ಉಡುಪಿ ಜಿಲ್ಲೆಯ ಎಂಡೋಸಲ್ಫಾನ್ ಬಾಧಿತರಿಗೆ ಎಲ್ಲಾ ಸೌಲಭ್ಯ ಒದಗಿಸಿ: ಅಧಿಕಾರಿಗಳಿಗೆ ಉಸ್ತುವಾರಿ ಸಚಿವ ಅಂಗಾರ ಸೂಚನೆ

ಉಡುಪಿ, ಸೆ.3: ಉಡುಪಿ ಜಿಲ್ಲೆಯಲ್ಲಿ ಪ್ರಸ್ತುತ ಒಟ್ಟು 1575 ಮಂದಿ ಎಂಡೋಸಲ್ಫಾನ್ ಬಾಧಿತರಿದ್ದು, ಇವರೆಲ್ಲರಿಗೂ ಸರಕಾರದ ವಿವಿಧ ಸೌಲಭ್ಯ ಗಳಾದ ಮಾಸಾಶನ, ವೈದ್ಯಕೀಯ ಸೌಲಭ್ಯ, ಸಾಧನ ಸಲಕರಣೆ ವಿತರಣೆ, ಉಚಿತ ಬಸ್ ವ್ಯವಸ್ಥೆ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಸಮರ್ಪಕವಾಗಿ ತಲುಪಿಸುವಂತೆ ರಾಜ್ಯ ಬಂದರು, ಮೀನುಗಾರಿಕೆ ಹಾಗೂ ಒಳನಾಡ ಜಲಸಾರಿಗೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.
ಶನಿವಾರ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಎಂಡೋಸಲ್ಫಾನ್ ಸಾಮಾನ್ಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಜಿಲ್ಲೆಯ ಎಂಡೋಸಲ್ಫಾನ್ ಬಾಧಿತರ ಆರೋಗ್ಯ ಸುಧಾರಣೆ ಮತ್ತು ಪುರ್ನವಸತಿಗೆ ಸಂಬಂದಪಟ್ಟ ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ಬಗೆಹರಿಸಲು ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು ಎಂದವರು ಹೇಳಿದರು.
ಡೇ ಕೇರ್ ಸೆಂಟರ್: ಕುಂದಾಪುರದ ಸೇನಾಪುರದಲ್ಲಿ ಎಂಡೋಸಲ್ಫಾನ್ ಬಾಧಿತ ಅಂಗವಿಕಲರಿಗೆ ಶಾಶ್ವತ ಪುರ್ನವಸತಿ ಕೇಂದ್ರವನ್ನು ಕೂಡಲೇ ಪ್ರಾರಂಭಿಸಲು ಹಾಗೂ ಜಿಲ್ಲೆಯಲ್ಲಿ ಇವರಿಗಾಗಿ ಪ್ರತ್ಯೇಕ ಡೇ ಕೇರ್ ಸೆಂಟರ್ ಪ್ರಾರಂಭಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು.
ಜಿಲ್ಲೆಯಲ್ಲಿ 1980-81ರಿಂದ 2000-01ರವರೆಗೆ ಕುಂದಾಪುರದ 29, ಉಡುಪಿಯ 5 ಮತ್ತು ಕಾರ್ಕಳದ 9 ಗ್ರಾಮ ಸೇರಿದಂತೆ ಒಟ್ಟು 43 ಗ್ರಾಮ ಗಳಲ್ಲಿ ಎಂಡೋಸಲ್ಫಾನ್ ಸಿಂಪಡಣೆಯಾಗಿದ್ದು, ಈ ಗ್ರಾಮಗಳಲ್ಲದೇ ಅವುಗಳ ಅಕ್ಕಪಕ್ಕದ 43 ಗ್ರಾಮಗಳು ಸೇರಿದಂತೆ ಒಟ್ಟು 86 ಗ್ರಾಮಗಳಲ್ಲಿ ಇದುವರೆಗೆ ಒಟ್ಟು 28 ಸ್ಕೃೀನಿಂಗ್ ಶಿಬಿರಗಳನ್ನು ನಡೆಸಿ ಒಟ್ಟು 1705 ಎಂಡೋ ಪೀಡಿತರನ್ನು ಗುರುತಿಸಲಾಗಿದೆ. ಇವರಲ್ಲಿ 130 ಮಂದಿ ಈಗಾಗಲೇ ಮೃತಪಟ್ಟಿದ್ದು, ಪ್ರಸ್ತುತ 1575 ಮಂದಿ ಎಂಡೋಸಲ್ಫಾನ್ ಬಾಧಿತರು ಜಿಲ್ಲೆಯಲ್ಲಿದ್ದಾರೆ ಎಂದು ಸಭೆಗೆ ಮಾಹಿತಿ ನೀಡಲಾಯಿತು.
ಉಚಿತ ಪಡಿತರಕ್ಕೆ ಸೂಚನೆ: ಮಾರ್ಚ್ 2019ರಿಂದ ಇದುವರೆಗೆ ಹೊಸದಾಗಿ ಗುರುತಿಸಲಾಗಿರುವ 110 ಮಂದಿ ಎಂಡೋಸಲ್ಫಾನ್ ಬಾಧಿತರ ಪಟ್ಟಿಗೆ ಅನುಮೋದನೆ ನೀಡಿ ಅವರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡುವಂತೆ ತಿಳಿಸಿದ ಸಚಿವರು, ಎಂಡೋ ಬಾಧಿತರಿಗೆ ಉಚಿತ ಪಡಿತರ ನೀಡುವ ಕುರಿತಂತೆ ಆರೋಗ್ಯ ಇಲಾಖೆಯಿಂದ ಭಾದಿತರ ಪಟ್ಟಿ ಪಡೆದು, ಅವರಿಗೆ ಅಂತ್ಯೋದಯ ಕಾರ್ಡ್ಗಳನ್ನು ವಿತರಿಸುವಂತೆ ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಎಂಡೋಸಲ್ಫಾನ್ ರಾಸಾಯನಿಕ ಸಿಂಪಡಣೆಯಾದ ಅವಧಿಯಲ್ಲಿ ಬಾಧಿತ ಪ್ರದೇಶದಲ್ಲಿ ಹುಟ್ಟಿ ಬೆಳೆದು ಅಥವಾ ವಾಸವಿದ್ದು ನಂತರದಲ್ಲಿ ಎಂಡೋಸಲ್ಫಾನ್ ಬಾಧಿತವಲ್ಲದ ಪ್ರದೇಶಗಳಿಗೆ ತೆರಳಿ ವಾಸವಿದ್ದು, ಅಂಗವಿಕಲತೆಗೆ ಒಳಗಾದ ಅಥವಾ ಎಂಡೋಸಲ್ಫಾನ್ ಸಂಬಂಧಿತ ಯಾವುದೇ ನ್ಯೂನತೆಗಳು ಕಂಡು ಬಂದ ಅಥವಾ ಅವರಿಗೆ ಜನಿಸಿದ ಮಕ್ಕಳಿಗೆ ನ್ಯೂನತೆಗಳು ಕಂಡುಬಂದಾಗ ಅವರನ್ನು ಎಂಡೋಸಲ್ಫಾನ್ ಬಾಧಿತರೆಂದು ಪರಿಗಣಿಸುವ ಕುರಿತಂತೆ ಎಸ್ಓಪಿ ಯನ್ನು ರಚಿಸಿ ಅದರನ್ವಯ ಸೌಲಭ್ಯಗಳನ್ನು ಒದಗಿಸುವಂತೆ ಸೂಚನೆ ನೀಡಿದರು.
ಅಲ್ಲದೇ ಎಂಡೋಸಲ್ಫಾನ್ ಪೀಡಿತರ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸುವ ನಿಟ್ಟಿನಲ್ಲಿ ಕೆಡಿಪಿ ಸಭೆಗಳಲ್ಲಿ ಇದನ್ನು ಚರ್ಚಾ ವಿಷಯವನ್ನಾಗಿ ಸೇರ್ಪಡೆ ಮಾಡುವಂತೆ ಸಚಿವ ಅಂಗಾರ ಸೂಚಿಸಿದರು.
ಸಭೆಯಲ್ಲಿ ರಾಜ್ಯ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್ ಕುಮಾರ್, ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ರಘುಪತಿ ಭಟ್, ಲಾಲಾಜಿ ಆರ್ ಮೆಂಡನ್, ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಎಸ್ಪಿ ಹಾಕೆ ಅಕ್ಷಯ್ ಮಚ್ಚಿಂದ್ರ, ಜಿಪಂ ಸಿಇಓ ಪ್ರಸನ್ನ ಎಚ್, ಕುಂದಾಪುರ ಡಿಎಫ್ಓ ಆಶೀಶ್ ರೆಡ್ಡಿ, ಜಿಲ್ಲಾ ಕಾನೂನು ಸೇವಾ ಪ್ರಾದಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ, ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್., ಮಾನವ ಹಕ್ಕು ಪ್ರತಿಷ್ಠಾನದ ಡಾ.ರವೀಂದ್ರನಾಥ್ ಶಾನುಭೋಗ್, ಅರೋಗ್ಯ ಇಲಾಖೆ ಮತ್ತು ಇತರ ಇಲಾಖೆಗಳ ಅನುಷ್ಠಾನಾಧಿಕಾರಿಗಳು, ಸಾಮಾಜಿಕ ಕಾರ್ಯಕರ್ತರು ಉಪಸ್ಥಿತರಿದ್ದರು.







