ಬಾಲ್ಯದಲ್ಲಿಯೇ ಮಕ್ಕಳಿಗೆ ಸಂಸ್ಕಾರ ಕಲಿಸಿ: ಡಾ.ವಿಜಯ ಬಲ್ಲಾಳ್
ಕರ್ನಾಟಕ ಮಕ್ಕಳ ಸಮ್ಮೇಳನ ಉದ್ಘಾಟನೆ

ಉಡುಪಿ, ಸೆ.5: ಮಕ್ಕಳಿಗೆ ಬಾಲ್ಯದಲ್ಲಿಯೇ ಸಂಸ್ಕಾರ ಕಲಿಸಿ, ಪರಂಪರೆಯ ಬಗ್ಗ ಜ್ಞಾನ ನೀಡಬೇಕು ಎಂದು ಅಂಬಲಪಾಡಿ ಶ್ರೀಮಹಾಕಾಳಿ ಮತ್ತು ಜನಾರ್ದನ ದೇವಾಲಯದ ಧರ್ಮದರ್ಶಿ ಡಾ.ನಿ.ಬಿ.ವಿಜಯ ಬಲ್ಲಾಳ್ ಹೇಳಿದ್ದಾರೆ.
ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ ವತಿಯಿಂದ ಅಂಬಲಪಾಡಿ ದೇವಳದ ಭವಾನಿ ಮಂಟಪದಲ್ಲಿ ರವಿವಾರ ಆಯೋಜಿಸಲಾದ ಕರ್ನಾಟಕ ಮಕ್ಕಳ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಮ್ಮೇಳನದ ಸರ್ವಾಧ್ಯಕ್ಷೆ ಬಹುಮುಖ ಪ್ರತಿಭೆ ಅದ್ವಿಕಾ ಶೆಟ್ಟಿ ಮಾತನಾಡಿ, ಮಕ್ಕಳಿಗೆ ಬಾಲ್ಯದಲ್ಲಿಯೆ ಅವರ ಪ್ರತಿಭೆಗೆ ತಕ್ಕ ಅವಕಾಶ ದೊರೆತರೆ ಸಾಧನೆಯ ಹಾದಿಯಲ್ಲಿ ಮುನ್ನಡೆಯುವುದು ಸಾಧ್ಯ ಎಂದು ತಿಳಿಸಿದರು.
ಪ್ರಧಾನ ಮಂತ್ರಿ ಬಾಲಪುರಸ್ಕಾರ ಪಡೆದ ರೆಮೊನಾ ಇವೆಟ್ ಪಿರೇರಾ, ವಿಶ್ವ ದಾಖಲೆಯ ಯೋಗ ಪಟು ತನುಶ್ರೀ ಪಿತ್ರೋಡಿ, ತುಳುನಾಡ ಗಾನ ಕೋಗಿಲೆ ತನುಶ್ರೀ ಮಂಗಳೂರು, ಯುವ ವಾಗ್ಮಿ ಭಕ್ತಿಶ್ರೀ ಆಚಾರ್ಯ ಬೆಳು ವಾಯಿ, ನ್ಯಾಶನಲ್ ಟ್ಯಾಲೆಂಟೆಡ್ ಡ್ಯಾನ್ಸರ್ ಗೌರವದ ಶೃಜನ್ಯ ಜೆ.ಕೆ ಬೆಳುವಾಯಿ, ಸ್ಯಾಕ್ಸೋ ಫೋನ್ ಸಾಧಕ ಪ್ರೀತಮ್ ದೇವಾಡಿಗ ಮುದ್ರಾಡಿ, ಬರಹಗಾರ್ತಿ ತೃಷಾ ಕೋಟ, ವೈಷ್ಣವಿ ಅಡಿಗ ಅತಿಥಿಗಳಾಗಿದ್ದರು.
ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ವಿಶ್ವನಾಥ ಶೆಣೈ ಮಾತನಾಡಿದರು. ಬಾಲಪ್ರತಿಭೆಗಳನ್ನು ಕಂಪ್ಯೂಟರ್ ತಜ್ಞ ಕೆ.ಪಿ.ರಾವ್ ಗೌರವಿಸಿದರು. ಶಿಕ್ಷಣ ಕ್ಷೇತ್ರದ ಸಾಧಕ ಎ.ವಿ.ಕುಳಮರ್ವ ಮತ್ತು ಲಲಿತಾಲಕ್ಷ್ಮೀ ಕುಳಮರ್ವ ಅವರನ್ನು ಮಕ್ಕಳೇ ಸನ್ಮಾನಿಸಿದರು. ಸಾಮಾಜಿಕ ಕಾರ್ಯಕರ್ತೆ ಸುಣೀತಾ ಆಂಡಾರು, ಸಮಿತಿಯ ಕಾರ್ಯದರ್ಶಿ ಸೌಮ್ಯಶ್ರೀ ಅಜೆಕಾರು, ಕನ್ನಡ ಸಾಹಿತ್ಯ ಪರಿಷತ್ತಿನ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ, ಪ್ರಶಾಂತ್ ಕಾಮತ್, ಶಿಕ್ಷಣ ತಜ್ಞ ಎ.ನರಸಿಂಹ, ವಾಸಂತಿ ಅಂಬಲಪಾಡಿ ಉಪಸ್ಥಿತರಿದ್ದರು.
ಸಂಘಟಕ ಡಾ.ಶೇಖರ ಅಜೆಕಾರು ಸ್ವಾಗತಿಸಿದರು. ಭಕ್ತಿಶ್ರೀ ಮತ್ತು ರೇಶ್ಮಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಮಿತಿಯ ಮಕ್ಕಳ ವಿಭಾಗದ ಸಂಚಾಲಕ ಸುನಿಧಿ ಎಸ.ಅಜೆಕಾರು ವಂದಿಸಿದರು.







