ತೆಕ್ಕಟ್ಟೆ ಮಾಲಾಡಿಯಲ್ಲಿ ಚಿರತೆ ಪ್ರತ್ಯಕ್ಷ; ಬೋನಿಟ್ಟ ಅರಣ್ಯ ಇಲಾಖೆ

ಕುಂದಾಪುರ, ಸೆ.8: ತಾಲೂಕಿನ ತೆಕ್ಕಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಲಾಡಿ ಎಂಬಲ್ಲಿನ ಶ್ರೀ ನಂದಿಕೇಶ್ವರ ದೇವಸ್ಥಾನ ಹಾಗೂ ಅಂಗನವಾಡಿ, ಶಾಲೆ ಹಾಗೂ ಜನವಸತಿಯಿರುವ ಪ್ರದೇಶದ ಸನಿಹದಲ್ಲೇ ಇರುವ ತೋಪಿನಲ್ಲಿ ಮತ್ತೆ ಚಿರತೆ ಕಾಟ ಶುರುವಾಗಿದ್ದು, ಇಲ್ಲಿನ ಮನೆ ವಠಾರವೊಂದಕ್ಕೆ ಬುಧವಾರ ರಾತ್ರಿ ನುಗ್ಗಿದ ಚಿರತೆ, ಸಾಕು ನಾಯಿಯನ್ನು ಹೊತ್ತೊಯ್ದಿದೆ. ಇದರಿಂದ ಈ ಭಾಗದ ಜನರಲ್ಲಿ ಆತಂಕ ಮೂಡಿದೆ.
ತೆಕ್ಕಟ್ಟೆ ಸಮೀಪದ ಮಾಲಾಡಿಯ ತೋಪಿನಿಂದ ಮುಂದೆ ಸಾಗಿದಾಗ ಸಿಗುವ ತೆಕ್ಕಟ್ಟೆ ಗ್ರಾಪಂ ಅಧ್ಯಕ್ಷೆ ಮಮತಾ ಸುರೇಶ್ ದೇವಾಡಿಗರ ನಿವಾಸದ ಎದುರು ರಾತ್ರಿ 7.30ರ ಸುಮಾರಿಗೆ ಹಠಾತ್ತನೆ ಪ್ರತ್ಯಕ್ಷವಾದ ಚಿರತೆ ಅವರ ಮನೆ ಸಾಕು ನಾಯಿಯನ್ನು ಹೊತ್ತೊಯ್ದಿದೆ.
ಘಟನೆ ವಿವರ: ಸಂಜೆ 7.30ರ ಸುಮಾರಿಗೆ ಸುರೇಶ್ ದೇವಾಡಿಗ, ಪತ್ನಿ ಹಾಗೂ ಮಕ್ಕಳು ಮನೆಯಲ್ಲಿದ್ದು, ಮಕ್ಕಳು ಮನೆ ಹೊರಗಡೆ ಓದುವಿಕೆಯಲ್ಲಿ ತೊಡಗಿಸಿಕೊಂಡಿದ್ದರು. ರಾತ್ರಿ ಮನೆ ನಾಯಿ ಏಕಾಏಕಿ ಬೊಗಳಿದಾಗ ಮನೆ ಮಂದಿ ನೋಡನೋಡುತಿದ್ದಂತೆ ಚಿರತೆ ನಾಯಿ ಹೊತ್ತು ಪಲಾಯನಗೈದಿದೆ. ಕೂಡಲೇ ಸತೀಶ್ ದೇವಾಡಿಗ ಅರಣ್ಯ ಇಲಾಖೆ ಗಮನಕ್ಕೆ ಇದನ್ನು ತಂದಿದ್ದಾರೆ.
ಬೋನು ಇಟ್ಟ ಅರಣ್ಯ ಇಲಾಖೆ: ಈ ಭಾಗದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ನಿರಂತರವಾಗಿ ಚಿರತೆ ಕಾಟವಿದ್ದು ಸಾರ್ವಜನಿಕರು ಆತಂಕಿತ ರಾಗಿದ್ದಾರೆ. ಅರಣ್ಯ ಇಲಾಖೆ ಗುರುವಾರ ಈ ಜಾಗದಲ್ಲಿ ಬೋನ್ ಇರಿಸಿದ್ದು, ಚಿರತೆ ಹಿಡಿಯುವ ಕಾರ್ಯಾಚರಣೆ ನಡೆಸಲು ಮುಂದಾಗಿದೆ. ಕುಂದಾಪುರ ವಲಯ ಅರಣ್ಯಾಧಿಕಾರಿ ಕಿರಣ್ ಬಾಬು, ಉಪವಲಯ ಅರಣ್ಯಾಧಿಕಾರಿ ಉದಯ್, ತೆಕ್ಕಟ್ಟೆ ಗ್ರಾ.ಪಂ ಉಪಾಧ್ಯಕ್ಷ ಸಂಜೀವ ದೇವಾಡಿಗ, ಪಿಡಿಓ ಸುನೀಲ್ ಭೇಟಿ ನೀಡಿದರು.
4 ವರ್ಷಗಳ ಅಂತರದಲ್ಲಿ 5 ಚಿರತೆ ಸೆರೆ: ನಾಯಿ, ಜಾನುವಾರು ಸೇರಿದಂತೆ ಸಾಕುಪ್ರಾಣಿಗಳ ಮೇಲೆ ದಾಳಿ ನಡೆಸುವುದು ಮಾತ್ರವಲ್ಲದೇ ಹಾಡುಹಗಲೇ ಪ್ರತಕ್ಷವಾಗಿ ಚಿರತೆ ನಿರಂತರವಾಗಿ ಉಪಟಳ ನೀಡುತ್ತಿದ್ದು ಮಾಲಾಡಿಯ ಎಕ್ರೆಗಟ್ಟಲೆ ಇರುವ ಈ ತೋಟದಲ್ಲಿ 2018 ಆಗಸ್ಟ್ ತಿಂಗಳಲ್ಲಿ ಚಿರತೆಯೊಂದು ಬೋನಿಗೆ ಬಿದ್ದಿತ್ತು. ಬಳಿಕ ಚಿರತೆ ಆಗ್ಗಾಗೆ ಕಾಣಿಸಿಕೊಳ್ಳುತ್ತಿದ್ದು ಅ.6, 2019, ಡಿ.12, 2019, ಡಿ.24, 2019 ರಲ್ಲಿ ಹಾಗೂ 2022 ರ ಎಪ್ರಿಲ್ ತಿಂಗಳಿನಲ್ಲಿ ಆಪರೇಶನ್ ಚೀತಾ’ ಕಾರ್ಯಾಚರಣೆ ನಡೆಸಿದ ಇಲಾಖೆ ಚಿರತೆಯನ್ನು ಬೋನಿಗೆ ಬೀಳಿಸಿತ್ತು.
ಚಿರತೆ ಉಪಟಳವಿರುವ ಮಾಲಾಡಿ ತೋಟದ ಬಳಿಯೇ ಸರಕಾರಿ ಶಾಲೆ, ಅಂಗನವಾಡಿ ಹಾಗೂ ದೇವಸ್ಥಾನ ಸೇರಿದಂತೆ ವಸತಿ ಪ್ರದೇಶವಿದೆ. ಆಸುಪಾಸಿನಲ್ಲಿ 50ಕ್ಕೂ ಅಧಿಕ ಮನೆಗಳಿದೆ. ನಿರಂತರವಾಗಿ ಚಿರತೆ ಕಾಟದಿಂದ ಇಲ್ಲಿನ ಜನರು ಇದೀಗ ಮತ್ತೆ ಭಯಭೀತರಾಗಿದ್ದಾರೆ.







