Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಡಾ. ಡಿ.ಎಂ. ನಂಜುಂಡಪ್ಪ ವರದಿ ಅನುಷ್ಠಾನ:...

ಡಾ. ಡಿ.ಎಂ. ನಂಜುಂಡಪ್ಪ ವರದಿ ಅನುಷ್ಠಾನ: ಒಂದು ಅವಲೋಕನ

ಡಾ. ರಝಾಕ್ ಉಸ್ತಾದ, ರಾಯಚೂರುಡಾ. ರಝಾಕ್ ಉಸ್ತಾದ, ರಾಯಚೂರು16 Sept 2022 12:10 AM IST
share
ಡಾ. ಡಿ.ಎಂ. ನಂಜುಂಡಪ್ಪ ವರದಿ ಅನುಷ್ಠಾನ: ಒಂದು ಅವಲೋಕನ

ಡಾ. ಡಿ.ಎಂ. ನಂಜುಂಡಪ್ಪನವರ ಉನ್ನತಾಧಿಕಾರ ಸಮಿತಿ ನೀಡಿದ ವರದಿಯಲ್ಲಿರುವ 114 ಹಿಂದುಳಿದ ತಾಲೂಕುಗಳ ಅಭಿವೃದ್ಧಿಗಾಗಿ ಸಮಿತಿಯು ಒಟ್ಟು ಎಂಟು ವರ್ಷಗಳ ಕಾಲಾವಧಿಯಲ್ಲಿ ಕೈಗೊಳ್ಳಬಹುದಾದ ಅಭಿವೃದ್ಧಿಯ ಕ್ರಿಯಾ ಯೋಜನೆ ಮತ್ತು ರಾಜ್ಯದಲ್ಲಿ ಅಸಮಾನತೆಯನ್ನು ಹೋಗಲಾಡಿಸುವ ನೀಲ ನಕ್ಷೆಯನ್ನು ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಿತ್ತು. ಆ ನೀಲ ನಕ್ಷೆಯಂತೆ 2003ರಿಂದ 2011ರ ವರೆಗೆ ಎಂಟು ವರ್ಷಗಳ ಕಾಲ ಸರಕಾರ ಈ 114 ಹಿಂದುಳಿದ ತಾಲೂಕುಗಳಿಗೆ ಅಂದಿನ ಬಜೆಟ್ ಪ್ರಮಾಣದಂತೆ 16,000 ಕೋಟಿ ರೂಪಾಯಿ ವಿಶೇಷ ಅನುದಾನ ನೀಡಬೇಕು ಮತ್ತು ಸಾಮಾನ್ಯ ಬಜೆಟ್ ಮೂಲಕ 15,000 ಕೋಟಿ ರೂಪಾಯಿ ಅನುದಾನ ಬರುತ್ತದೆ, ಇದನ್ನು ಸಮರ್ಪಕವಾಗಿ ಬಳಸಿದಲ್ಲಿ ರಾಜ್ಯದಲ್ಲಿ ಇರುವ ಪ್ರಾದೇಶಿಕ ಅಸಮಾನತೆಯನ್ನು ಹೋಗಲಾಡಿಸಬಹುದೆಂದು ತಿಳಿಸಲಾಗಿತ್ತು.


ಅಭಿವೃದ್ಧಿ ಪ್ರಕ್ರಿಯೆ ಎಂಬುದು ಉತ್ತಮ ಬದುಕಿಗೆ ಹಾಗೂ ಜನರ ಕಾರ್ಯನಿರ್ವಹಣೆಗೆ ಇರುವ ಭೌತಿಕ ಸೌಕರ್ಯಗಳನ್ನು ಹಾಗೂ ಉತ್ಪಾದಕತೆಯನ್ನು ಹೆಚ್ಚಿಸಿಕೊಳ್ಳಲು ಹೊಸ ಕೌಶಲ್ಯಗಳನ್ನು ಪಡೆಯುವುದು ಹಾಗೂ ವರಮಾನದ ಹೆಚ್ಚಳವನ್ನು ಒಳಗೊಳ್ಳುತ್ತದೆ. ಒಂದು ರಾಜ್ಯದ ಅಥವಾ ರಾಷ್ಟ್ರದ ಆರ್ಥಿಕ ಅಭಿವೃದ್ಧಿಯ ಧ್ಯೇಯವೇ ಒಟ್ಟು ವರಮಾನವನ್ನು ಇನ್ನಷ್ಟು ಹೆಚ್ಚಿಸುವುದು, ಸಮಾಜದ ಎಲ್ಲಾ ಸ್ತರದವರು ಹಾಗೂ ಅವರು ವಾಸಿಸುವ ವಿಭಿನ್ನ ಪ್ರದೇಶಗಳು ವರಮಾನದ ಹೆಚ್ಚಳದ ಲಾಭ ಪಡೆಯುವಂತೆ ನೋಡಿಕೊಳ್ಳಲು ಸಮಾನ ಹಂಚಿಕೆಯ ಕಾರ್ಯನೀತಿಗಳ ಮಧ್ಯಸ್ಥಿಕೆ ಬೇಕಾಗುತ್ತದೆ; ಹೀಗಾಗಬೇಕಾದರೆ ಸಾಮಾಜಿಕ ನ್ಯಾಯಸಹಿತವಾದ ಅಭಿವೃದ್ಧಿ ಅಗತ್ಯ.

ಕರ್ನಾಟಕದ ದಕ್ಷಿಣ ಹಾಗೂ ಉತ್ತರ ಭಾಗಗಳಲ್ಲಿ ಕಂಡುಬಂದ ವಾಸ್ತವ ಅಭಿವೃದ್ಧಿ ಏನೇ ಇದ್ದರೂ 1999-2000ದ ವೇಳೆಗೆ ರಾಜ್ಯದ ತಲಾವಾರು ಆದಾಯ 16,654 ರೂ.ಯಾಯಿತು. ಆದರೆ, ಜಿಲ್ಲೆಗಳ ವರಮಾನಗಳಲ್ಲಿರುವ ವ್ಯತ್ಯಾಸ ಎಂದರೆ ಬೀದರ್‌ನಲ್ಲಿ 9,902 ರೂ.ಯಿದ್ದರೆ ಬೆಂಗಳೂರು ನಗರದ ಜಿಲ್ಲೆಗಳಲ್ಲಿ 27,984 ರೂ.ಯಿರುವ ಅಂಶ ಚಿಂತೆಯನ್ನುಂಟು ಮಾಡಿತ್ತು. ಉತ್ತರ ಹಾಗೂ ದಕ್ಷಿಣ ಕರ್ನಾಟಕದ ನಡುವಣ ಅಸಮತೋಲನ ಕುರಿತಂತೆ ಉತ್ತರ ಕರ್ನಾಟಕದಲ್ಲಿ ಕಂಡುಬಂದ ಅಸಮಾಧಾನಕ್ಕೆ ಪ್ರತಿಯಾಗಿ ಸರಕಾರವು 1956ರಿಂದ ಬೇರೆ ಬೇರೆ ವಿಧಗಳಲ್ಲಿ ಪ್ರತಿಕ್ರಿಯಿಸುತ್ತಲೇ ಬಂದಿದೆ, ಆದರೂ 2000ದವರೆಗೂ ಪ್ರಾದೇಶಿಕ ಅಸಮತೋಲನದ ಬಗ್ಗೆ ಯಾವುದೇ ಸಮಗ್ರ ನಿಲುವು ಕಂಡುಬಂದಿರಲಿಲ್ಲ. ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ನೇತೃತ್ವದ ಸರಕಾರದಲ್ಲಿ ಡಾ.ಡಿ.ಎಂ.ನಂಜುಂಡಪ್ಪನವರ ಅಧ್ಯಕ್ಷತೆಯಲ್ಲಿ ಪ್ರಾದೇಶಿಕ ಅಸಮತೋಲನಗಳ ಪರಿಹಾರಕ್ಕಾಗಿ ಒಂದು ಉನ್ನತಾಧಿಕಾರ ಸಮಿತಿಯನ್ನು ರಚಿಸಲಾಯಿತು. ಅಭಿವೃದ್ಧಿಯ ಮಟ್ಟದಲ್ಲಿ ಜಿಲ್ಲೆಗಳ ನಡುವೆ, ತಾಲೂಕುಗಳ ನಡುವೆ, ಪ್ರದೇಶಗಳ ನಡುವೆ, ಉತ್ತರ-ದಕ್ಷಿಣ ಕರ್ನಾಟಕಗಳ ನಡುವಣ ಅಸಮಾನತೆಯನ್ನು ತಗ್ಗಿಸಲು ಸೂಕ್ತ ಅಭಿವೃದ್ಧಿ ವಿಧಾನವನ್ನು ಶಿಫಾರಸು ಮಾಡುವುದು ಹಾಗೂ ಸಂತುಲಿತ ಅಭಿವೃದ್ಧಿಯತ್ತ ಹೆಜ್ಜೆ ಹಾಕಲು ಇರುವ ಕಾರ್ಯವಿಧಾನದ ಅನುಷ್ಠಾನಕ್ಕಾಗಿ ಸಾಂಸ್ಥಿಕ ಕಾರ್ಯತಂತ್ರವನ್ನು ರಚಿಸುವುದು ಈ ಸಮಿತಿಯ ಉದ್ದೇಶವಾಗಿತ್ತು. ಅಸಮತೋಲನಗಳನ್ನು ಗುರುತಿಸಲು ಸಮಿತಿಯು ಒಂದು ವೈಜ್ಞಾನಿಕ ಹಾಗೂ ಸಮಗ್ರ ವಿಧಾನವನ್ನು ಅನುಸರಿಸಿದೆ ಎಂದು ಹೇಳಬಹುದು. ಸಮಿತಿಯು ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡಿ ಜಿಲ್ಲಾ ಪಂಚಾಯತ್‌ಗಳೊಡನೆ ಹಾಗೂ ಪ್ರಾದೇಶಿಕ ಅಸಮಾನತೆಯ ಬಗ್ಗೆ ಕಾಳಜಿ ಇರುವ ವ್ಯಕ್ತಿ, ಸಂಘ ಸಂಸ್ಥೆಗಳೊಡನೆ ಚರ್ಚೆ ನಡೆಸಿದೆ. ಈ ಸಮಿತಿಯು ಹಿಂದುಳಿದಿರುವಿಕೆಯನ್ನು ನಿರ್ಧರಿಸಲು ಜಿಲ್ಲೆ ಅಥವಾ ಒಂದು ಪ್ರದೇಶವನ್ನು ಮೂಲಭೂತ ಘಟಕವೆಂದು ಪರಿಗಣಿಸಲಿಲ್ಲ, ಅವರೇ ಹೇಳಿರುವಂತೆ ಯಾವುದೇ ಒಂದು ಪ್ರದೇಶದ ಎಲ್ಲ ಜಿಲ್ಲೆಗಳು ಅಥವಾ ತಾಲೂಕು ಏಕರೂಪವಾಗಿ ಅಭಿವೃದ್ಧಿ ಹೊಂದಿವೆಯೆಂದಾಗಲಿ ಅಥವಾ ಏಕರೂಪವಾಗಿ ಹಿಂದುಳಿದಿವೆ ಎಂದು ಹೇಳುವುದಾಗಲಿ ಸಾಧ್ಯವಿಲ್ಲವೆಂದು ಭಾವಿಸಿದೆ. ಆದ್ದರಿಂದ ತಾಲೂಕನ್ನು ಮೂಲಭೂತ ಘಟಕವೆಂದು ಪರಿಗಣಿಸಿದೆ.

ಕರ್ನಾಟಕದಲ್ಲಿ ಪ್ರಾದೇಶಿಕ ಅಸಮಾನತೆ ಯಾವ ಮಟ್ಟದಲ್ಲಿ ಇದೆಯೆಂದು ಸೂಕ್ತ ವಿವರಣೆಯೊಂದಿಗೆ ಸರಕಾರದ ಗಮನ ಸೆಳೆದ ವರದಿಯೆಂದೇ ಪ್ರಚಲಿತವಾದ ವರದಿ ಎಂದರೆ ಡಾ.ಡಿ.ಎಂ. ನಂಜುಂಡಪ್ಪನವರ ಉನ್ನತಾಧಿಕಾರ ಸಮಿತಿ 2002ರಲ್ಲಿ ನೀಡಿದ ವರದಿ. ಆ ವರದಿಯಂತೆ ಅಭಿವೃದ್ಧಿಯ ಅಸಮಾನತೆ ಎನ್ನುವುದು ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇದೆ. ಆದರೆ, ಹೈದರಾಬಾದ್ ಕರ್ನಾಟಕದಲ್ಲಿ ಅತೀ ಹೆಚ್ಚು ಅಸಮಾನತೆ ಕಂಡುಬಂದಿದೆ. ಡಾ. ಡಿ.ಎಂ. ನಂಜುಂಡಪ್ಪನವರ ಉನ್ನತಾಧಿಕಾರ ಸಮಿತಿ ರಾಜ್ಯದ 175 ತಾಲೂಕುಗಳಲ್ಲಿ 114 ತಾಲೂಕುಗಳು ಹಿಂದುಳಿದಿವೆ ಎಂದು Comprehensive Composite Development Index(CCDI) ಹಾಗೂ Cumulative Deprivation Index(CDI) ಆಧಾರದಲ್ಲಿ ನಿರ್ಧರಿಸಿದೆ. ಈ 114 ತಾಲೂಕುಗಳನ್ನು CCDI  ಅಂಶಗಳ ಅನುಸಾರ ಮೂರು ಭಾಗಗಳಾಗಿ ವರ್ಗೀಕರಿಸಿ, CCDI  ಅಂಶ 0.53ದಿಂದ 0.79 ಕಡಿಮೆ ಇರುವ 39 ತಾಲೂಕುಗಳನ್ನು ಅತ್ಯಂತ ಹಿಂದುಳಿದ ತಾಲೂಕುಗಳೆಂದೂ, ಇಇಈಐ ಅಂಶ 0.80ರಿಂದ 0.88ಗಿಂತ ಕಡಿಮೆ ಇರುವ 40 ತಾಲೂಕುಗಳನ್ನು ಅತೀ ಹಿಂದುಳಿದ ತಾಲೂಕುಗಳೆಂದೂ ಹಾಗೂ CCDI  ಅಂಶ 0.89ರಿಂದ 0.99ಕ್ಕಿಂತ ಕಡಿಮೆ ಇರುವ 35 ತಾಲೂಕುಗಳನ್ನು ಹಿಂದುಳಿದ ತಾಲೂಕುಗಳೆಂದು ವರ್ಗೀಕರಿಸಿತು. CCDI ಅಂಶ 1.0ರಿಂದ 1.96 ವರೆಗೆ ಉಳಿದ 61 ತಾಲೂಕುಗಳನ್ನು ಸಾಪೇಕ್ಷವಾಗಿ ಅಭಿವೃದ್ಧಿ ಹೊಂದಿದ ತಾಲೂಕುಗಳೆನ್ನಲಾಗಿದೆ.

ಡಾ. ಡಿ.ಎಂ.ನಂಜುಂಡಪ್ಪನವರ ಉನ್ನತಾಧಿಕಾರ ಸಮಿತಿ ನೀಡಿದ ವರದಿಯಂತೆ ರಾಜ್ಯ 39 ಅತ್ಯಂತ ಹಿಂದುಳಿದ ತಾಲೂಕುಗಳಲ್ಲಿ 21 ತಾಲೂಕುಗಳು ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿವೆ (ಕಲ್ಯಾಣ ಕರ್ನಾಟಕದ ಒಟ್ಟು ತಾಲೂಕುಗಳು 31), ಬೆಂಗಳೂರು ವಿಭಾಗದಲ್ಲಿ 11 ಅತ್ಯಂತ ಹಿಂದುಳಿದ ತಾಲೂಕುಗಳು, ಬೆಳಗಾವಿ ವಿಭಾಗದಲ್ಲಿ 05 ಅತ್ಯಂತ ಹಿಂದುಳಿದ ತಾಲೂಕುಗಳು ಹಾಗೂ ಮೈಸೂರು ವಿಭಾಗದಲ್ಲಿ 02 ಅತ್ಯಂತ ಹಿಂದುಳಿದ ತಾಲೂಕುಗಳು. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಇರುವ 31 ತಾಲೂಕುಗಳ ಪೈಕಿ 28 ತಾಲೂಕುಗಳು ಹಿಂದುಳಿದ ತಾಲೂಕುಗಳಾಗಿವೆ (05 ಅತೀ ಹಿಂದುಳಿದ ತಾಲೂಕುಗಳು ಹಾಗೂ 02 ಹಿಂದುಳಿದ ತಾಲೂಕುಗಳು). ರಾಜ್ಯದ ಒಟ್ಟು 61 ಸಾಪೇಕ್ಷವಾಗಿ ಅಭಿವೃದ್ಧಿ ಹೊಂದಿದ ತಾಲೂಕುಗಳಲ್ಲಿ ಕೇವಲ 03 ತಾಲೂಕುಗಳು ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿವೆ. ಕಲ್ಯಾಣ ಕರ್ನಾಟಕ ಪ್ರದೇಶದ ಈ 03 ತಾಲೂಕುಗಳಲ್ಲಿ ಒಂದು ಬೀದರ್ ಜಿಲ್ಲೆಯ ಬೀದರ್ ತಾಲೂಕು ಹಾಗೂ ಎರಡು ತಾಲೂಕುಗಳು ಬಳ್ಳಾರಿ ಜಿಲ್ಲೆಯ ಬಳ್ಳಾರಿ ಮತ್ತು ಹೊಸಪೇಟೆ ತಾಲೂಕುಗಳಾಗಿವೆ. ಕಲ್ಯಾಣ ಕರ್ನಾಟಕದ ಕಲಬುರ್ಗಿ, ಯಾದಗೀರ್, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಒಂದೇ ಒಂದು ತಾಲೂಕುಗಳು ಅಭಿವೃದ್ಧಿ ಹೊಂದಿದ ತಾಲೂಕುಗಳ ಪಟ್ಟಿಯಲ್ಲಿರಲಿಲ್ಲ. ಅಂದರೆ ಕಲ್ಯಾಣ ಕರ್ನಾಟಕ ಪ್ರದೇಶದ ನಾಲ್ಕು ಜಿಲ್ಲೆಗಳಲ್ಲಿ ಒಂದೇ ಒಂದು ತಾಲೂಕು ಅಭಿವೃದ್ಧಿ ಹೊಂದಿದ ತಾಲೂಕುಗಳ ಪಟ್ಟಿಯಲ್ಲಿಲ್ಲದೇ ಇರುವುದು ಅತ್ಯಂತ ಸೋಜಿಗದ ಸಂಗತಿ. ಮೈಸೂರು ವಿಭಾಗದಲ್ಲಿ ಇರುವ ಮೂರು ಜಿಲ್ಲೆಗಳಲ್ಲಿ (ಕೊಡಗು, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳು) ಒಂದೇ ಒಂದು ತಾಲೂಕು ಹಿಂದುಳಿದ ಪಟ್ಟಿಯಲ್ಲಿಲ್ಲ. ಈ ಮಟ್ಟದಲ್ಲಿ ಪ್ರಾದೇಶಿಕ ಅಸಮಾನತೆ ಕರ್ನಾಟಕ ರಾಜ್ಯದಲ್ಲಿ ಇರುವುದು ಅತ್ಯಂತ ಸಂಪದ್ಭರಿತ ನಾಡೆಂದು ಕರೆಯಲ್ಪಡುವ ಕರ್ನಾಟಕ ರಾಜ್ಯದ ಪರಿಸ್ಥಿತಿ ಇಷ್ಟೊಂದು ಕ್ಲಿಷ್ಟಕರವಾಗಿರುವುದು ಅಂದಿನ ಸರಕಾರಕ್ಕೆ ಮತ್ತು ಸದನದಲ್ಲಿದ್ದ ಎಲ್ಲ ಜನಪ್ರತಿನಿಧಿಗಳಿಗೆ ಈ ವರದಿಯನ್ನು ಜಾರಿಗೊಳಿಸುವ ಅನಿವಾರ್ಯತೆ ಮತ್ತು ಬದ್ಧತೆಯಿತ್ತು.

ಡಾ. ಡಿ.ಎಂ. ನಂಜುಂಡಪ್ಪನವರ ಉನ್ನತಾಧಿಕಾರ ಸಮಿತಿ ನೀಡಿದ ವರದಿಯಲ್ಲಿರುವ 114 ಹಿಂದುಳಿದ ತಾಲೂಕುಗಳ ಅಭಿವೃದ್ಧಿಗಾಗಿ ಸಮಿತಿಯು ಒಟ್ಟು ಎಂಟು ವರ್ಷಗಳ ಕಾಲಾವಧಿಯಲ್ಲಿ ಕೈಗೊಳ್ಳಬಹುದಾದ ಅಭಿವೃದ್ಧಿಯ ಕ್ರಿಯಾ ಯೋಜನೆ ಮತ್ತು ರಾಜ್ಯದಲ್ಲಿ ಅಸಮಾನತೆಯನ್ನು ಹೋಗಲಾಡಿಸುವ ನೀಲ ನಕ್ಷೆಯನ್ನು ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಿತ್ತು. ಆ ನೀಲ ನಕ್ಷೆಯಂತೆ 2003ರಿಂದ 2011ರ ವರೆಗೆ ಎಂಟು ವರ್ಷಗಳ ಕಾಲ ಸರಕಾರ ಈ 114 ಹಿಂದುಳಿದ ತಾಲೂಕುಗಳಿಗೆ ಅಂದಿನ ಬಜೆಟ್ ಪ್ರಮಾಣದಂತೆ 16,000 ಕೋಟಿ ರೂಪಾಯಿ ವಿಶೇಷ ಅನುದಾನ ನೀಡಬೇಕು ಮತ್ತು ಸಾಮಾನ್ಯ ಬಜೆಟ್ ಮೂಲಕ 15,000 ಕೋಟಿ ರೂಪಾಯಿ ಅನುದಾನ ಬರುತ್ತದೆ, ಇದನ್ನು ಸಮರ್ಪಕವಾಗಿ ಬಳಸಿದಲ್ಲಿ ರಾಜ್ಯದಲ್ಲಿ ಇರುವ ಪ್ರಾದೇಶಿಕ ಅಸಮಾನತೆಯನ್ನು ಹೋಗಲಾಡಿಸಬಹುದೆಂದು ತಿಳಿಸಲಾಗಿತ್ತು. ಈ ಎಂಟು ವರ್ಷಗಳ ವಿಶೇಷ ಅಭಿವೃದ್ಧಿ ಯೋಜನೆಯ ಅನುದಾನವನ್ನು ಡಾ.ಡಿ.ಎಂ.ನಂಜುಂಡಪ್ಪನವರ ವರದಿಯು ನಿರ್ದಿಷ್ಟವಾಗಿ ಇಂತಿಂತಹ ವಲಯಗಳಿಗೆ ಮತ್ತು ಯೋಜನೆಗಳಿಗೆ ವಿಶೇಷ ಅಭಿವೃದ್ಧಿ ಯೋಜನೆಯಡಿ ಕಾಮಗಾರಿಗಳನ್ನು ಕಾಲಮಿತಿಯೊಳಗೆ ಕೈಗೆತ್ತಿಕೊಳ್ಳಬೇಕು ಎಂದು ಸೂಚಿಸಿತ್ತು. ವರದಿ ಗುರುತಿಸಿರುವ ವಲಯಗಳಲ್ಲಿ ಕೃಷಿ (ಎ.ಪಿ.ಎಂ.ಸಿ., ತೋಟಗಾರಿಕೆ, ಮೀನುಗಾರಿಕೆ, ರೇಷ್ಮೆ, ಹೈನುಗಾರಿಕೆ), ಗ್ರಾಮೀಣಾಭಿವೃದ್ಧಿ (ಗ್ರಾಮೀಣ ರಸ್ತೆ, ಜಿ.ಪಂ.ರಸ್ತೆ, ಗ್ರಾಮೀಣ ನೀರು ಸರಬರಾಜು, ಗ್ರಾಮೀಣ ವಸತಿ), ನೀರಾವರಿ, ಸಾಮಾಜಿಕ ಸೇವೆಗಳು (ಶಿಕ್ಷಣ, ಆರೋಗ್ಯ, ಕ್ರೀಡೆ, ಪ್ರವಾಸೋದ್ಯಮ, ನಗರಾಭಿವೃದ್ಧಿ, ಮಹಿಳಾಭಿವೃದ್ಧಿ ಮತ್ತು ಸಮಾಜ ಕಲ್ಯಾಣ), ಸಾರಿಗೆ (ರೈಲ್ವೆ, ವಿಮಾನ, ಬಂದರು) ವಿಜ್ಞಾನ ಮತ್ತು ತಂತ್ರಜ್ಞಾನ, ವಿದ್ಯುತ್, ಆರ್ಥಿಕ ಸೇವೆ, ಕೈಗಾರಿಕೆ ಮತ್ತು ಖನಿಜ ಎಂದು ಅಭಿವೃದ್ಧಿಯಲ್ಲಿ ಹಿಂದುಳಿದ ವಲಯವನ್ನು ಗುರುತಿಸಿ ಯೋಜನೆ ರೂಪಿಸಿತ್ತು. 2002ರಲ್ಲಿ ರಾಜ್ಯ ಸರಕಾರದ ಬಜೆಟ್ ಗಾತ್ರ ಸುಮಾರು 17,328.00 ಕೋ.ರೂ. ಮಾತ್ರ, ಅದರಂತೆ ಒಟ್ಟು 16,000 ಕೋ.ರೂ. (ಬಜೆಟ್ ಗಾತ್ರಕ್ಕೆ ಶೇ. 92.33ರಷ್ಟು) ವಿಶೇಷ ಅನುದಾನ ನೀಡುವ ಬಗ್ಗೆ ಪ್ರಸ್ತಾವ ಮಾಡಲಾಗಿದೆ. ಆದರೆ, ಡಾ.ಡಿ.ಎಂ.ನಂಜುಂಡಪ್ಪನವರ ವರದಿಯನ್ನು ಅಂದಿನ ಸರಕಾರ ತಕ್ಷಣದಲ್ಲಿ ಜಾರಿಗೊಳಿಸಲು ಮನಸ್ಸು ಮಾಡಲಿಲ್ಲ.

ಮುಂದೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರ ನೇತೃತ್ವದ ಸರಕಾರ 2007-08ನೇ ಆರ್ಥಿಕ ವರ್ಷದಲ್ಲಿ ಸುಮಾರು 1,571.50 ಕೋ.ರೂ. ಅನುದಾನದೊಂದಿಗೆ ಅನುಷ್ಠಾನ ಮಾಡಲು ನಿರ್ಧರಿಸಿದಾಗ ರಾಜ್ಯದ ಬಜೆಟ್ ಗಾತ್ರ 40,762.00 ಕೋ.ರೂ. ಆಗಿತ್ತು, ಅಂದರೆ, ವರದಿ ನೀಡಿದಾಗ ಇದ್ದಂತಹ ಬಜೆಟ್ ಗಾತ್ರ, ವರದಿ ಅನುಷ್ಠಾನ ಮಾಡಲು ಪ್ರಾರಂಭವಾದಾಗ ಎರಡು ಪಟ್ಟು ಹೆಚ್ಚಾಯಿತು. ಅದರಂತೆ ಡಾ.ಡಿ.ಎಂ.ನಂಜುಂಡಪ್ಪನವರ ವರದಿಯ ಕ್ರಿಯಾ ಯೋಜನೆಯ ಅನುದಾನ ಎರಡು ಪಟ್ಟು ಹೆಚ್ಚಾಗಬೇಕಿತ್ತು, ಅಂದರೆ ವರ್ಷಕ್ಕೆ 2,000 ಕೋ.ರೂ. ವಿಶೇಷ ಅನುದಾನದ ಬದಲಾಗಿ 4,000 ಕೋ.ರೂ.ಗೆ ಹೆಚ್ಚಿಸಬೇಕಾಗಿತ್ತು, ಆದರೆ ದುರದೃಷ್ಟವಶಾತ್ ಅದಾಗಲಿಲ್ಲ. ವರ್ಷದಿಂದ ವರ್ಷಕ್ಕೆ ಬಜೆಟ್ ಗಾತ್ರ ಹೆಚ್ಚಾಗುತ್ತ ಹೋಗಿತ್ತು. ಇದರಿಂದ ಅಭಿವೃದ್ಧಿ ಹೊಂದಿದ ತಾಲೂಕುಗಳು ಹೆಚ್ಚು ಅಭಿವೃದ್ಧಿ ಹೊಂದುತ್ತ ಹೋಗಿ ಹಿಂದುಳಿದ ತಾಲೂಕುಗಳು ಹಿಂದುಳಿಯುವ ಸಂಪ್ರದಾಯ ಮುಂದುವರಿಯುತ್ತಾ ಬಂತು. 2022-23ನೇ ಸಾಲಿನ ಬಜೆಟ್ ಗಾತ್ರ 2,56,000 ಕೋ.ರೂ ವರೆಗೂ ಬಂತು, ಅಂದರೆ 2002-03ರ ಬಜೆಟ್ ಗಾತ್ರಕ್ಕಿಂತ ಸುಮಾರು 12 ಪಟ್ಟು ಹೆಚ್ಚಾಗಿದ್ದರೂ ಡಾ. ಡಿ.ಎಂ.ನಂಜುಂಡಪ್ಪ ವರದಿಯ ವಿಶೇಷ ಅಭಿವೃದ್ಧಿ ಯೋಜನೆಗೆ 2000-3000 ಕೋ.ರೂ. ಮಿತಿಯೊಳಗೆ ಅನುದಾನ ನೀಡಿ ಕೈತೊಳೆದು ಕೊಳ್ಳಲಾಗಿದೆ. ಇದರಿಂದ ರಾಜ್ಯದಲ್ಲಿರುವ ಪ್ರಾದೇಶಿಕ ಅಸಮಾನತೆ ಸಂಪೂರ್ಣವಾಗಿ ತೊಡೆದುಹಾಕಲು ಸಾಧ್ಯವಿರುವ ಅವಕಾಶವನ್ನು ಸರಕಾರವೇ ಹಾಳು ಮಾಡಿಕೊಂಡಂತಾಗಿದೆ. ಆದರೆ, ರಾಜ್ಯದ ಜನರ ನಿರೀಕ್ಷೆಯಂತೆ ಇಂದಲ್ಲ ನಾಳೆ ಈ ಪ್ರಾದೇಶಿಕ ಅಸಮಾನತೆ ಸಂಪೂರ್ಣವಾಗಿ ತೊಡೆದುಹಾಕಲೇಬೇಕು.

 ಹಿಂದಿನ ಬಿಜೆಪಿ ಸರಕಾರವಿದ್ದಾಗ ಡಾ.ಡಿ.ಎಂ.ನಂಜುಂಡಪ್ಪ ವರದಿಯಲ್ಲಿದ್ದ ನೀರಾವರಿ ಕ್ಷೇತ್ರ ಅಭಿವೃದ್ಧಿಗೆ ಮೀಸಲಿಟ್ಟ ಅನುದಾನವನ್ನು ಕೆಬಿಜೆಎನ್‌ಎಲ್/ಕೆಎನ್‌ಎನ್‌ಎಲ್ ಕ್ಯಾಪಿಟಲ್ ಹಣ ಹೊಂದಿಸಲು, ನಬಾರ್ಡ್ ಯೋಜನೆಗೆ ಬಳಸಲಾಗಿದೆ. ಶಿಕ್ಷಣ ಇಲಾಖೆಗೆ ಮೀಸಲಾದ ಅನುದಾನವನ್ನು ನಬಾರ್ಡ್, ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ್, ವಿದ್ಯಾರ್ಥಿಗಳಿಗೆ ಧನ ಸಹಾಯ ಮತ್ತು ಶುಲ್ಕ ಮರುಪಾವತಿ ಮತ್ತು ವಿದ್ಯಾ ವಿಕಾಸ ಯೋಜನೆಗೆ ಹಾಗೂ ಹಿಂದುಳಿದ ತಾಲೂಕುಗಳಲ್ಲಿ 8ನೇ ತರಗತಿಯ ಶಾಲಾ ಮಕ್ಕಳ ಸೈಕಲ್ ಖರೀದಿಸಲು ಬಳಸಲಾಗಿದೆ, ಕೃಷಿ ಮತ್ತು ಹೈನುಗಾರಿಕೆ ಅಭಿವೃದ್ಧಿಗೆ ಬಳಸಬೇಕಾದ ಅನುದಾನವನ್ನು ಹಿಂದುಳಿದ ತಾಲೂಕುಗಳಲ್ಲಿ ಮಾತ್ರ ಹಾಲಿನ ಪ್ರೋತ್ಸಾಹ ಧನ ನೀಡಲು ಬಳಸಿದ್ದಾರೆ. ಕೃಷಿ ಮತ್ತು ತೋಟಗಾರಿಕೆಗೆ ಮೀಸಲಾದ ವಿಶೇಷ ಅಭಿವೃದ್ಧಿ ಯೋಜನೆಯ ಅನುದಾನವನ್ನು ರಾಷ್ಟ್ರೀಯ ಕೃಷಿ ಯೋಜನೆಗಳ ಜೊತೆಗೆ ಹೊಂದಾಣಿಕೆ ಮಾಡಲಾಗಿದೆ. ಒಳಾಡಳಿತ ಮತ್ತು ಸಾರಿಗೆ ಇಲಾಖೆಗೆ ಮೀಸಲಾದ ಅನುದಾನವನ್ನು ಗೃಹ ಇಲಾಖೆಗೆ ಬಳಸಲಾಗಿದೆ ಮತ್ತು ಡಾ.ಡಿ.ಎಂ.ನಂಜುಂಡಪ್ಪನವರು ಸೂಚಿಸಿದಂತೆ ಶೇ. 40ರಷ್ಟು ಅನುದಾನವನ್ನು ಕಲಬುರ್ಗಿ ವಿಭಾಗಕ್ಕೆ ಬಳಸಬೇಕೆಂದಿದ್ದರೂ ಸಾರಿಗೆ ಇಲಾಖೆಯ ಎಲ್ಲ ನಿಗಮಗಳಿಗೆ ಸಮಾನವಾಗಿ ಹಂಚಿಕೆ ಮಾಡಿ ಅನ್ಯಾಯ ಮಾಡಲಾಗಿದೆ. ಇದು ಎಲ್ಲ ಇಲಾಖೆಗಳಿಗೂ ಅನ್ವಯಿಸಿರಬಹುದು.

ಇದೇ ರೀತಿ ವಸತಿ ಯೋಜನೆಗೆ ನಿಗದಿಗೊಳಿಸಲಾದ ಅನುದಾನವನ್ನು ರಾಷ್ಟ್ರೀಯ ವಸತಿ ಯೋಜನೆಗಳ(ಇಂದಿರಾ ಅವಾಸ್, ಆಶ್ರಯ, ಗ್ರಾಮೀಣ ವಸತಿ) ಮತ್ತು ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮಕ್ಕೆ ಆಶ್ರಯ ಯೋಜನೆಗಾಗಿ 2010-11ನೇ ಸಾಲಿನಲ್ಲಿ 40 ಕೋ.ರೂ. ಸಾಲ ನೀಡಲಾಗಿದೆ. ಜೊತೆಗೆ ಹೊಂದಾಣಿಕೆ ಮಾಡಲಾಗಿದೆ. ರಾಜ್ಯದಲ್ಲಿ ಇರುವ ಪ್ರಾದೇಶಿಕ ಅಸಮಾನತೆಯನ್ನು ಹೋಗಲಾಡಿಸಲು ಇದ್ದಂತಹ ಏಕೈಕ ಅವಕಾಶವನ್ನು ಸರಕಾರ ಈ ರೀತಿ ಹಾಳುಮಾಡಿಕೊಂಡಿದೆ. ಅಂದರೆ, ಕಳೆದ 15 ವರ್ಷಗಳಿಂದ ಡಾ.ಡಿ.ಎಂ. ನಂಜುಂಡಪ್ಪನವರ ವರದಿಯನ್ನು ಎಲ್ಲ ಸರಕಾರಗಳು ಬದ್ಧತೆ ಇಲ್ಲದೆ ಅನುಷ್ಠಾನ ಮಾಡಿರುವುದರಿಂದ ರಾಜ್ಯದಲ್ಲಿ ಇರುವ ತಾಲೂಕು ತಾಲೂಕುಗಳ ನಡುವೆ, ಪ್ರದೇಶ ಪ್ರದೇಶಗಳ ನಡುವೆ ಅಭಿವೃದ್ಧಿಯ ಅಸಮಾನತೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದೇ ಹೇಳಬಹುದಾಗಿದೆ.
2014ರಲ್ಲಿ ಧಾರವಾಡದ Centre for Multi Disciplinary Development Research (CMDR) ಸಂಸ್ಥೆಯು ಡಾ. ಡಿ.ಎಂ. ನಂಜುಂಡಪ್ಪ ವರದಿಯ ಅನುಷ್ಠಾನದಿಂದಾದ ಬದಲಾವಣೆಯ ಬಗ್ಗೆ ಸಂಶೋಧನೆ ಮಾಡಿದ ವರದಿಯನ್ನು ಸರಕಾರಕ್ಕೆ ಸಲ್ಲಿಸಿದೆ. ಈ ವರದಿಯ ಅಂಶಗಳನ್ನು ನೋಡಿದಲ್ಲಿ ಅಭಿವೃದ್ಧಿ ಯಾವ ದಿಕ್ಕಿನ ಕಡೆಗೆ ಹೋಗುತ್ತಿದೆ ಎಂದು ಚರ್ಚಿಸುವ ಅಗತ್ಯವಿದೆ. ಸಿಎಂಡಿಆರ್ ವರದಿಯಂತೆ ರಾಜ್ಯದಲ್ಲಿ ಡಾ.ಡಿ.ಎಂ. ನಂಜುಂಡಪ್ಪನವರ ವರದಿಯಲ್ಲಿ ಸೂಚಿಸಿದಂತೆ 39 ಅತ್ಯಂತ ಹಿಂದುಳಿದ ತಾಲೂಕುಗಳು 40 ಆಗಿವೆ.ಅವುಗಳಲ್ಲಿ ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಇದ್ದ 21 ಅತ್ಯಂತ ಹಿಂದುಳಿದ ತಾಲೂಕುಗಳು 24 ತಾಲೂಕುಗಳು ಆಗಿವೆ. ಡಾ.ಡಿ.ಎಂ.ನಂಜುಂಡಪ್ಪ ವರದಿಯಲ್ಲಿ ರಾಜ್ಯದಲ್ಲಿ ಇದ್ದ 114 ಹಿಂದುಳಿದ ತಾಲೂಕುಗಳಲ್ಲಿ ಸಿಎಂಡಿಆರ್ ವರದಿಯಂತೆ ಉಳಿದಿರುವುದು 109 ಹಿಂದುಳಿದ ತಾಲೂಕುಗಳು. ಅವುಗಳಲ್ಲಿ 40 ತಾಲೂಕುಗಳು ಅತ್ಯಂತ ಹಿಂದುಳಿದ ತಾಲೂಕುಗಳು (ಅಂದು 39 ತಾಲೂಕುಗಳು), 34 ತಾಲೂಕುಗಳು ಅತೀ ಹಿಂದುಳಿದ ತಾಲೂಕು (ಡಾ.ಡಿ.ಎಂ. ನಂಜುಂಡಪ್ಪನವರ ವರದಿಯಂತೆ 40 ತಾಲೂಕುಗಳು) ಮತ್ತು ಹಿಂದುಳಿದ 35 ತಾಲೂಕುಗಳಾಗಿವೆ. ಡಾ.ಡಿ.ಎಂ.ನಂಜುಂಡಪ್ಪನವರ ವರದಿಯಲ್ಲಿ ಸಾಪೇಕ್ಷವಾಗಿ ಅಭಿವೃದ್ಧಿ ಹೊಂದಿದ ತಾಲೂಕುಗಳು ಎಂದು ಗುರುತಿಸಲಾದ 61 ತಾಲೂಕುಗಳ ಸಂಖ್ಯೆ ಐದು ವರ್ಷಗಳಲ್ಲಿ 66ರಷ್ಟೇ ಆಗಿವೆ. ಅಂದರೆ ಇದೇ ವೇಗದಲ್ಲಿ ಹಿಂದುಳಿದ ತಾಲೂಕುಗಳ ಅಭಿವೃದ್ಧಿ ಮಾಡಿದಲ್ಲಿ ಒಂದು ಶತಮಾನದಲ್ಲಿ ರಾಜ್ಯದಲ್ಲಿರುವ ಪ್ರಾದೇಶಿಕ ಅಸಮಾನತೆ ಸರಿಪಡಿಸಲು ಸಾಧ್ಯವಾಗಬಹುದೇನೋ.

ಹಾಗಾಗಿ ಕರ್ನಾಟಕ ರಾಜ್ಯದಲ್ಲಿ ಡಾ.ಡಿ.ಎಂ.ನಂಜುಂಡಪ್ಪನವರ ವರದಿಯಂತೆ ಲಭ್ಯವಿರುವ 114 ತಾಲೂಕುಗಳ ಅಭಿವೃದ್ಧಿ ಅಸಮಾನತೆಯನ್ನು ಸಮರ್ಪಕವಾಗಿ ಅಭಿವೃದ್ಧಿ ಹೊಂದಿದ ತಾಲೂಕುಗಳನ್ನಾಗಿ ಪರಿವರ್ತನೆಯಾಗುವಂತೆ ಸದರಿ ವರದಿಯನ್ನು ಅನುಷ್ಠಾನ ಮಾಡಬೇಕಿದೆ. ಸರಕಾರ ಡಾ.ಡಿ.ಎಂ.ನಂಜುಂಡಪ್ಪ ವರದಿಯನ್ನು 2007-08ನೇ ಸಾಲಿನಿಂದ ಪ್ರಾರಂಭಿಸಿ 2014-15ನೇ ಸಾಲಿನವರೆಗೆ ಅನುಷ್ಠಾನ ಮಾಡಿದೆ. ಸಿದ್ದರಾಮಯ್ಯನವರ ನೇತೃತ್ವದ ಸರಕಾರ 2015-16ನೇ ಸಾಲಿನಿಂದ ಈ ವರದಿಯನ್ನು ಇನ್ನೂ 5 ವರ್ಷಗಳ ಅವಧಿಗೆ ಮುಂದುವರಿಸಲು ನಿರ್ಧರಿಸಿ ಪ್ರತಿ ವರ್ಷ ಸುಮಾರು 3,000 ಕೋ.ರೂ. ಅನುದಾನ ನಿಗದಿಗೊಳಿಸುತ್ತ ಬಂದಿದೆ. ಈಗಿನ ಸರಕಾರವೂ ಡಾ.ಡಿ.ಎಂ.ನಂಜುಂಡಪ್ಪನವರ ವರದಿಯ ಅನುಷ್ಠಾನ ಮುಂದುವರಿಸಿತು. ಎಲ್ಲಿಯವರೆಗೆ ರಾಜ್ಯದಲ್ಲಿ ಇರುವ ಪ್ರಾದೇಶಿಕ ಅಸಮಾನತೆ ಸಂಪೂರ್ಣವಾಗಿ ಸಮಾನ ಅಭಿವೃದ್ಧಿಯ ಕಡೆಗೆ ಹೋಗುವುದಿಲ್ಲವೋ ಅಲ್ಲಿಯವರೆಗೆ ಡಾ.ಡಿ.ಎಂ.ನಂಜುಂಡಪ್ಪನವರ ವರದಿಯನ್ನು ಅನುಷ್ಠಾನ ಮಾಡಲೇಬೇಕಿದೆ.

ಡಾ.ಡಿ.ಎಂ.ನಂಜುಂಡಪ್ಪನವರ ವರದಿ ಅನುಷ್ಠಾನಕ್ಕಾಗಿ 2007-08ರಿಂದ 2021-22ರ ವರೆಗೆ ಈ 15 ವರ್ಷಗಳಲ್ಲಿ ಸರಕಾರ 40,385.27 ಕೋ.ರೂ.ಗಿಂತ ಹೆಚ್ಚು ಅನುದಾನ ಹಂಚಿಕೆ ಮಾಡಿ ಇಲ್ಲಿಯವರೆಗೆ ಸುಮಾರು 31,273.67 ಕೋ.ರೂ. ಬಿಡುಗಡೆಗೊಳಿಸಿದೆ, ಆದರೆ ಇಲ್ಲಿಯವರೆಗೆ ಒಟ್ಟು 28,987.18 ಕೋ.ರೂ. ಅನುದಾನ ಮಾತ್ರ ಖರ್ಚು ಮಾಡಲಾಗಿದೆ. ವಿಶೇಷ ಅಭಿವೃದ್ಧಿ ಯೋಜನೆಯಡಿಯಲ್ಲಿ ಕೃಷಿ ಇಲಾಖೆಗೆ ಸುಮಾರು 2,057.43 ಕೋ.ರೂ ಅನುದಾನ ನಿಗದಿಗೊಳಿಸಿದ್ದರೂ ಕೇವಲ 1,203.34 ಕೋ.ರೂ ಮಾತ್ರ ಖರ್ಚು ಮಾಡಲಾಗಿದೆ, ಅದರಂತೆ ಗ್ರಾಮೀಣಾಭಿವೃದ್ದಿಗೆ 5,294.26 ಕೋ.ರೂ. ನಿಗದಿಗೊಳಿಸಿ ಕೇವಲ 3,787.00 ಕೋ.ರೂ. ಖರ್ಚು ಮಾಡಲಾಗಿದೆ, ನೀರಾವರಿಗೆ ವರದಿಯಲ್ಲಿ 8,000 ಕೋ.ರೂ ಖರ್ಚು ಮಾಡಲು ಸೂಚಿಸಿದ್ದರೂ ಇಲ್ಲಿಯವರೆಗೆ ಕೇವಲ 6,178.01 ಕೋ.ರೂ ಅನುದಾನ ನಿಗದಿಗೊಳಿಸಿ ಅದರಲ್ಲಿ 4,143.65 ಕೋ.ರೂ ಮಾತ್ರ ಖರ್ಚು ಮಾಡಲಾಗಿದೆ. ಗೃಹ ಇಲಾಖೆಗೆ ವರದಿಯಲ್ಲಿ ನಮೂದಿಸಿಲ್ಲದಿದ್ದರೂ ಸುಮಾರು 172.34 ಕೋ.ರೂ. ವಿಶೇಷ ಅಭಿವೃದ್ಧಿ ಯೋಜನೆಯಡಿಯಲ್ಲಿ ಖರ್ಚು ಮಾಡಲಾಗಿದೆ. ಈ ರೀತಿ ಸರಕಾರಗಳು ವರದಿಯಲ್ಲಿರುವ ಅಂಶಕ್ಕೂ ಅನುಷ್ಠಾನಕ್ಕೂ ಅಜಗಜಾಂತರ ವ್ಯತ್ಯಾಸ ಬರುವ ಹಾಗೆ ಅನುಷ್ಠಾನ ಮಾಡಿರುವುದರಿಂದ ಇಂದಿಗೂ ಈ ಅಭಿವೃದ್ಧಿಯ ಅಸಮಾನತೆ ಹೋಗಲಾಡಿಸಲು ಸಾದ್ಯವಾಗಿಲ್ಲ.

ಈಗ ಸರಕಾರ ಡಾ. ಡಿ.ಎಂ. ನಂಜುಂಡಪ್ಪನವರ ವರದಿಯನ್ನು ಅನುಷ್ಠಾನ ಮಾಡುವುದರಿಂದ ಯಾವುದೇ ಉಪಯೋಗವಾಗಿಲ್ಲ, ಅದನ್ನು ಮುಂದುವರಿಸುವುದು ಸಮರ್ಪಕವಾದುದ್ದಲ್ಲ ಎಂದು ನಿರ್ಣಯಿಸಿ, ನೀತಿ ಆಯೋಗದ ಸೂಚ್ಯಂಕಗಳ ಆಧಾರದಲ್ಲಿ ಹಿಂದುಳಿದ ತಾಲೂಕುಗಳ ಅಭಿವೃದ್ಧಿ ಮಾಡುವುದಾಗಿ ಘೋಷಿಸಿದೆ.ಇದು ಅವೈಜ್ಞಾನಿಕ ವಿಧಾನ, ಇದರಲ್ಲಿ ಯಾವುದೇ ನಿರ್ದಿಷ್ಟ ಗುರಿ, ನಿರ್ದಿಷ್ಠ ಅವಧಿ ನಿಗದಿಯಾಗದೆ ಇರುವುದರಿಂದ ಅಭಿವೃದ್ಧಿ ಹಾಗೂ ಸಮಾನತೆ ಎನ್ನುವುದು ಮರೀಚಿಕೆಯಾಗುವುದು ಬಹಳ ಸ್ಪಷ್ಟವಾಗಿದೆ. ಸರಕಾರಕ್ಕೆ ನಿಜವಾಗಿಯೂ ಪ್ರಾದೇಶಿಕ ಸಮಾನತೆಯ ಕುರಿತು ಕಾಳಜಿ ಇದ್ದಲ್ಲಿ, ಡಾ.ಡಿ.ಎಂ.ನಂಜುಂಡಪ್ಪನವರ ವರದಿಯನ್ನು ಬಜೆಟ್ ಗಾತ್ರದ ಶೇ. 11ರಷ್ಟು ಅನುದಾನ ನೀಡುವುದರ ಮೂಲಕ ವಿಶೇಷ ಅಭಿವೃದ್ಧಿ ಯೋಜನೆಯನ್ನು ಅನುಷ್ಠಾನ ಮಾಡಬೇಕು, ಅಲ್ಲದೇ ಇಲ್ಲಿಯವರೆಗೆ ಆಗಿರುವ ಅಭಿವೃದ್ಧಿಯ ಬದಲಾವಣೆಯ ಕುರಿತು ಅಧ್ಯಯನ ಮಾಡಲು ಒಂದು ಉನ್ನತ ಮಟ್ಟದ ಸಮಿತಿಯನ್ನು ರಚಿಸಿ ವೈಜ್ಞಾನಿಕವಾದ ವರದಿಯನ್ನು ಪಡೆದು ಪ್ರಾದೇಶಿಕ ಸಮಾನತೆ ತರುವ ಕುರಿತು ಚಿಂತಿಸಬೇಕಾಗಿದೆ.

share
ಡಾ. ರಝಾಕ್ ಉಸ್ತಾದ, ರಾಯಚೂರು
ಡಾ. ರಝಾಕ್ ಉಸ್ತಾದ, ರಾಯಚೂರು
Next Story
X