ಭ್ರಷ್ಟಚಾರ ಕ್ಯಾನ್ಸರ್ಗಿಂತ ದೊಡ್ಡ ಪಿಡುಗು: ನ್ಯಾ.ಬಿ.ವೀರಪ್ಪ

ಉಡುಪಿ, ಸೆ.10: ನಮ್ಮ ದೇಶದಲ್ಲಿ ಇಂದು ಭ್ರಷ್ಟಚಾರವು ಕ್ಯಾನ್ಸರ್ಗಿಂತ ದೊಡ್ಡ ಪಿಡುಗು ಆಗಿದ್ದು, ನಿಯಂತ್ರಿ ಸಲು ಸಾಧ್ಯ ಇಲ್ಲದಷ್ಟು ಪ್ರಮಾಣದಲ್ಲಿ ಬೆಳೆದು ನಿಂತಿದೆ. ಸಾರ್ವಜನಿಕ ಸೇವೆಯ ಉದ್ದೇಶದಿಂದ ಉತ್ತಮ ಅಂಕ ಗಳಿಸಿ ಸರಕಾರಿ ಉನ್ನತ ಹುದ್ದೆಗೆ ಬರುವ ಕೆಲವು ಅಧಿಕಾರಿಗಳು, ಸಿಬಂದಿ ಭ್ರಷ್ಟಚಾರದ ಮೂಲಕ ನೈತಿಕತೆ, ಮಾನವೀಯತೆ ಕಳೆದುಕೊಂಡಿದ್ದಾರೆ ಎಂದು ಹೈಕೋರ್ಟ್ ನ್ಯಾಯ ಮೂರ್ತಿ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ಅಧ್ಯಕ್ಷ ಬಿ.ವೀರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಡಳಿತ, ವೈಕುಂಠ ಬಾಳಿಗ ಕಾನೂನು ಮಹಾ ವಿದ್ಯಾಲಯ, ಜಿಲ್ಲಾ ವಕೀಲರ ಸಂಘ, ಉಪ್ಪೂರು ಗ್ರಾಮ ಪಂಚಾಯತ್ಗಳ ಆಶ್ರಯದಲ್ಲಿ ಉಪ್ಪೂರಿನ ಜಾತಬೆಟ್ಟು ಚಿತ್ತಾರಿ ಮಹಾಬಲೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾದ ಕಾನೂನು ಅರಿವು ಮತ್ತು ನೆರವು ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಕಾನೂನು ಕಾಲೇಜುಗಳು ಅಂಕವನ್ನು ನೋಡಿ ಸೀಟು ಕೊಡಬಾರದು. ಹೆಚ್ಚು ಅಂಕ ಪಡೆದವರು ಅರ್ಹರು, ಕಡಿಮೆ ಅಂಕ ಪಡೆದವರು ಅನರ್ಹರು ಎಂಬ ದೃಷ್ಟಿಯಲ್ಲಿ ಯಾವುದೇ ವಿದ್ಯಾರ್ಥಿಯನ್ನು ಕಾಣಬಾರದು. ಅಂಕಗಳಿಂದ ವ್ಯಕ್ತಿತ್ವ ರೂಪುಗೊಳ್ಳುವುದಿಲ್ಲ. ಸಂಸ್ಕಾರ ಮತ್ತು ನಿಸ್ವಾರ್ಥ ಗುಣದಿಂದ ಸಮಾಜದ ಸೇವೆ ಮಾಡಬೇಕು ಎಂದು ಅವರು ತಿಳಿಸಿದರು.
ಜನರಲ್ಲಿ ಕಾನೂನಿನ ಅರಿವು ಮೂಡಿಸಿ ಜನರನ್ನು ಜಾಗೃತರನ್ನಾಗಿಸುವ ಉದ್ದೇಶದಿಂದ ಜನರ ಬಳಿಗೆ ಇಂದು ನ್ಯಾಯಂಗ ವ್ಯವಸ್ಥೆ ಬರುತ್ತಿದೆ. ಕಾನೂನು ಅರಿವಿನ ಮೂಲಕ ಭ್ರಷ್ಟಚಾರ, ಅಪರಾಧ ಪ್ರಮಾಣವನ್ನು ಕಡಿಮೆ ಮಾಡಬಹುದು. ತಪ್ಪು ಮಾಡಿದವರನ್ನು ಖಂಡಿಸುವ ಧೈರ್ಯ ಬರಬೇಕು. ಕಾನೂನು ಸೇವ ಪ್ರಾಧಿಕಾರ ಜನರಿಗೆ ನ್ಯಾಯ ಕೊಡಲು ಸದಾ ಸಿದ್ಧವಿದೆ ಎಂದು ಅವರು ಹೇಳಿದರು.
ಗ್ರಾಮಸ್ಥರಿಂದ ಅಹವಾಲು ಸ್ವೀಕಾರ
ಜನರ ಕಂದಾಯ, ಪಿಂಚ, ಮೂಲಭೂತ ಸೌಕರ್ಯಗಳಿಗೆ ಸಂಬಂಧಿಸಿದ ಅಹವಾಲುಗಳನ್ನು ಗ್ರಾಮಸ್ಥರು ನ್ಯಾಯಮೂರ್ತಿಗೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಈ ಅರ್ಜಿಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಮೂಲಕ ಪರಿಶೀಲನೆಗೆ ಸೂಚಿಸಲಾಯಿತು. ಸ್ಥಳದಲ್ಲಿ ಆರೋಗ್ಯ ಇಲಾಖೆ ಮಳಿಗೆಯಲ್ಲಿ ಸಾರ್ವಜನಿಕರಿಗೆ ಆರೋಗ್ಯ ಪರೀಕ್ಷೆ ನಡೆಸಲಾಯಿತು. ಆಧಾರ್ ತಿದ್ದುಪಡಿಗೆ ವ್ಯವಸ್ಥೆ ಮಾಡಲಾಗಿತ್ತು.
ಕಾರ್ಮಿಕ ಇಲಾಖೆ ವತಿಯಿಂದ ಈ ಶ್ರಮ್ ಕಾರ್ಡ್ ಮತ್ತು ಆಯುಷ್ಮಾನ್, ಆರೋಗ್ಯ ಭಾಗ್ಯ ಕಾರ್ಡ್ಗಳಿಗೆ ನೋಂದವಣೆ ಮಾಡಿಸಲಾಯಿತು. ಕೃಷಿ, ತೋಟಗಾರಿಕೆ, ಸಮಾಜ ಕಲ್ಯಾಣ ಇಲಾಖೆ ಮಳಿಗೆಗಳಲ್ಲಿ ಜನರಿಗೆ ವಿವಿಧ ಯೋಜನೆಗಳ ಬಗ್ಗೆ ಮತ್ತು ಕಾನೂನು ಸೇವಾ ಪ್ರಾಧಿಕಾರದ ಮೂಲಕ ಉಚಿತ ಕಾನೂನು ಸೇವೆ ಪಡೆಯುವ ಬಗ್ಗೆ ಮಾಹಿತಿ ನೀಡಲಾಯಿತು.
ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಆರ್.ಗುರುರಾಜನ್, ಜಿಲ್ಲಾಧಿಕಾರಿ ಕೂರ್ಮಾ ಎಂ.ರಾವ್, ಗ್ರಾಪಂ ಅಧ್ಯಕ್ಷ ಮಹೇಶ್ ಕೋಟ್ಯಾನ್, ಪ್ರಭಾರ ತಹಶೀಲ್ದಾರ್ ಪುರಂದರ್ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಾಂತವೀರ ಶಿವಪ್ಪ ವಹಿಸಿದ್ದರು.
ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಎಚ್.ಶಶಿಧರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೈಕುಂಠ ಬಾಳಿಗಾ ಕಾನೂನು ಕಾಲೇಜಿನ ಪ್ರಾಂಶುಪಾಲೆ ಪ್ರೊ.ನಿರ್ಮಲಾ ಕುಮಾರಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್. ವಂದಿಸಿದರು. ಕೌಟುಂಬಿಕ ನ್ಯಾಯಲಯದ ಶಿರಸ್ಥೆದಾರ್ ನಟರಾಜ್ ಹಾಗೂ ಪ್ರಶಾಂತ್ ಶೆಟ್ಟಿ ಹಾವಂಜೆ ಕಾರ್ಯಕ್ರಮ ನಿರೂಪಿಸಿದರು.
ಅನಾಥರಿಗೆ ಆಶ್ರಯ ಕೇಂದ್ರ ಸ್ಥಾಪಿಸಲು ಗಡುವು!
ಮುಂದುವರಿದ ಜಿಲ್ಲೆ ಎನಿಸಿರುವ ಉಡುಪಿ ಜಿಲ್ಲೆಯಲ್ಲಿ ಸ್ವಾತಂತ್ರ್ಯ ದೊರೆತು ಇಷ್ಟು ವರ್ಷಗಳಾದರೂ ಇನ್ನೂ ಅನಾಥರಿಗೆ ಒಂದು ಆಶ್ರಯ ಕೇಂದ್ರವನ್ನು ಸ್ಥಾಪಿಸದಿರುವುದು ದಿಗ್ಬ್ರಮೆ ಮೂಡಿಸಿದೆ ಎಂದು ನ್ಯಾಯಮೂರ್ತಿ ಬಿ.ವೀರಪ್ಪ ಕಳವಳ ವ್ಯಕ್ತಪಡಿಸಿದರು.
ಉಡುಪಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದಾಗ ಈ ವಿಚಾರ ಕೇಳಿ ತಿಳಿದುಕೊಂಡೆ. ಜಿಲ್ಲಾಡಳಿತ ಇಷ್ಟು ದಿನ ಏನು ಮಾಡುತ್ತಿದೆ? ಯಾಕೆ ಒಂದು ಅನಾಥಾಲಯ ನಿರ್ಮಿಸಲು ಸಾಧ್ಯವಾಗಿಲ್ಲ? ನಿಮಗೆಲ್ಲರಿಗೂ ನಿದ್ರೆ ಹೇಗೆ ಬರುತ್ತದೆ ಎಂದು ಅವರು ಪ್ರಶ್ನಿಸಿದರು. ವಾರದ ಒಳಗೆ ಆಶ್ರಯ ತಾಣ ನಿರ್ಮಿಸುವ ವ್ಯವಸ್ಥೆ ಮಾಡದಿದ್ದರೆ ವಕೀಲರ ಸಂಘದ ಮೂಲಕ ಧರಣಿ ನಡೆಸಿ, ನಾನು ಕೂಡ ಭಾಗ ವಹಿಸುತ್ತೇನೆ. ಈ ಬಗ್ಗೆ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಖುದ್ದು ನಾನೆ ಸಲ್ಲಿಸುತ್ತೇನೆ ಎಂದು ಅವರು ಎಚ್ಚರಿಕೆ ನೀಡಿದರು.







