ಪುತ್ತೂರು: ಬ್ರಹ್ಮಶ್ರೀ ನಾರಾಯಣ ಗುರು ಜನ್ಮ ದಿನಾಚರಣೆ ಕಾರ್ಯಕ್ರಮ

ಪುತ್ತೂರು: ಇವತ್ತಿನ ಸಾಮಾಜಿಕ ಶಾಂತಿಗೆ ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶ ದಿವ್ಯೌಷಧಿಯಾಗಿದೆ. ಯಾರನ್ನೂ ನಾವು ದೂಷಿಸದೆ, ಒಳ್ಳೆಯದನ್ನು ಪ್ರೋತ್ಸಾಹಿಸಬೇಕು. ಎಲ್ಲರೊಂದಿಗೆ ಸೇರಿಕೊಂಡು ಸಹಬಾಳ್ವೆ ನಡೆಸಬೇಕು. ಅಪಪ್ರಚಾರ, ಹಿಂಸೆ, ದ್ವೇಷ ಇತ್ಯಾದಿಗಳಿಂದ ದೂರವಿದ್ದು, ಸಮಾಜದ ಮಧ್ಯೆ ಪ್ರೀತಿ ಹಂಚುತ್ತಾ ಬದುಕೋಣ. ಇದುವೇ ಗುರುಗಳಿಗೆ ನಾವು ಕೊಡುವ ಗೌರವ. ಶಾಂತಿ ಬಯಸುವ ಪ್ರತಿಯೊಬ್ಬರೂ ಗುರುಗಳ ತತ್ವಾದರ್ಶ ಪಾಲಿಸಬೇಕು ಎಂದು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಗುರುಬೆಳದಿಂಗಳು ಸಂಸ್ಥೆಯ ಅಧ್ಯಕ್ಷರಾದ ಪದ್ಮರಾಜ್ ಆರ್ ಹೇಳಿದರು.
ಅವರು ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ಶನಿವಾರ ನಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ 168ನೇ ಜನ್ಮ ದಿನಾಚರಣೆಯ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗುರುಸಂದೇಶ ನೀಡಿದ ಕಾರ್ಕಳ ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಮಂಜುನಾಥ ಕೋಟ್ಯಾನ್ ಅವರು, ಬ್ರಹ್ಮಶ್ರೀ ನಾರಾಯಣ ಗುರುಗಳು ಸಮಾಜದಲ್ಲಿ ಬಹುದೊಡ್ಡ ಪರಿವರ್ತನೆ, ಕ್ರಾಂತಿ ತಂದವರು. ಆದರೆ ಅವರು ಅದನ್ನು ಘೋರ ಸಿಟ್ಟಿನಿಂದ ಮಾಡಲಿಲ್ಲ. ಸಾತ್ವಿಕ ಸಿಟ್ಟಿನಿಂದ ಮಾಡಿದರು. ಋಷಿ ಮುನಿಗಳು ಸಮಾಜವನ್ನು ಮರೆತು ದೂರ ನಿಂತರೆ ಸಮಾಜ ಕೂಡ ಋಷಿ ಮುನಿಗಳನ್ನು ಮರೆಯುತ್ತದೆ. ಸಮಾಜದೊಂದಿಗೆ ಋಷಿಗಳು ಬದುಕಿದರೆ ಸಮಾಜವೂ ಅವರಿಂದ ಪ್ರೇರಣೆ ಪಡೆಯುತ್ತದೆ. ಇದರಲ್ಲಿ ಎರಡನೇ ಮಾದರಿಯ ಸಂತರಾಗಿದ್ದ ನಾರಾಯಣ ಗುರುಗಳು, ಸಮಾಜದೊಂದಿಗೆ, ಸಮಾಜಕ್ಕಾಗಿ ಬದುಕಿದರು. ತುಳಿತಕ್ಕೊಳಗಾದ ಎಲ್ಲ ಸಮಾಜಗಳಿಗಾಗಿ ಕೆಲಸ ಮಾಡಿ ವಿಶ್ವಮಾನವರಾದರು. ಆದರೂ ಅವರನ್ನು ಕೇವಲ ನಿರ್ದಿಷ್ಟ ಸಮಾಜಕ್ಕೆ ಟ್ಯಾಗ್ ಮಾಡುವ ಪರಿಪಾಠ ಸಲ್ಲದು ಎಂದರು.
ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಅಧ್ಯಕ್ಷತೆ ವಹಿಸಿದ್ದರು. ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ಡಾ. ರಾಜಾರಾಂ ಕೆ.ಬಿ. ಮಾತನಾಡಿದರು. ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಕೆಯ್ಯೂರು, ವಿಶ್ವಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷ ಜಗದೀಶ್ ಎಸ್.ಎನ್., ಕುಲಾಲ ಸಮಾಜ ಸೇವಾ ಸಂಘದ ಅಧ್ಯಕ್ಷ ನವೀನ್ ಕುಲಾಲ್, ಮರಾಠಿ ಸಮಾಜ ಸೇವಾ ಸಂಘದ ಅಧ್ಯಕ್ಷ ರಾಮಚಂದ್ರ ನಾಯ್ಕ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ತಾಲ್ಲೂಕಿನ ಬಿಲ್ಲವ ಸಮಾಜದ 200 ಮಂದಿ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಒಟ್ಟು ರೂ.5 ಲಕ್ಷ ಮೊತ್ತದ ವಿದ್ಯಾನಿಧಿ ವಿತರಿಸಲಾಯಿತು. ತಾಲೂಕಿನಲ್ಲಿ ಬಿಲ್ಲವ ಗ್ರಾಮ ಸಮಿತಿಗಳು ರಚನೆಯಾಗಿ 25 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಈ ಕ್ಷೇತ್ರದಲ್ಲಿ ಕೆಲಸ ಮಾಡಿದ ಪ್ರಮುಖರಾದ ಬಾಬು ಪೂಜಾರಿ ಬಲ್ನಾಡ್, ಬಿ.ಟಿ. ಮಹೇಶ್ಚಂದ್ರ ಸಾಲಿಯಾನ್, ಆರ್. ಸಿ. ನಾರಾಯಣ್ ಅವರನ್ನು ಸನ್ಮಾನಿಸಲಾಯಿತು.
ನಾಟಿ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶೀನಪ್ಪ ಪೂಜಾರಿ, ಸಾಹಿತ್ಯಿಕ ಸಾಧಕ ಶ್ರೀಕಾಂತ್ ಬಿರಾವು, ಸಾಮಾಜಿಕ ಸಾಧಕ ಮೋಹನ್ ಕುಮಾರ್ ಜಿ.ಎಸ್., ಹಿರಿಯರಾದ ಈಶ್ವರ ಪೂಜಾರಿ, ನಿವೃತ್ತ ಶಿಕ್ಷಕಿ ಗೀತಾಮಣಿ, ಶೈಕ್ಷಣಿಕ, ವೃತ್ತಿಪರ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು. ಸಂಘದ ಮಾಜಿ ಅಧ್ಯಕ್ಷರಾದ ಕೇಪುಳು ಬಾಳಪ್ಪ ಪೂಜಾರಿ, ಕೆ.ಪಿ. ದಿವಾಕರ್, ವರದರಾಜ್, ಮೋನಪ್ಪ ಕರ್ಕೆರ, ಶೇಷಪ್ಪ ಬಂಗೇರ, ವಿಜಯ ಕುಮಾರ್ ಸೊರಕೆ, ಮದನ್ ಪೂಜಾರಿ ಕುದ್ಮಾರ್, ಜಯಂತ ನಡುಬೈಲು ಅವರನ್ನು ಗೌರವಿಸಲಾಯಿತು.
ಬಿಲ್ಲವ ಸಂಘದ ಕಾರ್ಯದರ್ಶಿ ನಾಗೇಶ್ ಬಲ್ನಾಡು ಪ್ರಾಸ್ತಾವಿಕವಾಗಿ ಮಾತನಾಡಿದರು. ಗುರು ಮಂದಿರದ ಕಾರ್ಯನಿರ್ವಹಣಾ ಅಧಿಕಾರಿ ಹೊನ್ನಪ್ಪ ಪೂಜಾರಿ ಕೈಂದಾಡಿ ಸ್ವಾಗತಿಸಿದರು. ಉಪಾಧ್ಯಕ್ಷರಾದ ಡಾ.ಸದಾನಂದ ಕುಂದರ್, ಚಂದ್ರಕಲಾ ಮುಕ್ವೆ, ಕೋಶಾಧಿಕಾರಿ ಬಿ.ಟಿ. ಮಹೇಶ್ಚಂದ್ರ ಸಾಲಿಯಾನ್, ಜತೆ ಕಾರ್ಯದರ್ಶಿ ಚಿದಾನಂದ ಸುವರ್ಣ ಉಪಸ್ಥಿತರಿದ್ದರು. ದಿನೇಶ್ ಸುವರ್ಣ ರಾಯಿ ನಿರೂಪಿಸಿದರು.