ಸೇನಾಪಡೆ ಹಿಂದೆಗೆತ ಶಾಂತಿಸ್ಥಾಪನೆಗೆ ಅನುಕೂಲ: ಚೀನಾ
ಬೀಜಿಂಗ್, ಸೆ.9: ಪೂರ್ವ ಲಡಾಕ್ನ ಗೋಗ್ರಾ ಹಾಟ್ಸ್ಪ್ರಿಂಗ್ಸ್ ಪ್ರದೇಶದಿಂದ ಮುಂಚೂಣಿ ಪಡೆಯನ್ನು ಹಿಂದಕ್ಕೆ ಪಡೆಯುವ ಪ್ರಕ್ರಿಯೆ ಗುರುವಾರ ಆರಂಭಗೊಂಡಿರುವುದನ್ನು ಚೀನಾ ಶುಕ್ರವಾರ ದೃಢಪಡಿಸಿದ್ದು, ಸೇನಾಪಡೆ ಹಿಂದೆಗೆತವು ಚೀನಾ-ಭಾರತ ಗಡಿಯುದ್ದಕ್ಕೂ ಶಾಂತಿ-ನೆಮ್ಮದಿ ನೆಲೆಸಲು ಅನುಕೂಲವಾಗಲಿದೆ ಎಂದಿದೆ.
ಜುಲೈಯಲ್ಲಿ ಚುಷುಲ್-ಮೊಲ್ಡೊ ಗಡಿಯ ಬಳಿ ನಡೆದ ಭಾರತ-ಚೀನಾ ಸೇನೆಯ ಕಮಾಂಡರ್ಗಳ ಮಟ್ಟದ 16ನೇ ಸುತ್ತಿನ ಮಾತುಕತೆಯ ಬಳಿಕ ಪೂರ್ವ ಗಡಿಭಾಗದಿಂದ ಉಭಯ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಲು ನಿರ್ಧರಿಸಲಾಗಿದೆ. ಸಭೆಯಲ್ಲಿ ಮೂಡಿದ ಸಹಮತದಂತೆ, ಜಿಯಾನನ್ ದಬಾನ್ ಪ್ರದೇಶದಿಂದ ಭಾರತ-ಚೀನಾ ಪಡೆಯನ್ನು ಸಂಘಟಿತ ಮತ್ತು ಯೋಜಿತ ರೀತಿಯಲ್ಲಿ ಹಿಂದಕ್ಕೆ ಕರೆಸಿಕೊಳ್ಳುವ ಕಾರ್ಯ ಸೆಪ್ಟಂಬರ್ 8ರಂದು ಆರಂಭವಾಗಿದೆ ಎಂದು ಚೀನಾದ ರಕ್ಷಣಾ ಇಲಾಖೆಯ ಹೇಳಿಕೆ ತಿಳಿಸಿದೆ.
ಭಾರತವು ಗೋಗ್ರಾ-ಹಾಟ್ಸ್ಪ್ರಿಂಗ್ ಎಂದು ಹೆಸರಿಸಿರುವ ಪ್ರದೇಶವನ್ನು ಚೀನಾವು ಜಿಯಾನನ್ ದಬಾನ್ ಪ್ರದೇಶ ಎಂದು ಕರೆಯುತ್ತಿದೆ. ಜುಲೈಯಲ್ಲಿ ನಡೆದ 16ನೇ ಸುತ್ತಿನ ಮಾತುಕತೆಯ ಬಳಿಕ ಬಿಡುಗಡೆಗೊಳಿಸಿರುವ ಜಂಟಿ ಹೇಳಿಕೆಯಲ್ಲಿ `ಉಳಿದ ಸಮಸ್ಯೆಗಳ ಪರಿಹಾರವು ಪಶ್ಚಿಮ ವಲಯದಲ್ಲಿನ ವಾಸ್ತವಿಕ ನಿಯಂತ್ರಣ ರೇಖೆಯುದ್ದಕ್ಕೂ ಶಾಂತಿ ಮತ್ತು ನೆಮ್ಮದಿ ಮರುಸ್ಥಾಪನೆಗೆ ನೆರವಾಗಲಿದೆ ಮತ್ತು ದ್ವಿಪಕ್ಷೀಯ ಸಂಬಂಧದ ಪ್ರಗತಿ ಸಾಧ್ಯವಾಗಲಿದೆ. ಪಶ್ಚಿಮ ವಲಯದಲ್ಲಿ ಭದ್ರತೆ ಮತ್ತು ಸ್ಥಿರತೆಯನ್ನು ಉಳಿಸಿಕೊಳ್ಳಲು ಉಭಯ ದೇಶಗಳು ಒಪ್ಪಿಕೊಂಡಿವೆ' ಎಂದು ಉಲ್ಲೇಖಿಸಲಾಗಿದೆ.
ಭಾರತ-ಚೀನಾ ನಡುವೆ ಗಡಿವಲಯದಲ್ಲಿ 2020ರ ಮಾರ್ಚ್ನಿಂದಲೂ ಮುಖಾಮುಖಿ ಸಂಘರ್ಷ ನಡೆಯುತ್ತಿದೆ. 2020ರ ಜೂನ್ನಲ್ಲಿ ಗಲ್ವಾನ್ ಕಣಿವೆಯಲ್ಲಿ ಉಭಯ ದೇಶಗಳ ಸೈನಿಕರ ಮಧ್ಯೆ ಹಿಂಸಾತ್ಮಕ ಘರ್ಷಣೆ ನಡೆದಿತ್ತು. ಚೀನಾದ ಸೈನಿಕರು ಹಾಟ್ಸ್ಪ್ರಿಂಗ್, ಗಲ್ವಾನ್ ಕಣಿವೆ, ಪ್ಯಾಂಗ್ಯಾಂಗ್ ಸರೋವರ ಪ್ರದೇಶದಿಂದ ವಾಪಸಾಗಿದ್ದಾರೆ ಎಂದು ಕಳೆದ ಮಾರ್ಚ್ನಲ್ಲಿ ಚೀನಾದ ರಕ್ಷಣಾ ಇಲಾಖೆ ಹೇಳಿಕೆ ನೀಡಿತ್ತು. ಆದರೆ ಚೀನಾದ ಸೇನೆ ಈ ಪ್ರದೇಶದಿಂದ ಸಂಪೂರ್ಣವಾಗಿ ಹಿಂದಕ್ಕೆ ಸರಿದಿಲ್ಲ. ಇನ್ನೂ ಕೆಲವು ಯೋಧರು ಅಲ್ಲಿ ಉಳಿದಿದ್ದಾರೆ ಎಂದು ಭಾರತದ ರಕ್ಷಣಾ ಇಲಾಖೆ ಪ್ರತಿಕ್ರಿಯಿಸಿತ್ತು.
ಗಡಿವಿವಾದವು ಸಂಪೂರ್ಣ ದ್ವಿಪಕ್ಷೀಯ ಸಂಬಂಧವನ್ನು ವ್ಯಾಖ್ಯಾನಿಸಬಾರದು. ಭಾರತ ಸರಕಾರ ತಿರಸ್ಕರಿಸಿರುವ ವ್ಯಾಪಾರ, ದ್ವಿಪಕ್ಷೀಯ ನೀತಿಯಂತಹ ವಿಷಯಗಳಲ್ಲಿ ಉಭಯ ದೇಶಗಳು ಮುನ್ನಡೆ ಸಾಧಿಸಬೇಕು ಎಂದು ಚೀನಾ ಪ್ರತಿಪಾದಿಸಿದೆ.