ಅಭಿವೃದ್ಧಿಗೆ ಆಕ್ಷೇಪಿಸುವ ಪರಿಸರವಾದಿಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ: ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್
ಬೆಂಗಳೂರು, ಸೆ. 14: ‘ವಿವಿಧ ತಳಿಗಳ ಇರುವೆ, ಚಿಟ್ಟೆಗಳವೆ ಎಂದು ಹೇಳುತ್ತಾ ಅಭಿವೃದ್ದಿ ಯೋಜನೆಗಳಿಗೆ ಆಕ್ಷೇಪಿಸುವ ಪರಿಸರವಾದಿಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಪರಿಸರ ಸಂರಕ್ಷಣೆ ಮಾಡುವುದು ಹೇಗೆಂದು ನಮಗೂ ಗೊತ್ತಿದೆ' ಎಂದು ಯಲಹಂಕ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್, ಪರಿಸರವಾದಿಗಳನ್ನು ಇಂದಿಲ್ಲಿ ಲೇವಡಿ ಮಾಡಿದ್ದಾರೆ.
ಬುಧವಾರ ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ ಅವರು, ‘ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ನಗರಕ್ಕೆ ‘ಗ್ರೀನ್ ಸ್ಟೇಸ್'ಗೆ ಬೇಡಿಕೆ ಹೆಚ್ಚಿದೆ. ಹೀಗಾಗಿ ಲಾಲ್ಬಾಗ್ ಮಾದರಿಯಲ್ಲೇ ಯಲಹಂಕ ಕ್ಷೇತ್ರದ ಜಾರಕಬಂಡೆ ಕಾವಲ್ ಪ್ರದೇಶದಲ್ಲಿನ 350 ಎಕರೆ ಪ್ರದೇಶದಲ್ಲಿ ‘ಅಟಲ್ ಬಿಹಾರಿ ವಾಜಪೇಯಿ ಉದ್ಯಾನವನ' ಅಭಿವೃದ್ಧಿಪಡಿಸಲು ಸರಕಾರ ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳಬೇಕು' ಎಂದು ಆಗ್ರಹಿಸಿದರು.
ಬಳಿಕ ಉತ್ತರಿಸಿದ ತೋಟಗಾರಿಕೆ ಸಚಿವ ಮುನಿರತ್ನ, ‘ಪ್ರಸ್ತಾಪಿತ ಪ್ರದೇಶದಲ್ಲಿ ಉದ್ಯಾನವನ ಅಭಿವೃದ್ಧಿಗೆ ಕಂದಾಯ ಇಲಾಖೆ ಜೊತೆಗೆ ಅರಣ್ಯ ಇಲಾಖೆಯ ಭೂಮಿಯೂ ಇದ್ದು, ಕೇಂದ್ರದ ಅನುಮೊದನೆ ಪಡೆದುಕೊಳ್ಳುವ ಅಗತ್ಯವಿದೆ. ಆ ನಿಟ್ಟಿನಲ್ಲಿ ಇಲಾಖೆ ಕಾರ್ಯಪ್ರವೃತ್ತವಾಗಿದ್ದು ಕ್ಷೇತ್ರದ ಶಾಸಕರ ಸಹಕಾರವೂ ಇದಕ್ಕೆ ಅಗತ್ಯವಿದೆ. ಉದ್ಯಾನವನದ ಪ್ರದೇಶದಲ್ಲೇ ಶಿವರಾಮ ಕಾರಂತ ಬಡಾವಣೆಯೂ ನಿರ್ಮಾಣ ಆಗುತ್ತಿದ್ದು, ಅದಷ್ಟು ಶೀಘ್ರದಲ್ಲೆ ಪಾರ್ಕ್ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು' ಎಂದು ಭರವಸೆ ನೀಡಿದರು.
ಇದನ್ನೂ ಓದಿ: ಮೋದಿ, ಯೋಗಿ ಟೀಕಿಸುವಂತಿರಲಿಲ್ಲ: 'ನ್ಯೂಸ್ ನೇಷನ್' ಸುದ್ದಿ ವಾಹಿನಿಗೆ ರಾಜೀನಾಮೆ ನೀಡಿದ ಪತ್ರಕರ್ತ