ದೇರಳಕಟ್ಟೆ: ರಾಷ್ಟ್ರೀಯ ಹೋಮಿಯೋಪಥಿ ಸಮ್ಮೇಳನ

ಕೊಣಾಜೆ: ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಫಾ. ಮುಲ್ಲರ್ ಸಂಸ್ಥೆಯ ಸೇವೆ ಹಾಗೂ ಸಮಾಜಕ್ಕೆ ನೀಡಿರುವ ಕೊಡುಗೆ ಅಪಾರವಾಗಿದ್ದು ವಿದ್ಯಾರ್ಥಿಗಳು ಆಧುನಿಕ ವೈದ್ಯಕೀಯ ಪದ್ಧತಿಯ ಸಹಯೋಗದಿಂದ ವೈಜ್ಞಾನಿಕ ಸಂಶೋಧನೆ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಜಂಟಿಯಾಗಿ ಕೆಲಸ ಮಾಡಬೇಕು ಎಂದು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಡಾ. ಸತೀಶ್ ಕುಮಾರ್ ಭಂಡಾರಿ ಹೇಳಿದರು.
ದೇರಳಕಟ್ಟೆಯ ಫಾ. ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾ ವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಎರಡು ದಿನಗಳ ಕಾಲ ನಡೆಯಲಿರುವ 25ನೇ ವಾರ್ಷಿಕ ರಾಷ್ಟ್ರೀಯ ಹೋಮಿಯೋಪಥಿ ಸಮ್ಮೇಳನ "ಇಂಪೆಟಸ್-2022'ನ್ನು ಶುಕ್ರವಾರ ಉದ್ಘಾಟಿಸಿದ ಬಳಿಕ 25ನೇ ರಾಷ್ಟ್ರೀಯ ಹೋಮಿಯೋಪಥಿ ಸಮ್ಮೇಳನದ ಸ್ಮರಣಿಕೆಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಕಂಕನಾಡಿಯ ಫಾ. ಮುಲ್ಲರ್ ಚಾರಿಟೇಬಲ್ ಸಂಸ್ಥೆಯ ನಿರ್ದೇಶಕ ವಂ. ರಿಚರ್ಡ್ ಅಲೋಶಿಯಸ್ ಕುವೆಲ್ಲೊ ಹಾಗೂ ಫಾ. ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಹಾಗೂ ಫಾದರ್ ಮುಲ್ಲರ್ ಹೋಮಿಯೋಪಥಿ ಫಾರ್ಮಸ್ಯೂಟಿಕಲ್ ಡಿವಿಜನ್ನ ಆಡಳಿತಾಧಿಕಾರಿ ವಂ. ರೋಶನ್ ಕ್ರಾಸ್ತಾ ಹೊಸ ಔಷಧಿ ಉತ್ಪನ್ನಗಳನ್ನು ಹಾಗೂ ಸಂಚಿಕೆಯ ಪರಿಚಯಾತ್ಮಕ ಸಂಪುಟವನ್ನು ಬಿಡುಗಡೆಗೊಳಿಸಿದರು.
ಪ್ರಿನ್ಸಿಪಾಲ್ ಡಾ. ಇ.ಎಸ್.ಜೆ. ಪ್ರಭುಕಿರಣ್, ಸ್ಮರಣಿಕಾ ಸಮಿತಿಯ ಅಧ್ಯಕ್ಷೆ ಡಾ. ರೈಸಾ ಚೆರಿಯನ್, ವೈಸ್ ಪ್ರಿನ್ಸಿಪಾಲ್ ಡಾ. ವಿಲ್ಮಾ ಮೀರಾ ಡಿಸೋಜ ಮತ್ತು ವೈದ್ಯಕೀಯ ಅಧೀಕ್ಷಕ ಡಾ. ಗಿರೀಶ್ ನಾವಡ ಹಾಗೂ ವೈಜ್ಞಾನಿಕ ಸಮಿತಿಯ ಸಂಯೋಜಕ ಡಾ. ಕುರಿಯನ್ ಪಿ.ಜೆ. ಉಪಸ್ಥಿತರಿದ್ದರು.
ಡಾ. ರಾಜಚಂದ್ರ ಮತ್ತು ಡಾ. ಮೇಬಲ್ ಅಂದ್ರಾದೆ ಕಾರ್ಯಕ್ರಮ ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ಡಾ. ವಿವೇಕ್ ಶಕ್ತಿಧರನ್ ವಂದಿಸಿದರು.
"ಫಾ. ಮುಲ್ಲರ್ ಹೋಮಿಯೋಪಥಿ ಫಾರ್ಮಸ್ಯೂಟಿಕಲ್ ಡಿವಿಜನ್ ತಮ್ಮ ಗುಣಮಟ್ಟದ ಉತ್ಪನ್ನಗಳು ಮತ್ತು ಔಷಧಿಗಳಿಗಾಗಿ ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ಸಂಸ್ಥೆ ತನ್ನ ಉತ್ಪನ್ನಗಳನ್ನು ಸದಾ ಆಧುನೀಕರಿಸುವ, ನವೀಕರಿಸುವ ಮತ್ತು ಉತ್ತಮ ಉತ್ಪನ್ನಗಳನ್ನು ರಚಿಸುವ ಪ್ರಕ್ರಿಯೆಯಲ್ಲಿದೆ".
- ವಂ. ಫಾ. ರೋಶನ್ ಕ್ರಾಸ್ತಾ, ಆಡಳಿತಾಧಿಕಾರಿ