‘ಸರ್ವಧರ್ಮ ಸಮನ್ವಯ ಎಂಬುದು ಪ್ರಚಾರಕ್ಕೆ ಸೀಮಿತವಾಗಬಾರದು’
ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿ ಸ್ವೀಕರಿಸಿ ಪ್ರೊ.ವಿವೇಕ ರೈ

ಉಡುಪಿ, ಸೆ.6: ಸರ್ವಧರ್ಮ ಸಮನ್ವಯ ಎಂಬುದು ಕೇವಲ ಪ್ರಚಾರಕ್ಕೆ ಸೀಮಿತವಾಗಿರಬಾರದು. ಹಿಂಸೆ ತಾಂಡವಾಡುತ್ತಿರುವ ಇಂದಿನ ದಿನಗಳಲ್ಲಿ ಮಾನವ ಅಂತ:ಕರಣ ಮಿಡಿಯಬೇಕು ಎಂದು ನಿವೃತ್ತ ಕುಲಪತಿ, ಹಿರಿಯ ಸಾಹಿತಿ ಹಾಗೂ ನಾಡಿನ ಪ್ರಸಿದ್ಧ ಜಾನಪದ ವಿದ್ವಾಂಸ ಡಾ.ಬಿ.ಎ.ವಿವೇಕ ರೈ ಹೇಳಿದ್ದಾರೆ.
ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ), ಮಹಾತ್ಮ ಗಾಂಧಿ ಸ್ಮಾರಕ ಕಾಲೇಜುಗಳ ಸಹಯೋಗದೊಂದಿಗೆ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಮಂಗಳವಾರ ನಡೆದ ಪ್ರತಿಷ್ಠಿತ ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡುತಿದ್ದರು.
ಸಂಶೋಧನೆ ಎಂಬುದು ಮಾಹಿತಿ, ಡಾಟಾಗಳ ಸಂಗ್ರಹವಾಗಬಾರದು. ತಾತ್ವಿಕತೆಯನ್ನು ಸಂಶೋಧನೆಯ ಮೂಲಕ ಕಂಡುಕೊಳ್ಳಬೇಕಾಗುತ್ತದೆ. ತತ್ತ್ವ, ತತ್ವಜ್ಞಾನ ಹಾಗೂ ಫಿಲಾಸಫಿಯನ್ನು ಹೇಳಬೇಕಾಗುತ್ತದೆ. ಶೈಕ್ಷಣಿಕ ನೆಲೆಗಟ್ಟಿನಲ್ಲಿ ಸಂಶೋಧನೆಗಳು ಯಾವತ್ತೂ ಮಾನವೀಯವಾಗಿರಬೇಕು. ಸಂಶೋಧನೆಯಲ್ಲಿ ಡಾ.ಗೋವಿಂದ ಪೈ ಅವರು ಹಾಕಿಕೊಟ್ಟ ಮಾರ್ಗವನ್ನು ಮುಂದುವರಿಸುವ ಪ್ರಯತ್ನ ಮಾಡಬೇಕು ಎಂದು ಡಾ.ರೈ ನುಡಿದರು.
ಸಂಶೋಧಕನಿಗೆ ಎಲ್ಲಾ ವಿಷಯಗಳೂ ಆಸಕ್ತಿದಾಯಕವಾಗಿರಬೇಕು. ವಿಷಯಕ್ಕೆ ಸೀಮಿತ ಸಂಶೋಧನೆಗಿಂತ ಎಲ್ಲಾ ವಿಷಯಗಳ ಪ್ರಜ್ಞಾವಂತಿಕೆ ಬೇಕು. ಇಂದು ಜಾತಿ, ಮತ, ಧರ್ಮಗಳೇ ಜನರ ಐಡೆಂಟಿಟಿಯಾಗಿದೆ. ಪಿಎಚ್ಡಿ, ಪ್ರಶಸ್ತಿಗಿಂತ ಭಾಷೆ, ಇತಿಹಾಸ, ಸಾಹಿತ್ಯ ಸಹಿತ ಎಲ್ಲ ವಲಯಗಳಿಗೂ ಸಂಶೋಧನಾ ಕ್ಷೇತ್ರ ವಿಸ್ತರಣೆಯಾಗಬೇಕು ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ಬೌದ್ಧ ಮತ್ತು ಜೈನಧರ್ಮಗಳ ಬಗ್ಗೆ ಅರಿಯಲು ಪಾಲಿ ಹಾಗೂ ಪ್ರಾಕೃತ ಭಾಷೆಯನ್ನು ಕಲಿತಿದ್ದರು. ಆದರೆ ಇಂದು ಆಳವಾದ ಅಧ್ಯಯನವಿಲ್ಲದೇ ವಿಷಯದ ಮೇಲ್ಮೈಯನ್ನು ಮಾತ್ರ ತಿಳಿದು ಮಾತನಾಡುತ್ತೇವೆ. ಅದೇ ರೀತಿ ಕನ್ನಡದ ಮೊದಲ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಅವರು ಎಷ್ಟೊಂದು ಭಾಷೆಯನ್ನು ಅರಿತಿದ್ದರು. ಈ ವಿಷಯದ ಕುರಿತಂತೆ ಜರ್ಮನಿಯಲ್ಲಿದ್ದಾಗ ಪಾಲಿ ಹಾಗೂ ಪ್ರಾಕೃತ ಭಾಷೆ ಗೊತ್ತಿಲ್ಲ ಎನ್ನಲು ನಾಚಿಕೆಯಾಗುತ್ತಿತ್ತು ಎಂದವರು ಹೇಳಿದರು.
ಮುಂಬೈ ವಿವಿ ಕನ್ನಡ ವಿಭಾಗದ ನಿವೃತ್ತ ಮುಖ್ಯಸ್ಥ ಡಾ. ತಾಳ್ತಜೆ ವಸಂತ ಕುಮಾರ್ ಅಭಿನಂದನಾ ಭಾಷಣ ಮಾಡಿದರು. ಮುಖ್ಯ ಅತಿಥಿಯಾಗಿದ್ದ ಮಾಹೆ ವಿವಿ ಸಹಕುಲಪತಿ ಡಾ. ಎಂ. ವೆಂಕಟರಾಯ ಪ್ರಭು ಮಾತನಾಡಿದರು.
ಗೋವಿಂದ ಪೈ: ಗ್ರಥನ ಕೌಶಲ ವಿಷಯವಾಗಿ ಮೈಸೂರಿನ ಡಿ. ಬನುಮಯ್ಯ ಕಾಲೇಜಿನ ನಿವೃತ್ತ ಪ್ರಾಚಾರ್ಯ ಪ್ರೊ. ಎಸ್. ಶಿವಾಜಿ ಜೋಯಿಸ್ ವಿಶೇಷ ಉಪನ್ಯಾಸ ನೀಡಿದರು. ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ ಕಾರಂತ ಅಧ್ಯಕ್ಷತೆ ವಹಿಸಿದ್ದರು.
ಕೆಮ್ಮಣ್ಣು ಸಹೋದರಿಯರಾದ ಶರಣ್ಯ ಕೆ. ಎನ್. ಮತ್ತು ಸುಮೇಧ ಕೆ. ಎನ್. ರಾಷ್ಟ್ರಕವಿ ಗೋವಿಂದ ಪೈ ಅವರ ಕಾವ್ಯ ಗಾಯನ ಹಾಡಿದರು. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನ್ನಾಡಿದರು. ಕಾಲೇಜಿನ ಕನ್ನಡ ಪ್ರಾದ್ಯಾಪಕ ರಾಘವೇಂದ್ರ ತುಂಗ ಕಾರ್ಯಕ್ರಮ ನಿರೂಪಿಸಿದರು.
ಪ್ರಶಸ್ತಿಯ ೧ಲಕ್ಷ ರೂ. ಕಲಿತ ಪ್ರಾಥಮಿಕ ಶಾಲೆಗೆ ಕೊಡುಗೆ
ಟಿ.ವಿಮಲಾ ವಿ. ಪೈ ಪ್ರಾಯೋಜಿತ ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿ ಯೊಂದಿಗೆ ಸ್ವೀಕರಿಸಿದ ಒಂದು ಲಕ್ಷ ರೂ.ಬಹುಮಾನ ಮೊತ್ತವನ್ನು ತಾನು ಕಲಿತ ಪ್ರಾಥಮಿಕ ಶಾಲೆಯ ಮಕ್ಕಳ ಕಲಿಕೆಗೆ ಸೂಕ್ತ ಸೌಲಭ್ಯ ಕಲ್ಪಿಸಲು ನೀಡುತ್ತಿರುವುದಾಗಿ ಡಾ.ಬಿ.ಎ.ವಿವೇಕ ರೈ ಘೋಷಿಸಿದರು.
ಅಂದು ಪುತ್ತೂರು ತಾಲೂಕಿನಲ್ಲಿದ್ದು ಇಂದು ಬಂಟ್ವಾಳ ತಾಲೂಕಿಗೆ ಸೇರಿರುವ ಪುಣಚಾ ಗ್ರಾಮದ ಪರಿಯಾಲ್ತಡ್ಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೧೯೫೨-೬೦ರ ಅವಧಿಯಲ್ಲಿ ತಾನು ಒಂದರಿಂದ ಎಂಟನೇ ತರಗತಿವರೆಗೆ ಕಲಿತಿದ್ದೆ. ಈಗ ೧೧೭ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಮಾಧ್ಯಮದ ಈ ಶಾಲೆಯು ಕೇವಲ ಒಬ್ಬ ಶಿಕ್ಷಕರು, ಇಬ್ಬರು ಗೌರವ ಶಿಕ್ಷಕರನ್ನು ಹೊಂದಿದ್ದು ಕಷ್ಟದಲ್ಲಿದೆ. ವಿದ್ಯಾರ್ಥಿಗಳ ಕೊರತೆಯಿಂದ ಶಾಲೆಯನ್ನು ಮುಚ್ಚುವ ಸಾಧ್ಯತೆ ಇದೆ. ಹೀಗಾಗಿ ಕಟ್ಟಡದ ಬದಲು ವಿದ್ಯಾರ್ಥಿಗಳ ಸೌಲಭ್ಯಕ್ಕಾಗಿ ಒಂದು ಲಕ್ಷ ರೂ. ಬಳಸಲು ನೀಡುವುದಾಗಿ ಡಾ.ರೈ ವಿವರಿಸಿದರು.
76 ವರ್ಷ ವಯಸ್ಸಿನ ನನಗೆ ಈಗ ದುಡ್ಡಿನ ಅವಶ್ಯಕತೆ ಇಲ್ಲ. ಈ ವಯಸ್ಸಲ್ಲಿ ಹಣ ತಿನ್ನಲಾಗದು. ಹಣವನ್ನು ಕೂಡಿಡುವುದಕ್ಕಿಂತ ಕನ್ನಡ ಶಾಲೆಯೊಂದನ್ನು ಉಳಿಸಲು ಅದು ಬಳಕೆಯಾಗಲಿ ಎಂದವರು ಹೇಳಿದರು.








