ಮುರುಘಾ ಶ್ರೀ ಬಂಧನ ವಿಚಾರ ಚರ್ಚೆ ಮಾಡದಿರುವುದೇ ಸೂಕ್ತ: ಕುಮಾರಸ್ವಾಮಿ

ಬೆಂಗಳೂರು, ಸೆ.2: ಮುರುಘಾಮಠದ ಶ್ರೀಗಳ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ಮಾಡದಿರುವುದೇ ಸೂಕ್ತ. ಆದರೆ, ರಾಜ್ಯ ಸರಕಾರ ಜವಾಬ್ದಾರಿಯುತವಾಗಿ ಪ್ರಕರಣವನ್ನ ನಿರ್ವಹಿಸಬೇಕು. ಏನೇನು ತೀರ್ಮಾನ ಮಾಡಬೇಕೋ ಮಾಡಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಶುಕ್ರವಾರ ನಗರದಲ್ಲಿರುವ ಜೆಡಿಎಸ್ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈ ರೀತಿಯ ಘಟನೆ ನಡೆಯಬಾರದಿತ್ತು ಎನ್ನುವುದು ನನ್ನ ಅಭಿಪ್ರಾಯ. ಇದು ತುಂಬಾ ಸೂಕ್ಷ್ಮ ವಿಚಾರ ಎಂದರು.
ಮೊದಲೆ ನಮ್ಮ ರಾಜ್ಯ ಭಾವನಾತ್ಮಕ, ಆಚಾರ ವಿಚಾರಗಳಲ್ಲಿ ಬೇಯುತ್ತಿದೆ. ಇಂತಹ ವಿಚಾರಗಳಲ್ಲಿ ನಾವು ಚರ್ಚೆ ಮಾಡದೆ ಇರುವುದೇ ಸೂಕ್ತ. ಸರಕಾರದ ಮಟ್ಟದಲ್ಲಿ ಏನು ತನಿಖೆ ಮಾಡಬೇಕೋ ಮಾಡಲಿ. ತನಿಖೆ ವಿಳಂಬದ ವಿಚಾರ ಸರಕಾರಕ್ಕೆ ಸಂಬಂಧಿಸಿದ್ದು, ಈ ಬಗ್ಗೆ ನಾನು ಹೆಚ್ಚು ಚರ್ಚೆ ಮಾಡಲ್ಲ ಎಂದು ಕುಮಾರಸ್ವಾಮಿ ತಿಳಿಸಿದರು.
ಆನಂದ್ ಸಿಂಗ್ ಬೆದರಿಕೆ ವಿಚಾರ: ಸಚಿವ ಆನಂದ್ ಸಿಂಗ್ ಬೆದರಿಕೆ ಹಾಕಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಆತ್ಮಹತ್ಯೆ ಮಾಡಿಕೊಳ್ಳಲು ಹೋದರೆಂದು ಹೇಳಿ ದೂರದಾರರ ಮೇಲೆ ಎಫ್ಐಆರ್ ದಾಖಲಾಗಿದೆಯೆಂದು ಮಾಧ್ಯಮಗಳಲ್ಲಿ ನೋಡಿದೆ. ಬೆದರಿಕೆ ಹಾಕಿ, ಹೆದರಿಸಿ, ಪ್ರಾಣ ಬೆದರಿಕೆ ಒಡ್ಡಿದವರನ್ನು ಮಂತ್ರಿ ಎಂದು ಬಿಡಲಾಗಿದೆ. ಇದರಿಂದ ಸರಕಾರದ ಆಡಳಿತ ದುರುಪಯೋಗ ಆಗಿದೆ. ಈ ವಿಚಾರವನ್ನು ತಿಳಿದುಕೊಂಡು ವಿಧಾನಸನಭೆ ಕಲಾಪದಲ್ಲಿ ಮಾತನಾಡುತ್ತೇನೆ ಎಂದು ಹೇಳಿದರು.







