ಲೋಕೋಪಯೋಗಿ ಇಲಾಖೆ ಕಟ್ಟಡದಲ್ಲಿ ಕ್ಯಾಂಟೀನ್ ಆರಂಭ ವಿಚಾರ: ಅನುಮತಿ ಹಿಂಪಡೆದ ಬಗ್ಗೆ ಸರಕಾರದಿಂದ ಹೈಕೋರ್ಟ್ ಗೆ ಮಾಹಿತಿ
ಬೆಂಗಳೂರು, ಆ.4: ನಗರದ ಕೆ.ಆರ್.ವೃತ್ತದಲ್ಲಿರುವ ಲೋಕೋಪಯೋಗಿ ಇಲಾಖೆ ಕಟ್ಟಡದ ಆವರಣದಲ್ಲಿ ಹೋಟೆಲ್ ಆರಂಭಿಸಲು ನೀಡಲಾಗಿದ್ದ ಅನುಮತಿಯನ್ನು ಹಿಂಪಡೆಯಲಾಗಿದೆ ಎಂದು ಹೈಕೋರ್ಟ್ಗೆ ಸರಕಾರ ತಿಳಿಸಿದೆ.
ಈ ಸಂಬಂಧ ಸಾಮಾಜಿಕ ಹೋರಾಟಗಾರ ಸಾಯಿ ದತ್ತಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಹೈಕೋರ್ಟ್ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.
ಲೋಕೋಪಯೋಗಿ ಇಲಾಖೆ ಕಟ್ಟಡ ಆವರಣದಲ್ಲಿ ಸಿಂಪಲ್ ತಿಂಡಿ ಹೆಸರಿನಲ್ಲಿ ಹೋಟೆಲ್ಗೆ ಅನುಮತಿ ನೀಡಲಾಗಿತ್ತು. ಆದರೆ, ಆ ಆವರಣದಲ್ಲಿ ಇಲಾಖೆ ಕಚೇರಿಗಳು ಇರುವುದರಿಂದ ಜನ ದಟ್ಟಣೆ ಉಂಟಾಗಿ ವಾಹನಗಳ ನಿಲುಗಡೆಗೆ ತೊಂದರೆಯಾಗಲಿದೆ ಎಂಬ ಉದ್ದೇಶದಿಂದ ಹೋಟೆಲ್ ಆರಂಭಕ್ಕೆ ನೀಡಲಾಗಿದ್ದ ಅನುಮೋದನೆ ರದ್ದುಪಡಿಸಲಾಗಿದೆ ಎಂದು ಸರಕಾರದ ಪರ ವಕೀಲರು ಪೀಠಕ್ಕೆ ತಿಳಿಸಿದರು.
ಈ ಹೇಳಿಕೆ ದಾಖಲಿಸಿಕೊಂಡ ನ್ಯಾಯಪೀಠ, ಅರ್ಜಿ ಕುರಿತು ಹೆಚ್ಚಿನ ವಿಚಾರಣೆ ನಡೆಸಿ ನಿರ್ದೇಶನ ನೀಡುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟು, ಅರ್ಜಿ ಇತ್ಯರ್ಥಪಡಿಸಿತು.
Next Story