ರೈಲಿನಲ್ಲಿ ಕಳ್ಳತನವಾದರೆ ಏನು ಮಾಡಬೇಕು?
ಕಾರ್ಯಕಾರಿ ಕಾರ್ಯದರ್ಶಿ, ರೈಲ್ವೇ ಯಾತ್ರಿ ಸಂಘ ಮುಂಬೈ ಬೆಂಗಳೂರಿನಿಂದ ಕಾರವಾರಕ್ಕೆ ಹೋಗುವ ಕೇವಲ 14ಬೋಗಿಗಳಿರುವ ಪಂಚಗಂಗಾ ಎಕ್ಸ್ಪ್ರೆಸ್ ರೈಲಿನಲ್ಲಿ ಇತ್ತೀಚೆಗೆ (ಆಗಸ್ಟ್ 30) ನಸುಕಿನ ವೇಳೆ (2:20 ಗಂಟೆಗೆ) ಮಹಿಳಾ ಪ್ರಯಾಣಿಕರೋರ್ವರ 40 ಸಾವಿರ ರೂ. ನಗದು ಹಾಗೂ 8 ಲಕ್ಷ ರೂ. ವೌಲ್ಯದ ಚಿನ್ನಾಭರಣ ಕಳವಾದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಇದಕ್ಕೆ ಪೂರಕ ಮಾಹಿತಿ ನೀಡ ಬಯಸುತ್ತೇನೆ.
*ಸಾವಿರಾರು ಪ್ರಯಾಣಿಕರು ಪ್ರಯಾಣಿಸುವ ರೈಲಿನಲ್ಲಿ ಲಕ್ಷಗಟ್ಟಲೆ ರೂ. ಮೌಲ್ಯದ ಸೊತ್ತುಗಳನ್ನು ವ್ಯಾನಿಟಿ ಬ್ಯಾಗ್ನಲ್ಲಿ ಹಾಕಿ ಪ್ರಯಾಣಿಸುವುದು ತಪ್ಪು. ಅದೂ ಲಕ್ಷಗಟ್ಟಲೆ ಬೆಲೆಬಾಳುವ ಚಿನ್ನಾಭರಣಗಳನ್ನು ವ್ಯಾನಿಟಿ ಬ್ಯಾಗ್ನಲ್ಲಿಟ್ಟು ಅದನ್ನೇ ತಲೆದಿಂಬಾಗಿ ಉಪಯೋಗಿಸಿ ಮಲಗಿದ್ದು ಬಹುದೊಡ್ಡ ಪ್ರಮಾದ.
ಬೆಲೆಬಾಳುವ ಸಾಮಗ್ರಿಗಳನ್ನು ಯಾವಾಗಲೂ ಝಿಪ್ ಇಲ್ಲದ ಬ್ರೀಫ್ಕೇಸ್ನೊಳಗೆ ಇಟ್ಟು ಅದಕ್ಕೆ ಮೂರೂ ಬೀಗ ಹಾಕಿ ಆನಂತರ ಅದಕ್ಕೆ ಕಬ್ಬಿಣ/ಸ್ಟೀಲ್ಚೈನ್ ಸಿಕ್ಕಿಸಿ ಸೀಟಿನ ಕೆಳಗಿರುವ ಕೊಂಡಿಯೊಳಗಿನಿಂದ ತಂದು ಆ ನಂತರ ಬೀಗವನ್ನು ಚೈನಿನ ಎರಡೂ ಕಡೆಗೆ ವರ್ತುಲಾಕಾರದ ಕೊಂಡಿಗಳಿಗೆ ಹಾಕಿ ಬಳಿಕ ಮಲಗಬೇಕು. ರಾತ್ರಿ ಸಮಯದಲ್ಲಿ ಆ ಬ್ರೀಫ್ಕೇಸ್ ಎಳೆದರೂ ಅದು ಸೀಟು ಬಿಟ್ಟು ಕದಲಲಾರದು ಹಾಗೂ ಎಳೆಯುವ ಶಬ್ದಕ್ಕೆ ಎಚ್ಚರವೂ ಆಗುತ್ತದೆ.
ಬೆಲೆಬಾಳುವ ವಸ್ತುಗಳನ್ನು ಝಿಪ್ ಇರುವ ಲಗೇಜ್ ಬ್ಯಾಗ್ನೊಳಗೆ ಯಾವತ್ತೂ ಇಡಬಾರದು ಎಂದು ಮಕ್ಕಳಿಗೂ ಗೊತ್ತು. ಝಿಪ್ನ ಎರಡೂ ರನ್ನರ್ಗಳನ್ನು ಹತ್ತಿರ ತಂದು ಅದಕ್ಕೆ ಎಷ್ಟೇ ಗಟ್ಟಿಯಾದ ಬೀಗ ಹಾಕಿದರೂ ಅದರಿಂದ ಸಾಮಗ್ರಿಗಳನ್ನು ಸಲೀಸಾಗಿ ಕದಿಯಬಹುದು. ಈ ಎರಡೂ ಝಿಪ್ಗಳ ಮಧ್ಯದಲ್ಲಿ ಪೆನ್/ಪೆನ್ಸಿಲ್ ತೂರಿಸಿದರೆ ಇಡೀ ಝಿಪ್ ಸಲೀಸಾಗಿ ತೆರೆದುಕೊಳ್ಳುತ್ತದೆ. ಆನಂತರ ಕದಿಯಲು ಎಷ್ಟು ಸಮಯ ಬೇಕು ನೀವೇ ಹೇಳಿ? ಕದ್ದ ನಂತರ ಎರಡೂ ಸ್ಟೀಲ್ ರನ್ನರ್ಗಳನ್ನು ಜೊತೆಯಾಗಿ ಪುನಃ ಒಂದು ಬಾಯಿಯಿಂದ ಇನ್ನೊಂದು ಬಾಯಿಗೆ ಸರಿಸಿದರೆ ಝಿಪ್ನ ಮೇಲಿನ ಹಲ್ಲುಗಳು ಕೆಳಗಿನ ಹಲ್ಲುಗಳೊಳಗೆ ಸೆಟೆದು ನಿಂತು ಬ್ಯಾಗ್ ಪುನಃ ಮುಚ್ಚುತ್ತದೆ. ವ್ಯಕ್ತಿಯೊಬ್ಬರು ಸೀಟಿನಿಂದ ಎದ್ದು ಶೌಚಾಲಯಕ್ಕೆ ಹೋಗಿ ವಾಪಸ್ ಬರುವುದರೊಳಗೆ ಬ್ಯಾಗ್ನಲ್ಲಿದ್ದದ್ದನ್ನು ಸಲೀಸಾಗಿ ಕದಿಯಬಹುದಾಗಿದೆ..
ರೈಲಿನಲ್ಲಿ ಪ್ರಯಾಣಿಸುವಾಗ ನಮ್ಮ ಎಲ್ಲಾ ವೈಯಕ್ತಿಕ ಸಾಮಗ್ರಿಗಳನ್ನು ನಾವೇ ಜೋಪಾನವಾಗಿಟ್ಟುಕೊಳ್ಳಬೇಕು. ಲಕ್ಷಾಂತರ ರೂ. ಬೆಲೆ ಬಾಳುವ ಚಿನ್ನಾಭರಣವನ್ನು ಹ್ಯಾಂಡ್ಬಾಗ್ನೊಳಗೆ ಹಾಕಿ ಅದನ್ನೇ ತಲೆದಿಂಬಾಗಿಸಿ ಆನಂತರ ರೈಲ್ವೆ ಇಲಾಖೆಯನ್ನು ದೂರುವುದು ಕೂಡ ತಪ್ಪಾಗುತ್ತದೆ.
ರೈಲು ಟಿಕೆಟ್ ಖರೀದಿಸುವಾಗ ‘ಲೈಫ್/ಸಾಮಗ್ರಿ ಇನ್ಸೂರೆನ್ಸ್’ ಮಾಡಿದ್ದರೆ ಆಗ ಕದ್ದ ಮಾಲಿನ ಬಗ್ಗೆ ವಿಮಾ ಸಂಸ್ಥೆ ಪರಿಹಾರ ನೀಡಬಹುದು. ಬೆಂಗಳೂರು-ಕಾರವಾರದ ಟಿಕೆಟಿಗೆ ಈ ವಿಮೆ ಕೇವಲ 17.09 ರೂ. ಮಾತ್ರ. ಕೆಲ ಪ್ರಯಾಣಿಕರು ಈ ಅತ್ಯಂತ ಕಡಿಮೆ ಹಣದ ವಿಮೆ ಮಾಡಿಸಲೂ ಜಿಪುಣತನ ತೋರಿಸುತ್ತಾರೆ. ಆನಂತರ ಪಶ್ಚಾತ್ತಾಪ ಪಡುತ್ತಾರೆ.
ಪಂಚಗಂಗಾ ಎಕ್ಸ್ಪ್ರೆಸ್ನಲ್ಲಿ ಇಂತಹ ದರೋಡೆ ಸಂಭವಿಸುವುದಕ್ಕೆ ಕಡಿಮೆ ಬೋಗಿಗಳಿರುವುದೇ ದೊಡ್ಡ ಕಾರಣವಾಗಿದೆ. ಪ್ರತೀ ಎಕ್ಸ್ಪ್ರೆಸ್ ರೈಲಿಗೆ 23 ಅಥವಾ 24 ಬೋಗಿಗಳಿರುತ್ತವೆ. ಆದರೆ ಪಂಚಗಂಗಾ ಎಕ್ಸ್ ಪ್ರೆಸ್ಗೆ ಕೇವಲ 14 ಬೋಗಿಗಳಿವೆ. ದೂರದ ಬೆಂಗಳೂರಿನಿಂದ 615 ಕಿ.ಮೀ. ಪ್ರಯಾಣಿಸಿ ಕಾರವಾರ ತನಕ ಹೋಗುವ ರೈಲಿಗೆ 14 ಬೋಗಿಗಳು ಯಾವತ್ತೂ ಸಾಲುವುದಿಲ್ಲ. ಅತ್ಯುತ್ತಮ ಜನಸ್ಪಂದನೆ ಇದ್ದು, ಯಾವತ್ತೂ ಒಂದು ಸೀಟೂ ಖಾಲಿ ಇರದ ಈ ರೈಲಿನಲ್ಲಿ ಯಾವತ್ತೂ ಆರ್ಎಸಿ ಹಾಗೂ ವೈಟಿಂಗ್ ಲಿಸ್ಟ್ ಟಿಕೆಟ್ ಮುಂಗಡ ಕಾದಿರಿಸಲಾಗುತ್ತಿದೆ.
ಭಾರತೀಯ ರೈಲು ನಿಯಮಾವಳಿಗಳ ಪ್ರಕಾರ ವೈಟಿಂಗ್ ಲಿಸ್ಟ್ ಪ್ರಯಾಣಿಕರು ರಿಸರ್ವೇಶನ್ ಬೋಗಿಗಳಲ್ಲಿ ಪ್ರಯಾಣಿಸಬಾರದು. ಆದರೂ ಅವರಿಗೆ ದಂಡ ಹಾಕದೆ ಪ್ರಯಾಣಿಸಲು ಬಿಡಲಾಗುತ್ತದೆ. ದರೋಡೆ ಮಾಡುವ ಮನಸ್ಸುಳ್ಳ ವ್ಯಕ್ತಿಗಳು ಬೇಕೆಂದೇ ವೈಟಿಂಗ್ ಲಿಸ್ಟ್ ಟಿಕೆಟ್ ಖರೀದಿಸಿ ಪ್ರಯಾಣಿಸುತ್ತಾರೆ. ಪ್ರಯಾಣದುದ್ದಕ್ಕೂ ಅವರು ಹೆಚ್ಚು ಬೆಲೆ ಬಾಳುವ ಚಿನ್ನಾಭರಣ ಧರಿಸುವವರ ಹಾಗೂ ಸಲೀಸಾಗಿ ದರೋಡೆ ಮಾಡಲು ಆಗುವ ವ್ಯಕ್ತಿ ಹಾಗೂ ಸಾಮಗ್ರಿಗಳ ಮೇಲೆ ಕಣ್ಣಿಡುತ್ತಾರೆ. ರಾತ್ರಿಯಾದೊಡನೆ 2 ಲೋವರ್ ಬರ್ತ್ ಸೀಟುಗಳ ಮಧ್ಯೆ ಮಲಗುತ್ತಾರೆ. ಕದಿಯಲು ಸಲೀಸಾಗುತ್ತದೆ; ಸೀಟುಗಳ ಅಡಿಯಲ್ಲಿ ತಾನೇ ಎಲ್ಲರ ಬ್ಯಾಗ್ ಇರುವುದು?
ಆದುದರಿಂದ ಪಂಚಗಂಗಾ ಎಕ್ಸ್ಪ್ರೆಸ್ನ 14 ಬೋಗಿಗಳ ಬದಲು ಅದಕ್ಕೆ ಇನ್ನೂ 10 ಹೆಚ್ಚುವರಿ ಸ್ಲೀಪರ್ ಬೋಗಿಗಳನ್ನು ಸೇರಿಸಿ ಓಡಿಸಿದರೆ ಆ 10 ಬೋಗಿಗಳಲ್ಲಿ 800 ಹೆಚ್ಚುವರಿ ಪ್ರಯಾಣಿಕರು ಮಲಗಿ ಪ್ರಯಾಣಿಸಬಹುದು. ಆಗ ವೈಟಿಂಗ್ ಲಿಸ್ಟ್ ಟಿಕೆಟ್ ಇರುವವರಿಗೂ ಕನ್ಫರ್ಮ್ ಟಿಕೆಟ್ ದೊರೆಯುತ್ತದೆ. 2 ಸೀಟುಗಳ ಮಧ್ಯೆ ಕೆಳಗಡೆ ಮಲಗಿ ಪ್ರಯಾಣಿಸುವ ಪ್ರಮೇಯವಿಲ್ಲ. ಹಾಗಾಗಿ ಕಳ್ಳತನವೂ ನಡೆಯದು.
ಪ್ರತೀ ಎಕ್ಸ್ಪ್ರೆಸ್ ರೈಲಿನಲ್ಲಿ ಟಿಕೇಟು ಪರಿವೀಕ್ಷಕರ ಬಳಿ ದೂರು ಪುಸ್ತಕವಿದೆ. ಅದರಲ್ಲಿ ಟಿಕೆಟ್ ಪಿಎನ್ಆರ್ ಸಂಖ್ಯೆ ತಪ್ಪದೆ ನಮೂದಿಸಿ ದೂರು ನೀಡಬಹುದು.
ದೂರು ನೀಡಿದ ಬಳಿಕದ ರೈಲು ನಿಲ್ದಾಣದಲ್ಲಿ ‘ರೈಲ್ವೆ ಪ್ರೊಟೆಕ್ಷನ್ ಫೋರ್ಸ್’ (ಆರ್ಪಿಎಫ್) ಪೊಲೀಸರು ಮಹಜರು ನಡೆಸಿ ದೂರು ಸಂಖ್ಯೆಯೊಂದಿಗೆ ಎಫ್ಐಆರ್ ದಾಖಲಿಸುತ್ತಾರೆ. ಚಲಿಸುವ ರೈಲಿನಿಂದಲೇ ಅಂತರ್ಜಾಲದ ಮುಖಾಂತರ ‘ರೈಲ್ ಮದದ್ ಆ್ಯಪ್’ನಲ್ಲಿ ಪಿಎನ್ಆರ್ ಸಂಖ್ಯೆ ನಮೂದಿಸಿ ದೂರು ದಾಖಲಿಸಬಹುದು. ಮೂವತ್ತು ನಿಮಿಷದೊಳಗೆ ರೈಲು ಅಧಿಕಾರಿಗಳು ನಿಮ್ಮಲ್ಲಿಗೆ ಬಂದು ಪರಿಸ್ಥಿತಿಯ ಅವಲೋಕನ ಮಾಡಿ ಸ್ಪಂದಿಸುತ್ತಾರೆ.
ಪಂಚಗಂಗಾ ಎಕ್ಸ್ಪ್ರೆಸ್ಗೆ ಕಾರವಾರದಿಂದ ರಾತ್ರಿ 8ಕ್ಕೆ ಹೊರಟು ಮರುದಿನ ಬೆಳಗ್ಗೆ 9:15ಕ್ಕೆ ಬೆಂಗಳೂರು ತಲುಪುವ ಹಾಗೂ ಬೆಂಗಳೂರಿನಿಂದ ಸಾಯಂಕಾಲ 4:50ಕ್ಕೆ ಹೊರಟು ಮರುದಿನ ಬೆಳಗ್ಗೆ 6:25ಕ್ಕೆ ಕಾರವಾರ ತಲುಪುವ (24ಬೋಗಿಗಳ) ರಹದಾರಿ ಖಾಲಿ ಇದೆ. ಶೀಘ್ರವೇ ಸಮಯ ಪರಿಷ್ಕರಿಸಿ 24 ಬೋಗಿಗಳೊಂದಿಗೆ ಸಂಚರಿಸಿದರೆ ಇಂತಹ ದರೋಡೆ ತಪ್ಪಿಸಬಹುದು.