ಬಂದರು ಪ್ರದೇಶದಲ್ಲಿ ರಾಜಕಾಲುವೆ ಒತ್ತುವರಿ; ಅಕ್ಕಿ ಗೋದಾಮಿಗೆ ನುಗ್ಗಿದ ನೀರು, ಲಕ್ಷಾಂತರ ರೂ. ನಷ್ಟ
► ಒತ್ತುವರಿ ತೆರವಿಗೆ ಮನವಿ, ಪ್ರತಿಭಟನೆಯ ಎಚ್ಚರಿಕೆ

ಮಂಗಳೂರು, ಸೆ.8: ನಗರದ ಹಳೆ ಬಂದರು ಸಗಟು ಮಾರುಕಟ್ಟೆಯ ಪೋರ್ಟ್ ರಸ್ತೆಯ ಮಧ್ಯೆ ಹಾದು ಹೋಗಿರುವ ರಾಜ ಕಾಲುವೆಯನ್ನು ಒತ್ತುವರಿ ಮಾಡಿ ಬಂದರು ಇಲಾಖೆಯು ಕಟ್ಟಡ ನಿರ್ಮಾಣ ಮಾಡಿರುವುದರಿಂದ ಮಳೆ ನೀರು ಅಕ್ಕಿಯ ಗೋದಾಮಿಗೆ ನುಗ್ಗಿದ ಲಕ್ಷಾಂತರ ರೂ. ನಷ್ಟವಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಈ ರಾಜಕಾಲುವೆಯನ್ನು ತಿರುಗಿಸಿರುವುದರಿಂದ ತ್ಯಾಜ್ಯ ನೀರು ಹರಿದುಹೋಗಲಾಗದೆ ಗೋದಾಮುಗಳಿಗೆ ನುಗ್ಗಿದ ಪರಿಣಾಮ ಅಕ್ಕಿ ಧಾನ್ಯ, ಮೆಣಸು ಇತ್ಯಾದಿ ಸರಕುಗಳಿಗೆ ಹಾನಿಯಾಗಿದೆ. ಅಲ್ಲದೆ ಕೊಳಚೆ ನೀರು ರಸ್ತೆಯಲ್ಲೇ ನಿಂತು ಪರಿಸರದಲ್ಲಿ ದುರ್ನಾತ ಬೀರುತ್ತಿದೆ. ಇಲ್ಲಿ ಲೋಡಿಂಗ್ ಮತ್ತು ಅನ್ಲೋಡಿಂಗ್ ಕೆಲಸ ಮಾಡುವ ಹಮಾಲಿ ಕಾರ್ಮಿಕರು ಡೆಂಗಿ, ಮಲೇರಿಯಾ, ಚರ್ಮ ರೋಗಕ್ಕೆ ತುತ್ತಾಗುತ್ತಿದ್ದಾರೆ. ಈ ಬಗ್ಗೆ ಬಂದರು ಇಲಾಖೆಯ ಗಮನಕ್ಕೆ ಹಲವು ಬಾರಿ ತರಲಾಗಿದ್ದರೂ ಯಾವುದೇ ಕ್ರಮಗಳು ಕೈಗೊಂಡಿಲ್ಲ. ಶಾಸಕ ವೇದವ್ಯಾಸ ಕಾಮತ್ ಸ್ಥಳ ಪರಿಶೀಲನೆ ಮಾಡಿ ಬಂದರು ಇಲಾಖೆಯ ಅಧಿಕಾರಿಗಳಿಗೆ ರಾಜ ಕಾಲುವೆಯನ್ನು ತೆರವುಗೊಳಿಸಲು ಸೂಚನೆ ನೀಡಿದರೂ ನಿರ್ಲಕ್ಷಿಸಲಾಗಿದೆ ಎಂದು ಹಳೆಬಂದರು ಸಗಟು ಮಾರುಕಟ್ಟೆಯ ವರ್ತಕರು, ಕಾರ್ಮಿಕರು ಆರೋಪಿಸಿದ್ದಾರೆ.
ಸಗಟು ಮಾರುಕಟ್ಟೆಯ ವರ್ತಕರು, ಕಾರ್ಮಿಕರ ಪ್ರತಿನಿಧಿಗಳನ್ನೊಳಗೊಂಡ ನಿಯೋಗವು ಬಂದರು ಇಲಾಖೆಯ ಮಂಗಳೂರು ವಿಭಾಗದ ಪ್ರಬಂಧಕರನ್ನು ಗುರುವಾರ ಭೇಟಿ ಮಾಡಿ ಒತ್ತುವರಿ ತೆರವುಗೊಳಿಸುವಂತೆ ಮನವಿ ಸಲ್ಲಿಸಿತು. ಸಮಸ್ಯೆಗೆ ಪರಿಹಾರ ಸಿಗದಿದ್ದರೆ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಲಾಯಿತು.
ಶಂಸುದ್ದಿನ್ ಬಂದರ್, ವರ್ತಕರ ಪ್ರತಿನಿಧಿಗಳಾದ ಪ್ರಕಾಶ್ ಕಾಮತ್, ಆದಿಲ್ ಎಂಸಿಎಂ, ರಝಾಕ್ ಉಚ್ಚಿಲ್, ಬಂದರು ಶ್ರಮಿಕರ ಸಂಘದ ಅಧ್ಯಕ್ಷ ವಿಲ್ಲಿ ವಿಲ್ಸನ್, ಪ್ರಧಾನ ಕಾರ್ಯದರ್ಶಿ ಬಿ.ಕೆ ಇಮ್ತಿಯಾಝ್, ಸಿದ್ದೀಕ್ ಬೆಂಗರೆ, ಲೋಕೇಶ್ ಶೆಟ್ಟಿ ನಿಯೋಗದಲ್ಲಿದ್ದರು.