ಮಂಗಳೂರಿನಲ್ಲಿ ಪ್ರಧಾನಿ ಮೋದಿ ಕಾರ್ಯಕ್ರಮ; ಪ್ರವೇಶ ಪಡೆಯಲು ಹರಸಾಹಸಪಟ್ಟ ಉದ್ಯಮಿ ಬಿ.ಆರ್.ಶೆಟ್ಟಿ
►ಸ್ಥಳದಲ್ಲಿದ್ದವರು ವಿವರಿಸಿದ ನಂತರ ಒಳಗೆ ಬಿಟ್ಟ ಪೊಲೀಸರು

ಮಂಗಳೂರು, ಸೆ.2: ಬಂಗ್ರ ಕೂಳೂರಿನಲ್ಲಿ ಶುಕ್ರವಾರ ನಡೆದ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದ ವಿಐಪಿ ಗ್ಯಾಲರಿಗೆ ಪ್ರವೇಶ ಪಡೆಯಲು ಉದ್ಯಮಿ ಬಿ.ಆರ್.ಶೆಟ್ಟಿ ಹರಸಾಹಸ ಪಟ್ಟ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಕಾರ್ಯಕ್ರಮ ಆರಂಭಕ್ಕಿಂತ ಕೆಲವೇ ನಿಮಿಷಗಳ ಮುಂಚೆ ಬಿ.ಆರ್.ಶೆಟ್ಟಿ ವಿಐಪಿ ಗ್ಯಾಲರಿಯನ್ನು ಪ್ರವೇಶಿಸಲು ಮುಂದಾದರು. ಈ ಸಂದರ್ಭ ಭದ್ರತಾ ಸಿಬ್ಬಂದಿ ಗ್ಯಾಲರಿ ಪ್ರವೇಶಿಸಲು ಪಾಸ್ ತೋರಿಸಲು ಸೂಚಿಸಿದರು. ಆದರೆ ಪಾಸ್ ಇಲ್ಲದ ಕಾರಣ ಭದ್ರತಾ ಸಿಬ್ಬಂದಿ ಬಿ.ಆರ್.ಶೆಟ್ಟಿಯನ್ನು ಒಳಗೆ ಬಿಡಲು ನಿರಾಕರಿಸಿದರು.
ಈ ಸಂದರ್ಭ ಬಿ.ಆರ್.ಶೆಟ್ಟಿಯ ಹಿಂಬಾಲಕರು ‘ನಮ್ಮನ್ನು ಒಳಗೆ ಬಿಡದಿದ್ದರೂ ಪರವಾಗಿಲ್ಲ. ಅವರನ್ನು ಒಳಗೆ ಬಿಡಿ. ಪ್ರಧಾನಿ ಮೋದಿಯವರನ್ನು ದುಬೈಯ ಕಾರ್ಯಕ್ರಮವೊಂದಕ್ಕೆ ಕರೆದೊಯ್ದದ ಬಿ.ಆರ್.ಶೆಟ್ಟಿಯನ್ನು ಒಳಗೆ ಬಿಡದಿದ್ದರೆ ಹೇಗೆ?’ ಎಂದು ಪ್ರಶ್ನಿಸತೊಡಗಿದರು.
ಕೊನೆಗೆ ಬಿ.ಆರ್. ಶೆಟ್ಟಿ ಅವರನ್ನು ಒಳಗೆ ಪ್ರವೇಶಿಸಲು ಅವಕಾಶ ನೀಡಲಾಯಿತು ಎಂದು ಮೂಲಗಳು ತಿಳಿಸಿವೆ. ಅಂತೂ ಈ ಹಿಂದೆ ದುಬೈಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮ ಆಯೋಜಿಸಿದ್ದ ಬಿ.ಆರ್.ಶೆಟ್ಟಿ ತವರು ಜಿಲ್ಲೆಯಲ್ಲೇ ಮೋದಿ ಕಾರ್ಯಕ್ರಮದ ವಿಐಪಿ ಗ್ಯಾಲರಿಯೊಳಗೆ ಪ್ರವೇಶ ಪಡೆಯಲು ಹರಸಾಹಸಪಡುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆಯಲ್ಲದೆ ಚರ್ಚೆಯನ್ನೂ ಹುಟ್ಟು ಹಾಕಿದೆ.