸರಕಾರದ ಅನುಮತಿ ಪಡೆದು ಬೇಗನೇ ಕಾಮಗಾರಿ ಪ್ರಾರಂಭಿಸಲಾಗುವುದೆಂದರು.
ಕಾಮಗಾರಿ ವೀಕ್ಷಣೆಗೆ ಆಗಮಿಸಿದ ಸಚಿವರನ್ನು ಹಾಗೂ ಶಾಸಕ ಹರೀಶ್ ಪೂಂಜಾರವರನ್ನು ಮೊಗೇರಡ್ಕ ಮೂವರು ದೈವಗಳ ದೈವಸ್ಥಾನದಲ್ಲಿ ಗೌರವ ಸಲ್ಲಿಸಲಾಯಿತು.
ಈ ಸಂಧರ್ಭದಲ್ಲಿ ಜಲ ಸಂಪನ್ಮೂಲ ಇಲಾಖೆಯ ಸುಪರಿಂಟೆಂಡೆಂಟ್ ಇಂಜಿನಿಯರ್ ಭೀಮಾ ನಾಯಕ್, ಕಾರ್ಯಾಪಾಲಕ ಇಂಜಿನಿಯರ್ ನಟರಾಜ ಪಟೇಲ್, ಸಹಾಯಕ ಇಂಜಿನಿಯರ್ ಪ್ರಸನ್ನ, ದಾಸೇ ಗೌಡ, ವಿಜಯ್ ಶೆಟ್ಟಿ, ಎನ್.ಜಿ. ಭಟ್ ಪೂರಕ ಮಾಹಿತಿ ನೀಡಿದರು.
ಬಂದಾರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಪರಮೇಶ್ವರಿ, ಉಪಾಧ್ಯಕ್ಷ ಗಂಗಾಧರ ಪೂಜಾರಿ, ಸದಸ್ಯ ಬಾಲಕೃಷ್ಣ ಗೌಡ, ದೈವಸ್ಥಾನ ಸಮಿತಿ ಅಧ್ಯಕ್ಷ ರಾಮಣ್ಣ ಗೌಡ ಅಂತರ, ಮನೊಹರ್ ಅಂತರ, ಕೇಶವ ಗೌಡ ಜಾಲ್ನಡೆ, ಸುಧಾಕರ ಮೈಮಾರು, ರಾಮಣ್ಣ ಗೌಡ ಎರ್ಮಾಲು, ಬಾಬು ಗೌಡ ಮತ್ತಿತರರು ಉಪಸ್ಥಿತರಿದ್ದರು.








